ಹಿಮಾಚಲದಲ್ಲಿ ಮೇಘಸ್ಫೋಟದ ಅಬ್ಬರ: ನದಿಗೆ ಕೊಚ್ಚಿ ಹೋದ ವಾಹನಗಳು

ಧರ್ಮಶಾಲಾ: ಹಿಮಾಚಲ ಪ್ರದೇಶದ ಕುಲ್ಲು ಮತ್ತು ರಾಂಪುರ್ ಬಳಿಯ ಜಮತ್ಖಾನಾ, ನಿರ್ಮಂದ್ ಮತ್ತು ಅನಿ ಪ್ರದೇಶಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಸುಮಾರು 15 ವಾಹನಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.

ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಮಳೆಯು ಜನರಿಗೆ ಅಪಾರ ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡಿದೆ. ಶಿಮ್ಲಾ ಮತ್ತು ಕುಲ್ಲು ಜಿಲ್ಲೆಗಳ ಗಡಿಯಲ್ಲಿರುವ ಜಮತ್ಖಾನಾ ನಲಾದಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಐದು ವಾಹನಗಳು ಕೊಚ್ಚಿಹೋಗಿ ಸಟ್ಲುಜ್ ನದಿ ದಂಡೆ ಸೇರಿವೆ. ಆದರೆ ಐದರಿಂದ ಆರು ವಾಹನಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ.
ಭಾರೀ ಮಳೆಯಿಂದಾಗಿ ಜಮತ್ಖಾನಾ ನಾಲಾದ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆಯಾಗಿದ್ದು, ಇದರ ಪರಿಣಾಮವಾಗಿ ವ್ಯಾಪಕ ಹಾನಿಯಾಗಿದೆ. ರಾಂಪುರದಲ್ಲಿಯೂ ಆಲಿಕಲ್ಲು ಮಳೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿವೆ.ಶಿಮ್ಲಾದ ಹವಾಮಾನ ಕೇಂದ್ರವು ಒಂಬತ್ತು ಜಿಲ್ಲೆಗಳಿಗೆ ಮಳೆ, ಆಲಿಕಲ್ಲು ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಬಿಲಾಸ್ಪುರ್, ಚಂಬಾ, ಹಮೀರ್ಪುರ್, ಕಾಂಗ್ರಾ, ಕುಲ್ಲು, ಮಂಡಿ, ಶಿಮ್ಲಾ, ಸಿರ್ಮೌರ್ ಮತ್ತು ಸೋಲನ್ ಜಿಲ್ಲೆಗಳಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಮೇಘಸ್ಫೋಟದ ಪರಿಣಾಮಗಳನ್ನು ಕಂಡ ಜಮತ್ಖಾನಾ ಬಳಿಯ ತೊಂದರೆ ಅನುಭವಿಸಿದ್ದಾರೆ. ಅನೇಕರು ತಮ್ಮ ಮನೆಗಳನ್ನು ತೊರೆದಿದ್ದಾರೆ. 24-25 ವಾಹನಗಳು ತೀವ್ರವಾಗಿ ಹಾನಿಗೊಳಗಾಗಿವೆ.