ಚಿಕನ್ ಲಿವರ್ ಸಿಗದ್ದಕ್ಕೆ ವಾರ್ಡನ್ ವಿರುದ್ಧ ದೂರು!

ತೆಲಂಗಾಣ: ಭಾನುವಾರ ಬಂತೆಂದರೆ ನಾನ್ ವೆಜ್ ಇರಲೇ ಬೇಕು. ಅದರಲ್ಲೂ ಚಿಕನ್ ಇದ್ದು ಬಿಟ್ಟರೆ ಒಂದು ತುತ್ತು ಹೆಚ್ಚೇ ಸೇರುತ್ತದೆ. ಇನ್ನು ಹಾಸ್ಟೆಲ್ನಲ್ಲಿರುವ ಮಕ್ಕಳಿಗೂ ಭಾನುವಾರ ಬಂತೆಂದರೆ ಖುಷಿಯೋ ಖುಷಿ. ನಾನ್ ವೆಜ್ ಇಷ್ಟಪಡುವ ಮಕ್ಕಳು ವಾರಾಂತ್ಯಾಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಚಿಕನ್ ಲಿವರ್ ವಿಚಾರಕ್ಕಾಗಿ ಈ ಹಾಸ್ಟೆಲ್ ಸುದ್ದಿಯಾಗಿದೆ. ಹೌದು , ಹಾಸ್ಟೆಲ್ ನ ವಿದ್ಯಾರ್ಥಿಗಳು ಚಿಕನ್ ಲಿವರ್ ಪೀಸ್ ಹಾಕಲಿಲ್ಲ ಎಂದು ವಾರ್ಡನ್ ಹಾಗೂ ಅಡುಗೆಯವರ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವಿಚಿತ್ರ ಘಟನೆಯೂ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ (Mahabubabad district of Telangana) ವಾರಂಗಲ್ ಇನುಗುರ್ಥಿಎಸ್ಸಿ ಬಾಲಕರ ಹಾಸ್ಟೆಲ್ನಲ್ಲಿ (Warangal Ingurthy Hostel) ನಡೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.


ಏನಿದು ಘಟನೆ?
ಇನುಗುರ್ತಿ ಎಸ್ಸಿ ಬಾಲಕರ ಹಾಸ್ಟೆಲ್ನಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ದೈನಂದಿನ ಮೆನು ಪ್ರಕಾರ, ವಿದ್ಯಾರ್ಥಿಗಳಿಗೆ ಭಾನುವಾರ ನಾನ್ ವೆಜ್ ಊಟ ನೀಡಬೇಕು ಎನ್ನುವುದಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ವಾರ್ಡನ್ ಅವರನ್ನು ಕೇಳಿದಾಗ ಎರಡು ಕಿಲೋ ಚಿಕನ್ ಲಿವರ್ ಖರೀದಿಸಿಕೊಂಡು ಬರಲು ಹೇಳಿದ್ದಾರೆ.
ಚಿಕನ್ ಲಿವರ್ ಖರೀದಿಸಿ ತಂದು ಅಡುಗೆಯವರಿಗೆ ನೀಡಿದ್ದು, ಆದರೆ ಊಟಕ್ಕೆ ಒಂದೇ ಒಂದು ಚಿಕನ್ ಲಿವರ್ ಪೀಸ್ ವಿದ್ಯಾರ್ಥಿಗಳಿಗೆ ಹಾಕಿಲ್ಲ. ಇದರಿಂದ ಹಾಸ್ಟೆಲ್ ವಿದ್ಯಾರ್ಥಿಗಳು ಎಂಪಿಡಿಒ ಬಂಡಾರು ಪಾರ್ಥಸಾರಥಿ ಅವರಿಗೆ ದೂರು ನೀಡಿದ್ದು, ಹಾಸ್ಟೆಲ್ ವಾರ್ಡನ್ ಹಾಗೂ ಅಡುಗೆಯವರು ನಮಗೆ ತಂದ ಚಿಕನ್ ಲಿವರ್ ತಿಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಊಟದ ಮೆನು ಜಾರಿಗೆ ಬರುವಂತೆ ಮನವಿ ಮಾಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗಿದೆ.