ಭಾರತದಲ್ಲಿ ತಾಲಿಬಾನ್ ಸಚಿವನ ವಿವಾದ: ಸುದ್ದಿಗೋಷ್ಠಿಯಿಂದ ಮಹಿಳಾ ಪತ್ರಕರ್ತರಿಗೆ ನಿಷೇಧ; ತೀವ್ರ ಆಕ್ರೋಶ

ಮಹಿಳಾ ಪತ್ರಕರ್ತರ ಸುದ್ದಿಗೋಷ್ಠಿಯಿಂದ ಬ್ಯಾನ್ ಮಾಡಿದ ಅಮೀರ್ ಖಾನ್ ಮುತ್ತಾಖಿ
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಸಂಪೂರ್ಣ ಬ್ರೇಕ್ ಹಾಕಿರುವ ಅಫ್ಘಾನಿಸ್ತಾನ್ ವಿದೇಶಾಂಗ ಸಚಿವ, ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಅಮೀರ್ ಖಾನ್ ಮುತ್ತಾಖಿ ಅವರು, ತಮ್ಮ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ಪ್ರವೇಶ ನಿರಾಕರಿಸುವ ಮೂಲ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆದುತ್ತಿರುವ ತಾಲಿಬಾನ್ ಆಡಳಿತವೂ ಮಹಿಳೆಯರನ್ನು ಶಿಕ್ಷಣದಿಂದ ಹಿಡಿದು ಪ್ರತಿಯೊಂದರಿಂದಲೂ ವಂಚಿತಗೊಳಿಸಿದೆ. ಅಲ್ಲಿ ಮುಖ ತೋರಿಸುವುದರಿಂದ ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದಕ್ಕೂ ಮಹಿಳೆಯರಿಗೆ ಯಾವುದೇ ಅನುಮತಿ ಇಲ್ಲ. ಇದೇ ಮನಸ್ಥಿತಿಯನ್ನು ಹೊಂದಿದ್ದ ಕಾರಣ ಭಾರತದ ಜೊತೆ ದ್ವೀಪಕ್ಷೀಯ ಮಾತುಕತೆಗಾಗಿ ನವದೆಹಲಿಗೆ ಬಂದಿದ್ದ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಾತುಕತೆಯ ನಂತರ ನಡೆಸಿದ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ನಿರ್ಬಂಧ ಹೇರಿದ್ದಾರೆ. ಇದು ಭಾರಿ ವಿವಾದಕ್ಕೀಡಾಗಿದ್ದು, ಮಹಿಳಾ ಪತ್ರಕರ್ತರು ಸಾಮಾಜಿಕ ಜಾಲತಾಣದಲ್ಲಿ ಮುತ್ತಾಕಿ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಅಫ್ಘಾನಿಸ್ತಾನ್ ವಿದೇಶಾಂಗ ಸಚಿವ ಮುತ್ತಾಕಿ ನಿರ್ಧಾರಕ್ಕೆ ತೀವ್ರ ಅಸಮಾಧಾನ
ಇದು ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಅನೇಕರು ಅಫ್ಘಾನಿಸ್ತಾನ್ ವಿದೇಶಾಂಗ ಸಚಿವ ಮುತ್ತಾಕಿ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುತ್ತಾಕಿ ಅವರು ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಸಂಪೂರ್ಣ ನಿರ್ಬಂಧ ಹೇರಿರುವ ತಾಲಿಬಾನ್ ಸರ್ಕಾರದ ಭಾಗವಾಗಿದ್ದಾರೆ. ಗುರುವಾರ ನವದೆಹಲಿಗೆ ಆಗಮಿಸಿದ ಮುತ್ತಾಕಿ ಶುಕ್ರವಾರ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಾತುಕತೆ ನಡೆಸಿದರು. ಎರಡು ದೇಶಗಳ ನಡುವಿನ ಸಂಬಂಧಗಳ ದೊಡ್ಡ ಪುನರ್ರಚನೆ ಎಂದು ಪರಿಗಣಿಸಲಾದ ಈ ಸಭೆಯಲ್ಲಿ ಭಾರತವೂ, ಕಾಬೂಲ್ನಲ್ಲಿರುವ ತಾಂತ್ರಿಕ ಕಾರ್ಯಾಚರಣೆಯನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿತು, ಇದನ್ನು ಅಫ್ಘಾನಿಸ್ತಾನ ವಿದೇಶಾಂಗ ಸಚಿವರು ಸ್ವಾಗತಿಸಿದರು.
ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಭಾರತದ ತಾಂತ್ರಿಕ ಮಿಷನ್ ಅನ್ನು ರಾಯಭಾರ ಕಚೇರಿಯ ಸ್ಥಾನಮಾನಕ್ಕೆ ಮೇಲ್ದರ್ಜೆಗೇರಿಸಿರುವುದಾಗಿ ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಜೈಶಂಕರ್ ಸಭೆಯಲ್ಲಿ ಹೇಳಿದರು.
ಆದರೆ ಇದಾದ ನಂತರ ಮಧ್ಯಾಹ್ನ ಅಫ್ಘಾನಿಸ್ತಾನದ ರಾಯಭಾರ ಕಚೇರಿಯಲ್ಲಿ ಮುತ್ತಕಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಹಿಳೆಯರು ಹಾಜರಾಗುವುದಕ್ಕೆ ನಿರ್ಬಂಧ ಹೇರಲಾಯ್ತು. ಈ ಬಗ್ಗೆ ಕೆಲ ಆಂಗ್ಲ ಮಾಧ್ಯಮಗಳು ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿಯೊಂದಿಗೆ ಈ ವಿಚಾರ ಪ್ರಸ್ತಾಪಿಸಿದರು ಅವರು ಪ್ರತಿಕ್ರಿಯಿಸದೇ ಸುಮ್ಮನಾಗಿದ್ದಾರೆ. ತರ ಹಲವಾರು ಪತ್ರಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಈ ಸಭೆಗಾಗಿ ಎಲ್ಲಾ ಮಹಿಳಾ ವರದಿಗಾರರು ಡ್ರೆಸ್ ಕೋಡ್ ಅನ್ನು ಕೂಡ ಪಾಲಿಸಿದ್ದರು. ಆದರೂ ಪ್ರವೇಶ ನಿರಾಕರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ, ಭಾರತದ ವಿರುದ್ಧ ಹಲವಾರು ದಾಳಿಗಳನ್ನು ನಡೆಸಿರುವ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ನಂತಹ ಭಯೋತ್ಪಾದಕ ಗುಂಪುಗಳಿಗೆ ತಮ್ಮ ದೇಶವು ಯಾವುದೇ ಜಾಗವನ್ನು ನೀಡುವುದಿಲ್ಲ ಎಂದು ಹೇಳಿದರು ಮತ್ತು ಪಾಕಿಸ್ತಾನವೂ ಸಹ ಅದೇ ರೀತಿ ಮಾಡುವಂತೆ ಒತ್ತಾಯಿಸಿದರು.
ಅವರಲ್ಲಿ ಒಬ್ಬರೂ ಅಫ್ಘಾನಿಸ್ತಾನದಲ್ಲಿಲ್ಲ. ದೇಶದಲ್ಲಿ ಒಂದು ಇಂಚು ಭೂಮಿಯೂ ಅವರ ನಿಯಂತ್ರಣದಲ್ಲಿಲ್ಲ. ಅಫ್ಘಾನಿಸ್ತಾನ ಶಾಂತಿಗಾಗಿ ಮಾಡಿದಂತೆ ಇತರ ದೇಶಗಳು ಸಹ ಅಂತಹ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಅವರು ಪಾಕಿಸ್ತಾನವನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾ ಹೇಳಿದರು. ದೇಶದಲ್ಲಿ ಇತ್ತೀಚೆಗೆ ನಡೆದ ದಾಳಿಗೆ ಪಾಕಿಸ್ತಾನವನ್ನು ದೂಷಿಸಿದ ಮುತ್ತಕಿ, ದೇಶದಲ್ಲಿ ಶಾಂತಿಯ ಸಮಸ್ಯೆ ಇರಬಾರದು ಎಂದು ಹೇಳಿದರು. ಅಫ್ಘಾನಿಸ್ತಾನ ಭಾರತವನ್ನು ಆಪ್ತ ಸ್ನೇಹಿತನಂತೆ ನೋಡುತ್ತದೆ. ಅಫ್ಘಾನಿಸ್ತಾನವು ಪರಸ್ಪರ ಗೌರವ, ವ್ಯಾಪಾರ ಮತ್ತು ಜನರಿಂದ ಜನರ ಸಂಬಂಧಗಳ ಆಧಾರದ ಮೇಲೆ ಸಂಬಂಧಗಳನ್ನು ಬಯಸುತ್ತದೆ ಎಂದು ಸಚಿವರು ಹೇಳಿದರು.