ಚೈತ್ರಾ ವಿರುದ್ಧ ತಂದೆಯಿಂದ ಕೊಲೆ ಬೆದರಿಕೆ ದೂರು: ಕುಟುಂಬ ಕಲಹ ತೀವ್ರ ಸ್ವರೂಪ

ಚೈತ್ರಾ ಕುಂದಾಪುರ ಹಾಗೂ ಅವರ ತಂದೆ ಬಾಲಕೃಷ್ಣ ನಾಯಕ್ ನಡುವಿನ ಜಗಳ ಬೀದಿಗೆ ಬಂದಿದೆ. ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಾ ಇದ್ದಾರೆ. ಈಗ ತಂದೆಯೇ ಮಗಳ ವಿರುದ್ಧ ಕೊಲೆ ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ. ತಂದೆಯನ್ನು ಕೊಲೆಗೈಯ್ಯಲು ಚೈತ್ರಾಸುಪಾರಿ ನೀಡಿದರಾ ಎನ್ನುವ ಪ್ರಶ್ನೆ ಮೂಡಿದೆ.
ಸದ್ಯ ಇದು ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಚೈತ್ರಾ ಕುಂದಾಪುರ ದುಡ್ಡಿನ ಭೂತ ಎಂಬರ್ಥದಲ್ಲಿ ಬಾಲಕೃಷ್ಣ ಮಾತನಾಡಿದ್ದರು. ಚೈತ್ರಾ ಮಾಡಿದ ಅಕ್ರಮ ವ್ಯವಹಾರಗಳನ್ನು ಬಿಚ್ಚಿಟ್ಟಿದ್ದರು. ಮಗಳು ಬಿಗ್ ಬಾಸ್ಗೆ ಹೋಗುವ ವಿಚಾರ ಕೂಡ ಗೊತ್ತಿರಲಿಲ್ಲ ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮಾತನಾಡಿದ್ದ ಚೈತ್ರಾ, ‘ತಂದೆ ಓರ್ವ ಕುಡುಕ. ಕಷ್ಟದ ಸಮಯದಲ್ಲಿ ಸಹಾಯ ಮಾಡಿಲ್ಲ. ನಮ್ಮನ್ನು ಬೆಳೆಸಲು ಸಹಾಯ ಮಾಡಿಲ್ಲ’ ಎಂದು ನೇರ ಆರೋಪ ಮಾಡಿದ್ದರು. ಆ ಬಳಿಕ ಇಬ್ಬರೂ ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುತ್ತಲೇ ಬರುತ್ತಿದ್ದಾರೆ. ಈಗ ಈ ಪ್ರಕರಣ ಒಂದು ಹಂತ ಮುಂದಕ್ಕೆ ಹೋಗಿದೆ.
ದೂರಲ್ಲೇನಿದೆ?
‘ಚೈತ್ರಾ ಅವರು ಗೆಳೆಯರ ಜೊತೆ ಮನೆಗೆ ಬಂದು ದೊಡ್ಡ ಮಟ್ಟದ ದುಡ್ಡಿನ ವ್ಯವಹಾರ ಮಾಡುತ್ತಿದ್ದರು. ಒಂದು ದಿನ ರಾತ್ರಿ ಕೋಟ್ಯಂತರ ರೂಪಾಯಿ ತಂದು ಎಣಿಸಿದ್ದನ್ನು ಕಂಡು ನಾನು ಭಯಗೊಡೆ. ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಅವರು ದಬಾಯಿಸಿದರು. ಹೀಗಾಗಿ, ನಾನು ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದೆ. ಇದು ಗೋವಿಂದ ಪೂಜಾರಿ ಹಣ ಎಂಬ ವಿಚಾರ ನನಗೆ ಆ ಬಳಿಕ ತಿಳಿಯಿತು. ಈ ವಿಚಾರವನ್ನು ನಾನು ಎಲ್ಲಾದರೂ ಹೇಳಬಹುದು ಎಂಬ ಕಾರಣಕ್ಕೆ ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳಾದ ಚೈತ್ರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.
‘ನನ್ನ ಮಗಳು ಆಕೆಯ ಸ್ನೇಹಿತನಾದ ಶ್ರೀಕಾಂತ್ ಅವರನ್ನು ಮದುವೆಯಾಗಲು ನಿರ್ಧರಿಸಿದ ವಿಷಯ ತಿಳಿಯಿತು. ಆಗ ನಾನು ಅವಳ ಬಳಿ ಆತನನ್ನು ಮದುವೆ ಆಗುವುದು ಸರಿಯಲ್ಲ, ಆತ ಸರಿಯಿಲ್ಲ ಎಂದು ಹೇಳಿದೆ. ನನ್ನ ಮಗಳು ಚೈತ್ರಾ ನನ್ನ ಬಳಿ ಒಂದು ವೇಳೆ ಆತನನ್ನು ಬಿಟ್ಟು ಬೇರೆ ಹುಡುಗನನ್ನು ಮದುವೆಯಾಗುವುದಾದರೆ ನನಗೆ 5 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದಳು. ಇದರಲ್ಲಿ ನನ್ನ ಪತ್ನಿ ರೋಹಿಣಿ ಕೂಡ ಶಾಮೀಲಿದ್ದಾಳೆ’ ಎಂದು ದೂರಿದ್ದಾರೆ.
‘ಮದುವೆಗೆ ಬರದೇ ಹೋದರೆ ಭೂಗತ ದೊರೆಗಳ ಮೂಲಕ ಕೊಲೆಗೈಯ್ಯುವ ಬೆದರಿಕೆ ಹಾಕಿದ್ದಾಳೆ. ಆಸ್ತಿಗಾಗಿ ಯಾವ ಹೇಯ ಕೃತ್ಯವನ್ನು ಎಸಗಲು ಅವಳು ಸಿದ್ಧಳಿದ್ದಾಳೆ. ನಾನು ಸತ್ತು ಹೋಗಿದ್ದೇನೆ ಎಂದು ಹೇಳಿಕೊಂಡು ಬರುತ್ತಿದ್ದಾಳೆ. ನನಗೆ ರಕ್ಷಣೆ ನೀಡಿ’ ಎಂದು ಬಾಲಕೃಷ್ಣ ಕೋರಿದ್ದಾರೆ.