ಪಹಲ್ಗಾಮ್ ಪ್ರತೀಕಾರದ ಬಳಿಕ ಕಾಂಗ್ರೆಸ್ ಶಾಂತಿ ಟ್ವೀಟ್ ಚರ್ಚೆಗೆ ಗ್ರಾಸ: ನೆಟ್ಟಿಗರಿಂದ ಕಿಡಿ, ಟ್ವೀಟ್ ಡಿಲೀಟ್

ಬೆಂಗಳೂರು:ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತದ ಮೂರು ಸೇನೆಗಳು ಜಂಟಿಯಾಗಿ ಆಪರೇಷನ್ ಸಿಂಧೂರ ಹೆಸರಿಲ್ಲಿ ದಾಳಿ ನಡೆಸಿ ಪಾಕಿಸ್ತಾನದ 9 ಉಗ್ರರ ಶಿಬಿರಗಳನ್ನು ಉಡೀಸ್ ಮಾಡಿದೆ. ಈ ದಾಳಿಯಲ್ಲಿ ಸುಮಾರು 80ಕ್ಕೂ ಉಗ್ರರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಭಾರತದ ದಾಳಿ ವಿಷಯ ತಿಳಿಯುತ್ತಿದ್ದಂತೆ ದೇಶದ ಮೂಲೆ ಮೂಲೆಯಲ್ಲಿಯೂ ಸಂಭ್ರಮಾಚರಣೆ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕರ್ನಾಟಕ ಕಾಂಗ್ರೆಸ್ ಎಕ್ಸ್ ಖಾತೆಯಿಂದ ಮಾಡಲ್ಪಟ್ಟ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಮ್ಮ ತಂಟೆಗೆ ಬಂದ್ರೆ ನುಗ್ಗಿ ಹೊಡೆಯುತ್ತವೆ ಎಂಬ ಸಂದೇಶವನ್ನು ವೈರಿ ರಾಷ್ಟ್ರಗಳಿಗೆ ಭಾರತ ರವಾನಿಸಿದೆ. ಹಾಗಾದ್ರೆ ಕಾಂಗ್ರೆಸ್ ಮಾಡಿದ ಟ್ವೀಟ್ನಲ್ಲಿ ಏನಿದೆ ಎಂಬುದನ್ನು ನೋಡೋಣ ಬನ್ನಿ.
ಚರ್ಚೆಗೆ ಗ್ರಾಸವಾದ ಕಾಂಗ್ರೆಸ್ ಟ್ವೀಟ್
ಕರ್ನಾಟಕ ಕಾಂಗ್ರೆಸ್ ಖಾತೆಯಲ್ಲಿ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು ಮಹಾತ್ಮ ಗಾಂಧಿಯವರ ಹೇಳಿಕೆಯನ್ನು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ನಮಸ್ಕಾರ ರಾಹುಲ್ ಮತ್ತು ಮಲ್ಲಿಕಾರ್ಜುನ್ ಸರ್, ನೀವು ಕರ್ನಾಟಕ ಕಾಂಗ್ರೆಸ್ ಮೂಲಕ ಬೋಧಿಸುತ್ತಿರುವುದು ಇದನ್ನೇನಾ? ಈ ಟ್ವೀಟ್ನ ಸಮಯಕ್ಕೆ ನೀವು ಒಪ್ಪುತ್ತೀರಾ? ಡಿಕೆಎಸ್ ಹೆಚ್ಚು ಜವಾಬ್ದಾರಿಯುತ ಎಂದು ನಾನು ಭಾವಿಸಿದೆ ಆದರೆ ಅವರ ಸಂಘಟನೆ ಬೇರೆ ಯಾವುದೋ ಗ್ರಹದಲ್ಲಿದೆ ಎಂದು ತೋರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಶಾಂತಿಯನ್ನೇ ತರೋದಕ್ಕೆನೇ ಸೇನೆ ಹೋಗಿರೋದು ಅಂತ ಬುದ್ಧಿವಂತರು ಯಾರಾದ್ರು ಆ ಪಕ್ಷದಲ್ಲಿ ಇದ್ರೆ ಹೇಳಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಮಹಾತ್ಮ ಗಾಂಧೀಜೀ ವಿಚಾರ ಸರಿ ಆದರೆ ಈಗ ಹೇಳೋಕ್ಕೆ ಆಗುತ್ತಾ ನಮ್ಮ 28 ಜನರನ್ನು ಹತ್ಯೆ ಮಾಡಿದ್ದೀರಿ ಬನ್ನಿ ಇನ್ನೂ ಸಾವಿರ ಜನರ ಬಲಿ ತೆಗೆದುಕೊಳ್ಳಿ ಅಂತಾ? ನಮ್ಮ ಶತ್ರು ಮತಿಯ ರಾಕ್ಷಸ ಅವರಿಗೆ ತತ್ವ ಬೋಧನೆನಾ? ಅಥವಾ ನಿಮ್ಮ ಮನಸ್ಸಿನಲ್ಲೂ ಇನ್ನೂ ಒಂದು ಕೋಮಿನವರು ಇನ್ನೂ ಭಾರತದ ಪ್ರತ್ಯುತ್ತರವನು ಒಪ್ಪುವುದಿಲ್ಲ ಅಂತಾ ರಾಜಕೀಯ ಮರೀಚಿಕೆಯೇ ಎಂದು ಗುರುದತ್ ಎಂಬವರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿದ್ದಾರೆ.
