‘ಅಯೋಗ್ಯ’ ಹೇಳಿಕೆಗೆ ಸಂಬಂಧಿಸಿದ ಮೊಕದ್ದಮೆ ರದ್ದು: ಸೂಲಿಬೆಲೆಗೆ ಸುಪ್ರೀಂ ಕೋರ್ಟ್ನ ಕ್ಲೀನ್ ಚಿಟ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಅಯೋಗ್ಯ’ ಎಂದು ಕರೆದಿದ್ದಕ್ಕಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ಕರ್ನಾಟಕ ಹೈಕೋರ್ಟ್ನ 2024ರ ಸೆಪ್ಟೆಂಬರ್ 27ರ ಆದೇಶ ಪ್ರಶ್ನಿಸಿ ಸೂಲಿಬೆಲೆ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್ ಹಾಗೂ ಎನ್.ಕೋಟೀಶ್ವರ ಸಿಂಗ್ ಅವರ ಪೀಠವು ಈ ಆದೇಶ ನೀಡಿತು.
ಯುವ ಬ್ರಿಗೇಡ್ ವತಿಯಿಂದ ರಾಯಚೂರು ಜಿಲ್ಲೆಯ ಸಿರಾವರದಲ್ಲಿ 2024ರ ಜನವರಿ 18ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೂಲಿಬೆಲೆ ಅವರು ಖರ್ಗೆ ಅವರನ್ನು ಅಯೋಗ್ಯ ಎಂದು ಕರೆದಿದ್ದರು. ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ತೀರ್ಪಿಗೆ ಸೂಲಿಬೆಲೆ ಹೇಳಿದ್ದೇನು?
ಶ್ರಾವಣ ಆರಂಭವಾಗಿದೆ. ಅದಕ್ಕೆ ಸರಿಯಾಗಿ ಪ್ರಿಯಾಂಕ್ ಖರ್ಗೆ ತನ್ನ ಬಳಗದ ಮೂಲಕ ಅವರ ತಂದೆಯನ್ನು ಅಯೋಗ್ಯ ಎಂದಿದ್ದೆ ಎಂಬ ಕಾರಣಕ್ಕೆ ಜಾತಿ ನಿಂದನೆಯ ದೂರು ದಾಖಲಿಸಿ ಸುಪ್ರೀಂಕೋರ್ಟಿನವರೆಗೂ ಅಲೆದಾಡಿಸಿದರು. ಈಗಷ್ಟೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಸರ್ಕಾರಕ್ಕೆ ಛೀಮಾರಿ ಹಾಕಿ ‘ಬೇರೇನೂ ಕೆಲಸವಿಲ್ಲದೇ ಇಂಥದ್ದಕ್ಕೆ ಜೋತಾಡುತ್ತಿದ್ದೀರಾ’ ಎಂದು ಝಾಡಿಸಿದ್ದಾರೆ.
ಹಾಗೆ ನೋಡಿದರೆ ಈ ಕೇಸಿನ ಕುರಿತಂತೆ ನಾನು ವಿಚಾರಿಸಿದ್ದಕ್ಕಿಂತ ಹೆಚ್ಚಾಗಿ ಅರುಣ್ ಶ್ಯಾಮ್ ಮತ್ತು ಅವರ ಸಹಯೋಗಿಗಳಾದ ಸುಯೋಗ್ ಮತ್ತು ನಿಶಾಂತ್ ಇವರೀರ್ವರನ್ನೂ ಇತರರನೇಕರು ಪೀಡಿಸಿದ್ದಿದೆ. ಇಂದು ಸರ್ಕಾರದ ವಿರುದ್ಧ, ಒಂದು ರಾಷ್ಟ್ರೀಯ ಪಕ್ಷದ ವಿರುದ್ಧ ಈ ಗೆಲುವಿಗೆ ಇವರನ್ನೆಲ್ಲ ಹೃತ್ಪೂರ್ವಕವಾಗಿ ಸ್ಮರಿಸಿಕೊಳ್ಳುವೆ. ವಿಶೇಷವಾಗಿ ಧನ್ಯವಾದಗಳು ಮಿತ್ರ ಅರುಣ್ ಶ್ಯಾಮ್.
ನನಗೆ ಪ್ರಿಯಾಂಕ್ ಖರ್ಗೆಯವರ ಮೇಲೆ ಯಾವ ಕೋಪವೂ ಇಲ್ಲ. ಅವರು ಇನ್ನಾದರೂ ತಮ್ಮ ಕ್ಷೇತ್ರದ ಕಡೆಗೆ ಗಮನ ಹರಿಸಿ ಜನರು ಪಡುತ್ತಿರುವ ಸಂಕಟದಿಂದ ಅವರನ್ನು ಪಾರುಮಾಡುವ ಸಮಾಜೋಪಯೋಗಿ ಕೆಲಸಗಳಲ್ಲಿ ನಿರತರಾದರೆ ಅವರಿಗೂ ಒಳಿತು, ರಾಜ್ಯಕ್ಕೂ ಒಳಿತು, ದೇಶಕ್ಕೂ ಒಳಿತು.