ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಶುಚಿತ್ವದ ಅವ್ಯವಸ್ಥೆ ಬಹಿರಂಗ

ಮೈಸೂರು :ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನದ ಶುಚಿತ್ವಕ್ಕೆ ಸಂಬಂಧಿಸಿದಂತೆ ಒಂದು ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ.
ಈ ದೇವಸ್ಥಾನವನ್ನು ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ನಿರ್ವಹಿಸುತ್ತಿದ್ದು, ಇದರ ನಿರ್ವಹಣೆಯಲ್ಲಿ ತೀವ್ರ ಕೊರತೆಗಳಿವೆ ಎಂದು ಆರೋಪಿಸಲಾಗಿದೆ.
ವೀಡಿಯೋದಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಅಶುಚಿತ್ವದ ಚಿತ್ರಣಗಳನ್ನು ತೋರಿಸಲಾಗಿದ್ದು, ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. “ದೇವಸ್ಥಾನಗಳು ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಭಾಗವಾಗಿವೆ, ಆದರೆ ಸರ್ಕಾರದ ನಿರ್ವಹಣೆಯಲ್ಲಿ ವಿಫಲವಾಗಿದೆ. ದೇವಸ್ಥಾನಕ್ಕೆ ಶುದ್ಧವಾಗಿ ಬಂದರೂ ಇಲ್ಲಿ ಮೋರಿ ನೀರನ್ನು ತುಳಿದುಕೊಂಡು ದೇವಸ್ಥಾನ ಪ್ರವೇಶಿಸಬೇಕು” ಎಂದು ವೀಡಿಯೋದಲ್ಲಿ ದೂರಲಾಗಿದೆ.
ತೆಂಗಿನಕಾಯಿ ಒಡೆದ ನೀರನ್ನು ಸಹ ಇಲ್ಲಿಗೇ ಬಿಡಲಾಗುತ್ತಿದ್ದು, ಈ ರೀತಿಯ ಸಮಸ್ಯೆ ಹುಟ್ಟಿಕೊಳ್ಳಲು ಕಾರಣ ಎಂದೂ ಸಹ ಆರೋಪಿಸಲಾಗಿದೆ.
ಕರ್ನಾಟಕ ಸರ್ಕಾರವು ಈ ಆರೋಪಗಳಿಗೆ ಉತ್ತರ ನೀಡಲು ಮುಂದಾಗಿಲ್ಲ, ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ದೇವಸ್ಥಾನಗಳ ಸ್ವಚ್ಛತೆ ಮತ್ತು ನಿರ್ವಹಣೆಗೆ ಗಮನ ಹರಿಸದಿದ್ದರೆ, ಇದು ಜನರ ನಂಬಿಕೆ ಮತ್ತು ಧಾರ್ಮಿಕ ಪರಂಪರೆಗೆ ಧಕ್ಕೆ ತರುವ ಸಾಧ್ಯತೆ ಇದೆ.