ಚಂಡೀಗಢ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರನ ಹತ್ಯೆ; ಗ್ಯಾಂಗ್ ವಾರ್ ಶಂಕೆ, ಹರಿ ಬಾಕ್ಸರ್ ತಂಡದಿಂದ ಹೊಣೆ

ಚಂಡೀಗಢ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ (Gangster Lawrence Bishnoi) ಸಹಚರನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಚಂಡೀಗಢದ (Chandigarh) ಸೆಕ್ಟರ್ 26ರ ಟಿಂಬರ್ ಮಾರ್ಕೆಟ್ (Timber Market) ಬಳಿ ನಡೆದಿದೆ.

ಇಂದ್ರಪ್ರೀತ್ ಸಿಂಗ್ ಅಲಿಯಾಸ್ ಪರ್ರಿ (35) ಹತ್ಯೆಯಾದ ಸಹಚರ. ಘಟನೆ ಬಳಿಕ ಪರ್ರಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಗ್ಯಾಂಗ್ ವಾರ್ನಿಂದಾಗಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪರ್ರಿ ಸೋಮವಾರ ಸಂಜೆ ಎಸ್ಯುವಿ ಕಾರಿನಲ್ಲಿ ಖಾಸಗಿ ಕ್ಲಬ್ನಿಂದ ಹೊರಟಿದ್ದ. ಈ ವೇಳೆ ಆತನ ಜೊತೆ ಮತ್ತೊಬ್ಬ ವ್ಯಕ್ತಿ ಕೂಡ ಇದ್ದ. ಆತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಾಹನವು ಸ್ವಲ್ಪ ದೂರ ಚಲಿಸಿದ ಕೂಡಲೇ, ಪರ್ರಿ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಪರ್ರಿ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ಬಳಿಕ ಆ ವ್ಯಕ್ತಿ ಕಾರಿನಿಂದ ಕೆಳಗಿಳಿದು ಮತ್ತೆ ಪರ್ರಿ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪರ್ರಿ ಕಾರನ್ನು ಹಿಂಬಾಲಿಸುತ್ತಿದ್ದ ಮತ್ತೊಂದು ಕಾರು ಅಲ್ಲಿ ಬಂದು ನಿಂತಿದೆ. ಪರ್ರಿ ಸಾವನ್ನು ಖಚಿತಪಡಿಸಿಕೊಂಡ ನಂತರ ವ್ಯಕ್ತಿ ಮತ್ತೊಂದು ಕಾರು ಹತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಎಸ್ಯುವಿಯೊಳಗೆ ಸುಮಾರು ಐದು ಖಾಲಿ ಶೆಲ್ಗಳು ಪತ್ತೆಯಾಗಿದೆ. ದಾಳಿಯಲ್ಲಿ 10ಕ್ಕೂ ಹೆಚ್ಚು ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಹರಿ ಬಾಕ್ಸರ್ ಅರ್ಜೂ ಬಿಷ್ಣೋಯ್ ಎಂಬ ಫೇಸ್ಬುಕ್ ಖಾತೆಯಲ್ಲಿ ಈ ಕೃತ್ಯ ತಾವೇ ಎಸಗಿರುವುದಾಗಿ ಪೋಸ್ಟ್ ಹಾಕಿ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಪರ್ರಿ ಸ್ಥಳೀಯ ಕ್ಲಬ್ಗಳಿಂದ ಹಣವನ್ನು ಸುಲಿಗೆ ಮಾಡಿದ್ದಾನೆ ಮತ್ತು ಆತನ ಸಹಚರರ ಮೇಲೆ ದಾಳಿ ಮಾಡಲು ಯತ್ನಿಸಿದ್ದ ಎಂದು ಪೋಸ್ಟ್ನಲ್ಲಿ ಆರೋಪಿಸಲಾಗಿದೆ. ಈ ಪೋಸ್ಟ್ನ ಸತ್ಯಾಸತ್ಯತೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ

ಪರ್ರಿ ಒಂದು ಕಾಲದಲ್ಲಿ ಬಿಷ್ಣೋಯ್ ಗ್ಯಾಂಗ್ನ ಸಹಚರನಾಗಿದ್ದ. ಬಳಿಕ ಬಿಷ್ಣೋಯ್ ಗ್ಯಾಂಗ್ ಬಿಟ್ಟು ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಕಡೆ ವಾಲಿದ್ದ ಎನ್ನಲಾಗಿದೆ. ಚಂಡೀಗಢ ಸೆಕ್ಟರ್ 33ರ ನಿವಾಸಿಯಾದ ಪರ್ರಿ ವಿರುದ್ಧ ಕೇಂದ್ರಾಡಳಿತ ಪ್ರದೇಶ ಮತ್ತು ಪಂಜಾಬ್ನಲ್ಲಿ ಕೊಲೆ ಯತ್ನ, ಸುಲಿಗೆ, ಹಲ್ಲೆ, ಗಲಭೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಗಳು ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು