Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಕೋಡ್‌ವರ್ಡ್’ ಹಣ ವಸೂಲಿಯಲ್ಲಿ ಮಾಜಿ ಹೆಡ್‌ಕಾನ್ಸ್‌ಟೆಬಲ್-ಐಪಿಎಸ್ ಅಧಿಕಾರಿ ನಂಟು ಬಯಲು!

Spread the love

ಕೋಡ್‌ ವರ್ಡ್‌ ರಹಸ್ಯ ಬಯಲು :  ವಾಟ್ಸಾಪ್‌ನಲ್ಲೇ ಡೀಲ್‌ ಮಾಡುತ್ತಿದ್ದ ಐಪಿಎಸ್‌ ಶ್ರೀನಾಥ್‌ ಜೋಶಿ, ನಿಂಗಪ್ಪ-ಕ್ರಿಪ್ಟೋ ಕರೆನ್ಸಿಯ 13 ವ್ಯಾಲೆಟ್‌ ಫ್ರೀಜ್‌

ಬೆಂಗಳೂರು: ಅಬಕಾರಿ ಇಲಾಖೆ ಅಧಿಕಾರಿಗಳಿಂದ ಕೋಡ್‌ ವರ್ಡ್‌ ಬಳಸಿ ಹಣ ವಸೂಲು ಮಾಡುತ್ತಿದ್ದ ಮಾಜಿ ಹೆಡ್‌ಕಾನ್ಸ್‌ಟೆಬಲ್‌ ಜಿ.ನಿಂಗಪ್ಪ, ಈ ಮಾಹಿತಿಯನ್ನು ಲೋಕಾಯುಕ್ತ ಎಸ್ಪಿ ಆಗಿದ್ದ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಮಹದೇವ ಜೋಶಿಗೆ ತಲುಪಿಸುತ್ತಿದ್ದ ಎಂಬ ಸ್ಫೋಟಕ ವಿಚಾರ ಬಯಲಾಗಿದೆ.

ಲೋಕಾಯುಕ್ತ ದಾಳಿ ನೆಪದಲ್ಲಿಅಬಕಾರಿ ಇಲಾಖೆ ಅಧಿಕಾರಿಗಳಿಂದ ಪ್ರತಿ ತಿಂಗಳು ಹಣ ವಸೂಲು ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿತನಾಗಿ ಜಾಮೀನಿನ ಮೇರೆಗೆ ಬಿಡುಗಡೆಯಾಗಿರುವ ಆರೋಪಿ ನಿಂಗಪ್ಪ ಹಾಗೂ ಐಪಿಎಸ್‌ ಅಧಿಕಾರಿ ನಡುವಣ ನಂಟು ತನಿಖೆಯಲ್ಲಿ ಬಗೆದಷ್ಟೂ ಬಯಲಾಗುತ್ತಿವೆ.

ಆರೋಪಿ ನಿಂಗಪ್ಪನ ಮೊಬೈಲ್‌ ಜಪ್ತಿ ಮಾಡಿ ವೈಜ್ಞಾನಿಕ ತಾಂತ್ರಿಕ ವಿಶ್ಲೇಷಣೆ ನಡೆಸಲಾಗಿದೆ. ”ದಾಳಿಗೆ ಬೆದರಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಹಣ ಕೊಡಲು ಒಪ್ಪಿಕೊಂಡಿದ್ದು, ಎಷ್ಟು ಮೊತ್ತದ ಹಣ ನೀಡಲಿದ್ದಾರೆ ಎಂಬುದರ ಬಗ್ಗೆ ಕೋಡ್‌ವರ್ಡ್‌ ಮುಖಾಂತರ ಶ್ರೀನಾಥ ಜೋಶಿ ಅವರಿಗೆ ವಾಟ್ಸಾಪ್‌ ಸಂದೇಶ ಕಳಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿವೆ. ಜತೆಗೆ, ಕೆಲವು ಆಡಿಯೊ ರೆಕಾರ್ಡಿಂಗ್‌ಗಳು ಸಿಕ್ಕಿವೆ,’ ಎಂದು ತನಿಖಾ ಮೂಲಗಳು ಹೇಳಿವೆ.

