ಚೂಡಿದಾರ್ ಧರಿಸಿದ ದಂಪತಿಗೆ ರೆಸ್ಟೋರೆಂಟ್ನಲ್ಲಿ ಪ್ರವೇಶ ನಿರಾಕರಣೆ-ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಕೆಲವೊಂದು ಹೋಟೆಲ್, ಪಬ್, ಕ್ಲಬ್, ರೆಸಾರ್ಟ್ ಅಥವಾ ರೆಸ್ಟೋರೆಂಟ್ಗಳಲ್ಲಿ ಡ್ರೆಸ್ ಕೋಡ್ಗಳನ್ನು ಫಾಲೋ ಮಾಡಲಾಗುತ್ತಿದೆ. ಆದರೆ, ಇದರಿಂದ ಗ್ರಾಹಕರಿಗೆ ಸಮಸ್ಯೆ ಉಂಟಾದ ಹಲವು ಘಟನೆಗಳು ನಡೆದಿವೆ. ಅದೇ ರೀತಿ ಇಲ್ಲೊಂದು ರೆಸ್ಟೋರೆಂಟ್ನಲ್ಲಿ ಚೂಡಿದಾರ್ ಧರಿಸಿಕೊಂಡು ಬಂದಿದ್ದಕ್ಕೆ ಪ್ರವೇಶ ನಿಷೇಧಿಸಿದ ಘಟನೆ ನಡೆದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಮಾಹಿತಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ನಡೆದಿರುವುದು ನಮ್ಮ ದೇಶದ ರಾಜಧಾನಿ ನವದೆಹಲಿಯಲ್ಲಿ. ದೆಹಲಿಯ ರೆಸ್ಟೋರೆಂಟ್ವೊಂದು ಚೂಡಿದಾರ್ ಧರಿಸಿದ್ದ ದಂಪತಿಗೆ ಪ್ರವೇಶ ನಿರಾಕರಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ರೆಸ್ಟೋರೆಂಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪಿತಂಪುರದಲ್ಲಿರುವ ಟುಬಾಟ ಬಾರ್ ಆಯಂಡ್ ರೆಸ್ಟೋರೆಂಟ್ನಲ್ಲಿ ಆಗಸ್ಟ್ 3ರಂದು ಈ ಘಟನೆ ನಡೆದಿದೆ.
ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ, ಪುರುಷ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರೆ, ಮಹಿಳೆ ಸಲ್ವಾರ್-ಕಮೀಜ್ ಧರಿಸಿದ್ದಾರೆ. ‘ಪಾಶ್ಚಿಮಾತ್ಯ ಉಡುಗೆ ತೊಟ್ಟವ್ರನ್ನ ಒಳಗೆ ಬಿಟ್ಟು ನಮ್ಮ ದೇಸಿ ಉಡುಗೆಗೆ ನೋ ಎಂಟ್ರಿ ಅಂದ್ರು’ ಅಂತ ದಂಪತಿ ಆರೋಪಿಸಿದ್ದಾರೆ. ‘ಈ ಡ್ರೆಸ್ ಕೆಟ್ಟದ್ದಾ?’ ಅಂತ ವಿಡಿಯೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ ರೆಸ್ಟೋರೆಂಟ್ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ. ‘ನಮ್ಮನ್ನ ಒಳಗೆ ಬಿಡಲಿಲ್ಲ. ಆದ್ರೆ ಶಾರ್ಟ್ಸ್ ಹಾಕಿದವ್ರನ್ನ ಒಳಗೆ ಬಿಡ್ತಾರೆ’ ಅಂತಲೂ ಆ ವ್ಯಕ್ತಿ ಹೇಳಿದ್ದಾರೆ.
‘ಈ ರೆಸ್ಟೋರೆಂಟ್ಗೆ ಕಾಲು ತೋರಿಸೋರನ್ನ ಮಾತ್ರ ಒಳಗೆ ಬಿಡ್ತಾರಾ?’ ಅಂತ ವಿಡಿಯೋ ತೆಗೆದವರು ಪ್ರಶ್ನಿಸಿದ್ದಾರೆ. ‘ನಮ್ಮ ರಾಷ್ಟ್ರಪತಿ, ದೆಹಲಿ ಸಿಎಂ ಸೀರೆ ಉಟ್ಕೊಂಡು ಬಂದ್ರೆ ಅವ್ರಿಗೂ ನೋ ಎಂಟ್ರಿ ಅಂತೀರಾ?’ ಅಂತಲೂ ಕೇಳಿದ್ದಾರೆ. ರೆಸ್ಟೋರೆಂಟ್ ಈ ಬಗ್ಗೆ ಏನೂ ಹೇಳಿಲ್ಲ. ಆದ್ರೆ ಡ್ರೆಸ್ ಕೋಡ್ ನಿಯಮದ ಪ್ರಕಾರ ದಂಪತಿಗೆ ಪ್ರವೇಶ ನಿರಾಕರಿಸಿರಬಹುದು ಅಂತ ಅಂದಾಜಿಸಲಾಗಿದೆ.
ವಿಡಿಯೋ ವೈರಲ್ ಆದ ಬಳಿಕ ದೆಹಲಿ ಸಚಿವ ಕಪಿಲ್ ಮಿಶ್ರಾ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಇನ್ಮೇಲೆ ಡ್ರೆಸ್ ಕೋಡ್ ಆಧಾರದ ಮೇಲೆ ಯಾವುದೇ ನಿರ್ಬಂಧ ಇರಲ್ಲ. ಭಾರತೀಯ ಉಡುಗೆ ತೊಟ್ಟವ್ರನ್ನೂ ಸ್ವಾಗತಿಸ್ತೇವೆ ಅಂತ ರೆಸ್ಟೋರೆಂಟ್ ಒಪ್ಪಿಕೊಂಡಿದೆ’ ಅಂತ ಅವರು ಹೇಳಿದ್ದಾರೆ.
