ಕೇರಳದಲ್ಲೂ ಮತ್ತೆ ಕೋವಿಡ್ ಪ್ರಕರಣಗಳ ಏರಿಕೆ: ಜಾಗರೂಕತೆಗೆ ಸಚಿವೆ ಕರೆ

ಕೇರಳ:ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಮತ್ತೆ ಏರಿಕೆ ಕಾಣುತ್ತಿದ್ದು ಮೇ ತಿಂಗಳಲ್ಲಿ ಇದುವರೆಗೆ ರಾಜ್ಯಾದ್ಯಂತ 182 ಸೋಂಕುಗಳು ವರದಿಯಾಗಿವೆ. ಈ ಹೆಚ್ಚಳದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಒತ್ತಾಯಿಸಿದ್ದಾರೆ.

ಹಾಂಗ್ ಕಾಂಗ್ ಮತ್ತು ಸಿಂಗಾಪುರದಂತಹ ದೇಶಗಳಲ್ಲಿನ ಪರಿಸ್ಥಿತಿಯನ್ನು ಗಮನಿಸಿದ ಜಾರ್ಜ್, ರಾಜ್ಯದ ಸನ್ನದ್ಧತೆಯ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲಿ ರೋಗವನ್ನು ಹರಡುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಓಮಿಕ್ರಾನ್ ಜೆಎನ್1 ಉಪ ರೂಪಾಂತರಗಳಾದ ಎಲ್ಎಫ್.7 ಮತ್ತು ಎನ್ಬಿ.1.8 ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ ಪ್ರಕರಣದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತಿವೆ.
ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ ಮತ್ತು ಕೇರಳದಲ್ಲೂ ಕೋವಿಡ್ ಹೆಚ್ಚಾಗುವ ಸಾಧ್ಯತೆಯಿದೆ. ತೀವ್ರತೆ ಹೆಚ್ಚಿಲ್ಲದಿದ್ದರೂ, ಆತ್ಮರಕ್ಷಣೆ ಮುಖ್ಯವಾಗಿದೆ ಎಂದು ಸಚಿವೆ ಹೇಳಿದ್ದಾರೆ.
ಕೇರಳದಲ್ಲಿ ಮೇ ತಿಂಗಳಲ್ಲಿ ದಾಖಲಾದ 182 ಹೊಸ ಪ್ರಕರಣಗಳಲ್ಲಿ ಅತಿ ಹೆಚ್ಚು ಕೊಟ್ಟಾಯಂನಲ್ಲಿ 57 ಪ್ರಕರಣಗಳು ವರದಿಯಾಗಿವೆ. ಎರ್ನಾಕುಲಂನಲ್ಲಿ 34 , ತಿರುವನಂತಪುರಂನಲ್ಲಿ 30 ಪ್ರಕರಣಗಳು ದಾಖಲಾಗಿವೆ. ಉಳಿದ ಪ್ರಕರಣಗಳು ಇತರ ಜಿಲ್ಲೆಗಳಲ್ಲಿ ಹರಡಿವೆ.