ಆದಾಯ ಮೀರಿ ಆಸ್ತಿ ಹೊಂದಿರುವ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದ ಜಿ.ನಿಂಗಪ್ಪ, ವಾಟ್ಸಾಪ್‌ ಕರೆಗಳ ಮುಖಾಂತರ ಅಧಿಕಾರಿಗಳಿಗೆ ಕರೆ ಮಾಡಿ ಕೋಡ್‌ ವರ್ಡ್‌ ಮುಖಾಂತರ ಕೆ.ಜಿ.ಗಳ ಲೆಕ್ಕದಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಒಂದು ಕೆ.ಜಿ. ಎಂದರೆ ಒಂದು ಲಕ್ಷ ರೂ., 2 ಕೆ.ಜಿ. ಎಂದರೆ ಎರಡು ಲಕ್ಷ ರೂ. ಎಂಬುದಾಗಿತ್ತು. ಈ ಮಾದರಿಯಲ್ಲಿ ಹಣ ಪಡೆಯುತ್ತಿದ್ದ ನಿಂಗಪ್ಪ, ಈ ವಿಚಾರವನ್ನು ಜೋಶಿ ಅವರಿಗೆ ತಲುಪಿಸುತ್ತಿದ್ದ. ಬಳಿಕ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.

ಕ್ರಿಪ್ಟೋ ಕರೆನ್ಸಿಯಲ್ಲಿ ಜೋಶಿ ಹೂಡಿಕೆ?
ಲೋಕಾಯುಕ್ತ ಎಸ್ಪಿ ಆಗಿದ್ದ ಶ್ರೀನಾಥ ಜೋಶಿ ಕೂಡ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿರುವ ಪ್ರಬಲ ಶಂಕೆಯಿದೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಕುರಿತು ತನ್ನ ವ್ಯಾಲೆಟ್‌ನ ಸ್ಟ್ರೀನ್‌ ಶಾಟ್‌ ಅನ್ನು ನಿಂಗಪ್ಪನಿಗೆ ವಾಟ್ಸಾಪ್‌ನಲ್ಲಿ ಹಂಚಿಕೊಂಡಿರುವುದು ಇದಕ್ಕೆ ಸಾಕ್ಷ್ಯ ಒದಗಿಸಿದೆ. ಅಷ್ಟೇ ಅಲ್ಲದೆ, ಈಗಾಗಲೇ 4.9 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿಯ 13 ವ್ಯಾಲೆಟ್‌ಗಳನ್ನು ಫ್ರೀಜ್‌ ಮಾಡಿಸಲಾಗಿದೆ. ಈ ವ್ಯಾಲೆಟ್‌ಗಳಲ್ಲಿ ಜೋಶಿ ಅವರಿಗೆ ಸೇರಿದ ಎಷ್ಟು ಪ್ರಮಾಣದ ಹಣ ಹೂಡಿಕೆ ಆಗಿದೆ ಎಂಬುದು ತನಿಖೆ ಬಳಿಕವಷ್ಟೇ ಖಚಿತವಾಗಲಿದೆ ಎಂದು ಮೂಲಗಳು ಹೇಳಿವೆ.

ನಿಂಗಪ್ಪನ ಮನೆಯಲ್ಲಿ ಜೋಶಿಗೆ ಸನ್ಮಾನ:
2017-18ರಲ್ಲಿ ಚಿತ್ರದುರ್ಗದ ಜಿಲ್ಲಾಎಸ್ಪಿಯಾಗಿ ಶ್ರೀನಾಥ ಜೋಶಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಜಿ.ನಿಂಗಪ್ಪ ಹೆಡ್‌ಕಾನ್ಸ್‌ಟೆಬಲ್‌ ಆಗಿದ್ದ. ಈ ಅವಧಿಯಲ್ಲಿಯೇ ಇಬ್ಬರ ನಡುವೆ ಪರಿಚಯವಿತ್ತು. ಲೋಕಾಯುಕ್ತ ಕಚೇರಿಯಲ್ಲಿದ್ದ ಜೋಶಿ ಅವರ ಕೊಠಡಿಗೂ ಹಲವು ಬಾರಿ ನಿಂಗಪ್ಪ ಭೇಟಿ ನೀಡಿದ್ದು, ಈ ಸಂಬಂಧ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಬೇಕಿದೆ.

ಚಿತ್ರದುರ್ಗದ ನಿಂಗಪ್ಪನ ಮನೆಗೂ ಭೇಟಿ ನೀಡಿದ್ದ ಶ್ರೀನಾಥ ಜೋಶಿ ಸನ್ಮಾನ ಮಾಡಿಸಿಕೊಂಡಿದ್ದರು. ಜತೆಗೆ, ನಿಂಗಪ್ಪನಿಗೂ ಪ್ರತಿ ಸನ್ಮಾನ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಡಿಜಿಟಲ್‌ ಸಾಕ್ಷ್ಯಾಧಾರ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಂಧನ ಭೀತಿಯಲ್ಲಿದ್ದ ಶ್ರೀನಾಥ ಜೋಶಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ.

ಜೋಶಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ನಿರೀಕ್ಷಣಾ ಜಾಮೀನು ನೀಡದಂತೆ ಲೋಕಾಯುಕ್ತ ಪೊಲೀಸರು ಪ್ರಬಲ ಆಕ್ಷೇಪಣೆ ಸಲ್ಲಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ, ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *