ಎಲೆಕೋಸು ಕೇಜಿಗೆ ಕೇವಲ 80 ಪೈಸೆ – ಟೊಮೆಟೋ ದರದ ಭಾರಿ ಕುಸಿತ; ತರಕಾರಿ ರಸ್ತೆಗೆ ಸುರಿದು ರೈತರ ತೀವ್ರ ಪ್ರತಿಭಟನೆ

ಬೆಳಗಾವಿ : ಈರುಳ್ಳಿ ಮತ್ತು ಟೊಮೆಟೋ ಬೆಲೆ ದಿಢೀ ಕುಸಿತಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹೂವಿನಹಡಗಲಿಯಲ್ಲಿ ನಡೆದಿದೆ. ಮತ್ತೊಂದೆಡೆ ಎಲೆಕೋಸು (ಕ್ಯಾಬೇಜ್) ದರವೂ ಕುಸಿದಿದ್ದು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದ ರೆವರೆಂಡ್ ಉತ್ತಂಡಿ ಚೆನ್ನಪ್ಪ ವೃತ್ತ ದಲ್ಲಿ ನೂರಾರು ರೈತರು ತಾವು ಬೆಳೆದ ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಮಾರುಕಟ್ಟೆಯಲ್ಲಿ 1 ಕ್ವಿಂಟಲ್ ಈರುಳ್ಳಿಗೆ 21000ದಿಂದ 21200 ವರೆಗೆ ಬೆಲೆ ಇದೆ. ದರ ಕುಸಿತದಿಂದ ಪ್ರತಿ ವರ್ಷವು ಕೂಡ ನಷ್ಟ ಅನುಭವಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು, ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಕ್ವಿಂಟಲ್ಗೆ 24000 ಬೆಲೆಯಂತೆ ಈರುಳ್ಳಿ ಖರೀದಿಸಬೇಕೆಂದು ಒತ್ತಾಯಿಸಿದರು. ಟೊಮೆಟೋ ಬೆಳೆದ ರೈತರಿಗೆ ಕೇಜಿಗೆ 1 ರುಪಾಯಿ ಸಹ ಸಿಗುತ್ತಿಲ್ಲ, ಟೊಮೆಟೋ ಕೇಳೋರಿಲ್ಲ. ರೈತರು ಮಾಡಿರುವ ಸಾಲಕ್ಕೆ ದಿಕ್ಕು ಕಾಣದಂತಾಗಿದೆ. ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು.
ಕೋಸಿನ ದರ ಕೇಜಿಗೆ 80: ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಗೆ ಕೋಸು ಎಸೆದು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು. ಕೋಸಿನ ದರ ಕುಸಿದಿದ್ದು, ಕೆಜಿಗೆ 80 ಪೈಸೆ ಸಿಗುತ್ತಿದೆ. ದರ ಕುಸಿತದಿಂದ ಬೆಳೆಗಾರರು ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. 3-4 ತಿಂಗಳಿಂದ ಕೋಸು, ಮೂಲಂಗಿ ಮತ್ತಿತರ ತರಕಾರಿ ದರ ಕುಸಿದಿದೆ. ಮಾರುಕಟ್ಟೆಗೆ ತಂದರೆ ವಾಹನ ಬಾಡಿಗೆ ಸಿಗು ತಿಲ್ಲ. ಬೆಳೆಗಳು ಹೊಲದಲ್ಲೇ ಕೊಳೆಯುತ್ತಿವೆ. ಎಂದು ಅಳಲು ತೋಡಿಕೊಂಡಿದ್ದಾರೆ.
ಬೆಳೆಗಾರರು ಕಂಗಾಲು: ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲಿ ಬೆಳೆದಿರುವ ಟೊಮೊಟೋ ಮಾರುಕಟ್ಟೆಯಲ್ಲಿ (ಮಂಡಿಗಳಲ್ಲಿ) ಬೆಲೆ ದಿಢೀರ್ ಕುಸಿತಗೊಂಡಿದ್ದು, ಇದರಿಂದ ರೈತಾಪಿ ವರ್ಗ ಅಕ್ಷರಶಃ ಕಂಗಾಲಾಗಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿದಿನ ರೈತರು ಸಾವಿರಾರು ಬಾಕ್ಸ್ಗಳಲ್ಲಿ ಟೊಮೆಟೋ ತುಂಬಿಕೊಂಡು ಗದಗ, ಮುಂಡರಗಿಯಲ್ಲಿ ಟೊಮೆಟೋ ಮಾರುಕಟ್ಟೆ (ಮಂಡಿಗಳಲ್ಲಿ)ಗೆ ಹರಾಜಿಗೆ ತಂದಿದ್ದರು. ಪ್ರತಿ 15 ಕೆಜಿ ತೂಕದ ಒಂದು ಬಾಕ್ಸ್ ಕೇವಲ 50ರಿಂದ 100 ರು. ಗಳಿಗೆ ಬಿಕರಿಯಾಗುತ್ತಿದ್ದು, ಇದರಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ.