ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ: ಚಮೋಲಿ ಜಿಲ್ಲೆಯಲ್ಲಿ ಭಾರಿ ವಿನಾಶ, ಒಬ್ಬರು ಸಾವು, ಹಲವು ಮಂದಿ ನಾಪತ್ತೆ

ಡೆಹ್ರಾಡೂನ್: ಕೆಲವು ದಿನಗಳ ಹಿಂದಷ್ಟೇ ಭೀಕರ ಮೇಘಸ್ಫೋಟ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರಾಖಂಡದಲ್ಲಿ ಶುಕ್ರವಾರ ರಾತ್ರಿ ಮತ್ತೆ ಭಯಾನಕ ಮೇಘಸ್ಫೋಟ ಸಂಭವಿಸಿದೆ. ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭಾರಿ ವಿನಾಶ ಸಂಭವಿಸಿದೆ. ಒಬ್ಬ ಯುವತಿ ಪ್ರವಾಹದಲ್ಲಿ ಕೊಚ್ಚಿಹೋಗಿ ಸಾವಿಗೀಡಾಗಿದ್ದು, ಹತ್ತಾರು ಜನ ಕಣ್ಮರೆಯಾಗಿದ್ದಾರೆ. ಎಸ್ಡಿಆರ್ಎಫ್ ತಂಡವು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದೆ. ಥರಾಲಿ ಹಾಗೂ ಹತ್ತಿರದ ಹಳ್ಳಿಗಳಲ್ಲಿಯೂ ಅನಾಹುತ ಸಂಭವಿಸಿದೆ.

ಉತ್ತರಾಖಂಡದಲ್ಲಿ ಶುಕ್ರವಾರ ಭಾರಿ ಮಳೆಯಾಗಿತ್ತು. ನಂತರ, ಸರಿಸುಮಾರು ಮಧ್ಯರಾತ್ರಿಯ ವೇಳೆಗೆ ಮೇಘಸ್ಫೋಟ ಸಂಭವಿಸಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ರಾಡಿಬಾಗ್ ಮತ್ತು ಚೆಪ್ಡಾನ್ನಲ್ಲಿ ಅನೇಕ ವಾಹನಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಅನೇಕ ಅಂಗಡಿಗಳು ಹಾನಿಗೊಳಗಾಗಿವೆ. ಮಧ್ಯರಾತ್ರಿಯಲ್ಲಿ ಏಕಾಏಕಿ ಭಾರಿ ಪ್ರವಾಹ ಹಾಗೂ ಭೀಕರ ಸದ್ದು ಕೇಳಿ ಬೆಚ್ಚಿಬಿದ್ದ ಜನರು ಮನೆಗಳಿಂದ ಹೊರಬಂದಿದ್ದಾರೆ.
ಘಟನೆಯ ಬಗ್ಗೆ ಚಮೋಲಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ‘ಶುಕ್ರವಾರ ರಾತ್ರಿ ಥಾಣಾ ಥರಾಲಿ ಪ್ರದೇಶದಲ್ಲಿ ಭಾರೀ ಮಳೆಯಾಗಿ ಜನಜೀವನದ ಮೇಲೆ ಪರಿಣಾಮ ಬೀರಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಥಾಣಾ ಥರಾಲಿ ಪೊಲೀಸರು ರಾತ್ರಿಯೇ ಕ್ಷಿಪ್ರವಾಗಿ ಜಾಗರೂಕರಾಗಿ ಸ್ಥಳೀಯ ಜನರನ್ನು ಎಚ್ಚರಿಸಿ ಅವರನ್ನು ಅವರ ಮನೆಗಳಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು’ ಎಂದು ಉಲ್ಲೇಖಿಸಿದ್ದಾರೆ.
ಮೇಘ ಸ್ಫೋಟದಿಂದಾಗಿ ಜನರಲ್ಲಿ ಭೀತಿ ಉಂಟಾಗಿದೆ. ಕಟ್ಟಡಗಳ ಮತ್ತು ಇತರ ಅವಶೇಷಗಳಿಂದಾಗಿ ರಸ್ತೆಗಳು ಮುಚ್ಚಿಹೋಗಿವೆ. ಥರಾಲಿ-ಗ್ವಾಲ್ಡಮ್ ರಸ್ತೆ ಮತ್ತು ಥರಾಲಿ-ಸಾಗ್ವಾರಾ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಿಂಗ್ಡೇರಾ ಬಳಿಯ ರಸ್ತೆಯಿಂದ ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ. ಗಡಿ ರಸ್ತೆಗಳ ಸಂಘಟನೆ (BRO) ಸಮರೋಪಾದಿಯಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡಿದೆ.
2 ವಾರಗಳ ಹಿಂದಷ್ಟೇ ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿ ಭಾರಿ ಪ್ರವಾಹ ಉಂಟಾಗಿತ್ತು. ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟು ನೂರಾರು ಮಂದಿ ನಾಪತ್ತೆಯಾಗಿದ್ದರು.