ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ: ದರೋಡೆ, ಸುಲಿಗೆ ಹತ್ತಿಕ್ಕಲು ಕ್ರಮ ಬಿಗಿಗೊಳಿಸುತ್ತೇವೆ – ಸಚಿವ ಪರಮೇಶ್ವರ್

ಬೆಳಗಾವಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ (Law And Order) ಉತ್ತಮವಾಗಿದೆ. ದರೋಡೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳನ್ನು ಹತ್ತಿಕ್ಕಲು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಸಚಿವ ಪರಮೇಶ್ವರ್ (G Parameshwar) ತಿಳಿಸಿದ್ದಾರೆ.


ವಿಧಾನ ಪರಿಷತ್ (Legislative Council) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪ್ರಶ್ನೆ ಕೇಳಿದರು. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ದರೋಡೆ, ಕಳ್ಳತನ, ಸುಲಿಗೆ ಸುಮಾರು 1 ಲಕ್ಷ ಕೇಸ್ ದಾಖಲಾಗಿದೆ. ಇದರಲ್ಲಿ 63% ಕೇಸ್ ಇತ್ಯರ್ಥ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನರು ಭಯಗೊಂಡಿದ್ದಾರೆ. 8 ತಿಂಗಳಲ್ಲಿ 10 ಎಸಿಪಿ ಲೋಕಾಯುಕ್ತ ಟ್ರ್ಯಾಪ್ ಆಗಿದ್ದಾರೆ. ರಾಜ್ಯ ಕಳ್ಳಕಾಕರ ರಾಜ್ಯ ಆಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಭಯೋತ್ಪಾದಕರು ಫೋನ್ನಲ್ಲಿ ಮಾತನಾಡುತ್ತಾರೆ. ಇದನ್ನ ನೋಡಿದ್ರೆ ಗೃಹ ಸಚಿವರಿಗೆ ಇಲಾಖೆ ಮೇಲೆ ಕಂಟ್ರೋಲ್ ಇದೆಯಾ ಇಲ್ಲ ಅಂತ ಅನುಮಾನ ಬರುತ್ತದೆ. ದಕ್ಷ ಅಧಿಕಾರಿಗಳನ್ನ ಹಾಕಿ ಇಂತಹ ಅನಾಹುತ ತಡೆಯಬೇಕು ಎಂದು ಆಗ್ರಹ ಮಾಡಿದರು.

ಇದಕ್ಕೆ ಸಚಿವ ಪರಮೇಶ್ವರ್ ಉತ್ತರ ನೀಡಿ, ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಉತ್ತಮವಾಗಿದೆ. 900 ಪಿಎಸ್ಐ ನೇಮಕಾತಿ ಮಾಡಿದ್ದು ನಮ್ಮ ಸರ್ಕಾರ. ಅವರಿಗೆ ಇಲ್ಲಿ ಡ್ಯೂಟಿ ಹಾಕಿದ್ದೇನೆ. ನೇಮಕಾತಿ ಕೂಡ ಮಾಡಿದ್ದೇವೆ. 3,600 ಪೊಲೀಸ್ ಪೇದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ನೇಮಕಾತಿಯೇ ಆಗಿರಲಿಲ್ಲ. ಈಗ ಮಾಡಿದ್ದೇವೆ ಎಂದರು.

ಮೋಟಾರ್ ಗಳು ಕಳವು ಆದಾಗ ಪಾರ್ಟ್ಸ್ ಬಿಚ್ಚಿ ಮಾರಾಟ ಮಾಡಿ ಬಿಡ್ತಾರೆ. ಅದನ್ನ ಟ್ರೇಸ್ ಮಾಡೋದು ಕಷ್ಟ.ವಾಹನ ಮಾಲೀಕರು ಸಿ ರಿಪೋರ್ಟ್ ಹಾಕಿ ಕೊಡಿ ಇನ್ಶುರೆನ್ಸ್ ಬರುತ್ತೆ ಅಂತ ಕೇಳ್ತಾರೆ. ಆಗ ಪೊಲೀಸರು ಸಿ ರಿಪೋರ್ಟ್ ಹಾಕ್ತಾರೆ.ನಿರ್ದಿಷ್ಟ ಕಾಲ ಮಿತಿಯಲ್ಲಿ ಹಿಡಿಯಬೇಕು ಅಂತ ಹೇಳೋಕೆ ಆಗೊಲ್ಲ.ಕಾನೂನು ಸುವ್ಯವಸ್ಥೆ ಕರ್ನಾಟಕದಲ್ಲಿ ಎಫೆಕ್ಟ್ ಆಗಿ ಇರೋ ಅಷ್ಟು ಬೇರೆ ರಾಜ್ಯದಲ್ಲಿ ಇಲ್ಲ.ನಮ್ಮ ರಾಜ್ಯದಲ್ಲಿ ಮಿಷನ್ ಗನ್ ಹಿಡಿದು ಪೊಲೀಸರು ಕೆಲಸ ಮಾಡಲ್ಲ. ಬೇರೆ ರಾಜ್ಯದಲ್ಲಿ ಅದು ಇದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡದಲ್ಲಿ 3 ತಿಂಗಳು ಪರಿಸ್ಥಿತಿ ಹೇಗಿತ್ತು, ಈಗ ಹೇಗಿದೆ? ಸ್ಪೇಷಲ್ ಟೀಂ ಹಾಕಿದ್ದೇವೆ. ಮಂಡ್ಯದಲ್ಲೂ ಈ ಟೀಂ ಹಾಕಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡೋದು ನಮ್ಮ ಜವಾಬ್ದಾರಿ. ಪೊಲೀಸ್ ಇಲಾಖೆ ಉತ್ತಮ ಕೆಲಸ ಮಾಡಿದ್ರೆ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂದು ಹೇಳಿದರು