ಮಹೇಶ್ ಅರಳಿ ಎಂಬವರು ಹೆದರಿಕೆಯ ಮತ್ತು ಹಿಂಸೆಯ ನಡುವೆ ಆಯ್ಕೆಯೊಂದೇ ಇರುವ ಸ್ಥಿತಿಯಲ್ಲಿ ನಾನು ಹಿಂಸೆಯನ್ನು ಶಿಫಾರಸು ಮಾಡುತ್ತೇನೆ ಎಂದು ನಂಬಿದ್ದೇನೆ ಎಂದು ಮಹಾತ್ಮ ಗಾಂಧೀಜಿಯವರ (“ದಾ ಡಾಕ್ಟ್ರಿನ್ ಆಫ್ ದ ಸ್ವೋರ್ಡ್”, ಯಂಗ್ ಇಂಡಿಯಾ, 11 ಆಗಸ್ಟ್ 1920) ಮತ್ತೊಂದು ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಆಕ್ರೋಶ
ಕಾಂಗ್ರೆಸ್ ಟ್ವೀಟ್ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯಿಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಮಯದಲ್ಲಿಯೂ ರಾಜಕಾರಣವನ್ನೇ ಮಾಡಿದೆಯೇ ಹೊರತು ರಾಷ್ಟ್ರಕರಣ ಮಾಡಿಲ್ಲ. ಕರ್ನಾಟಕ ಕಾಂಗ್ರೆಸ್ ತುಂಬಾ ಕೆಟ್ಟದಾಗಿದ್ದು, ಈ ಟ್ವೀಟ್ ಮೂಲಕ ಮುಸಲ್ಲಾನರನ್ನು ಖುಷಿಪಡಿಸಬಹುದು ಅಂತ ಅಂದುಕೊಂಡಿರಬಹುದು. ಹಿಂದೂಗಳ ಮುಂದೆ ಮುಸ್ಲಿಮರು ನಿಕೃಷ್ಟ ಎಂದು ತೋರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇಂದು ಭಾರತದ ಯಾವ ಮುಸ್ಲಿಮರು ಪಾಕಿಸ್ತಾನದ ಮೇಲೆ ಯುದ್ಧ ಆಗಬಾರದು ಎಂದು ಬಯಸಲ್ಲ. ಯಾರಾದರೂ ಯುದ್ಧ ಬೇಡ ಅನ್ನೋ ಮುಸ್ಲಿಂ ವ್ಯಕ್ತಿಯನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೈಯಲ್ಲಿ ಒಂದು ಲಾಠಿಯನ್ನು ಹಿಡಿಯದ ಸಾಮಾನ್ಯ 26 ಜನರನ್ನು ಗುಂಡಿಕ್ಕಿ ಕೊಂದಿರೋದಕ್ಕೆ ಭಾರತದ ಮುಸ್ಲಿಮರಿಗೂ ಆಕ್ರೋಶವಿದೆ. ಭಾರತದ ಪ್ರತಿಯೊಬ್ಬರು ಪಹಲ್ಗಾಂ ದಾಳಿಗೆ ಪ್ರತೀಕಾರ ಆಗಬೇಕೆಂದು ಬಯಸುತ್ತಾರೆ. ಕಾಂಗ್ರೆಸ್ನವರ ಮನಸ್ಥಿತಿ ತುಂಬಾ ಕಚಡಾ ಆಗಿದೆ ಎಂದು ಕಿಡಿಕಾರಿದರು.
ಯುದ್ಧ ಕಾಲದಲ್ಲಿ ಶಾಂತಿ ಮಂತ್ರ ಅಗತ್ಯವಿಲ್ಲ ಅನ್ನೋದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕಿದೆ. ಮುಂದಿನ ಚುನಾವಣೆಯನ್ನು ಗೆಲ್ಲೋದು ಹೇಗೆ ಅನ್ನೋ ವಿಚಾರದಲ್ಲಿಯೇ ಕಾಂಗ್ರೆಸ್ ಇರುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಇನ್ನ ತನ್ನ ಟ್ವೀಟ್ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಟ್ವೀಟ್ ಡಿಲೀಟ್ ಮಾಡಿದೆ.