ಪೋಕ್ಸೋ ಅಭಿಯೋಜಕ ಸೇರಿ ಮೂವರ ವಿರುದ್ಧ ಜಾತಿನಿಂದನೆ, ಜೀವಬೆದರಿಕೆ ಆರೋಪ

ಉಡುಪಿ: ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಸೇರಿದಂತೆ ಮನೋಜ್ ಹಾಗೂ ಸಂಜಯ್ ಎಂಬವರ ವಿರುದ್ಧ ಮಹಿಳಾ ಠಾಣೆಯಲ್ಲಿ ಜಾತಿನಿಂದನೆ ಹಾಗೂ ಜೀವಬೆದರಿಕೆ ಒಡ್ಡಿದ ಪ್ರಕರಣ ದಾಖಲಾಗಿದ್ದು, ಮೂವರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಬ್ರಹ್ಮಾವರದ ಕೊಳಲಗಿರಿಯ ನಿವಾಸಿಯಾದ ಸಂತ್ರಸ್ತ ಯುವತಿ ಹಾಗೂ ಸಂಜಯ್ 2 ವರ್ಷದಿಂದ ಪ್ರೀತಿಸುತ್ತಿದ್ದರು. 2024ರ ಜು. 11 ಹಾಗೂ ನ. 17ರಂದು ಸಂಜಯ್ ಸಂತ್ರಸ್ತೆಯನ್ನು ತಿರುಗಾಡಲೆಂದು ಕರೆದುಕೊಂಡು ಹೋಗಿ, ಹೊಟೇಲಿನಲ್ಲಿ ರೂಮ್ ಮಾಡಿ ದೈಹಿಕ ಸಂಪರ್ಕ ಬೆಳೆಸಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ಇತ್ತೀಚೆಗೆ ಆತ ತನ್ನ ನಂಬರ್ ಬ್ಲಾಕ್ ಮಾಡಿ ಬೇರೆ ಯುವತಿ ಜತೆಗೆ ವಿವಾಹವಾಗಲು ಯತಿಸಿದ್ದ. ಈ ಬಗ್ಗೆ ಸಂತ್ರಸ್ತ ಯುವತಿ ಜೂ.30ರಂದು ಮಹಿಳಾ ಠಾಣೆಯಲ್ಲಿ ಪ್ರಕರಣ ನೀಡಿದ್ದರು.
ಸಂತ್ರಸ್ತ ಯುವತಿ ಮಹಿಳಾ ಠಾಣೆಯಲ್ಲಿ ನೀಡಿದ ದೂರಿಗೂ ಮುನ್ನ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಅವರು ತನ್ನ ಕಚೇರಿಗೆ ಸಂತ್ರಸ್ತೆಯನ್ನು ಕರೆಯಿಸಿ, ಸಂಜಯ್ ತನ್ನ ಕಕ್ಷಿದಾರನಾಗಿದ್ದು, ಆತನ ವಿರುದ್ಧ ದೂರು ಕೊಟ್ಟರೆ ಸರಿ ಇರುವುದಿಲ್ಲ, ನಿನ್ನ ವಿರುದ್ಧ ಉಡುಪಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಕೇಸ್ ಹಾಕುತ್ತೇನೆ ಎಂದು ಗದರಿಸಿದ್ದಾರೆ. ವೈಟಿ ರಾಘವೇಂದ್ರ ಹಾಗೂ ಮನೋಜ್ ಎಂಬವರು ಸೇರಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ಸುಳ್ಳು ದೂರು ನೀಡಿ ವಿಚಾರಣೆಗೆಂದು ಠಾಣೆಗೆ ಕರೆಯಿಸಿ ತೊಂದರೆ ಮಾಡಿದ್ದಾರೆ.
ಇವರಿಬ್ಬರೂ ಸೇರಿಕೊಂಡು ಅತ್ಯಾಚಾರ ಪ್ರಕರಣದ ಆರೋಪಿ ಸಂಜಯ್ ತಲೆಮರೆಸಿಕೊಳ್ಳಲು ಸಹಾಯ ಮಾಡಿ, ಆತನ ವಿರುದ್ದ ದೂರು ದಾಖಲಿಸದಂತೆ ಒತ್ತಡ ಹಾಕಿದ್ದಾರೆ. ರಾಘವೇಂದ್ರ ಅವರ ಕಚೇರಿಯಲ್ಲಿ ಸಂತ್ರಸ್ತೆ 2017ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕೀಳು ಜಾತಿಯವಳೆಂದು ನಿಂದನೆ ಮಾಡುತ್ತಿದ್ದರು. ಊಟ ಮಾಡುವಾಗ ಆಫೀಸಿನ ಇತರ ಸಿಬಂದಿ ಹೊರತುಪಡಿಸಿ ತನ್ನನ್ನು ಮಾತ್ರ ಹೊರಗೆ ಕಳುಹಿಸುತ್ತಿದ್ದರು ಎಂದು 2025ರ ಜು. 15ರಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದಲ್ಲಿ ಮಹಿಳೆ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
