ಚಾರ್ಮಾಡಿ ಘಾಟಿಯಲ್ಲಿ ಗಾಳಿ ಮಳೆಯ ಅಬ್ಬರ – ಕೂದಲೆಳೆ ಅಂತರದಲ್ಲಿ ಪಾರಾದ ಕಾರು

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರಿದಿದೆ. ಚಾರ್ಮಾಡಿ ಘಾಟಿಯಲ್ಲಿರುವ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಕಾರೊಂದು ಪಾಸ್ ಆಗುತ್ತಿದ್ದಂತೆ ಮರದ ರೆಂಬೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಕಾರಲ್ಲಿದ್ದ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಪ್ರವಾಸಿಗರು ಧರ್ಮಸ್ಥಳದಿಂದ ಬರುತ್ತಿದ್ದರು. ಈ ವೇಳೆ, ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಕಾರು ಬರುತ್ತಿದ್ದಂತೆ ಮರ ಮುರಿದು ಬಿದ್ದಿದೆ. ಅಕಸ್ಮಾತ್ ಮರ ಕಾರಿನ ಮೇಲೆ ಬಿದ್ದಿದ್ದರೆ ದೊಡ್ಡ ಮಟ್ಟದ ಅನಾಹುತವಾಗುತ್ತಿತ್ತು.
ಕೊಟ್ಟಿಗೆಹಾರದ ಸ್ಥಳೀಯ ಯುವಕರು ಹಾಗೂ ಬಣಕಲ್ ಠಾಣೆ ಪೊಲೀಸರು ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.