ಯಲಹಂಕದಲ್ಲಿ ಕ್ರೂರತೆ: ಕಸದ ರಾಶಿಯಲ್ಲಿ ನವಜಾತ ಶಿಶುವಿನ ಶವ – ಆರೋಪಿ ಭರತ್ ಬಂಧನ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಕಸದ ರಾಶಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ ಬಂಧಿತ ಆರೋಪಿ ಭರತ್ (23) ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ್ದ. ಆಕೆ ಮಗುವಿಗೆ ಜನ್ಮ ನೀಡಿದ ಬಳಿಕ ಶಿಶು ಮೃತಪಟ್ಟಿದೆ. ಅದನ್ನು ಆತ ಕಸದ ರಾಶಿಯಲ್ಲಿ ಎಸೆದಿದ್ದಾನೆ ಎನ್ನಲಾಗಿದೆ.
ಭರತ್ ಯಲಹಂಕ ನಿವಾಸಿಯಾಗಿದ್ದು ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಆತ ಕಳೆದ ಎರಡು ವರ್ಷಗಳಿಂದ ಅಪ್ರಾಪ್ತ ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದ. ಪ್ರೀತಿಯ ಸೋಗಿನಲ್ಲಿ ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಯೂ ಮಾಡಿದ್ದ. 9 ತಿಂಗಳ ಬಳಿಕ ಅಕ್ಕ ಪಕ್ಕದ ಮನೆಯವರ ಸಹಾಯದಿಂದ ಡೆಲಿವರಿಯೂ ನಡೆದಿದೆ.
ಕಳೆದ 10 ದಿನಗಳ ಹಿಂದೆ ಮಗು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ. ಮೃತ ಮಗುವನ್ನು ಅಪ್ರಾಪ್ತೆ ಕಸದ ಬ್ಯಾಗಿನಲ್ಲಿ ತುಂಬಿ, ಪಕ್ಕದ ಮನೆಯ ವ್ಯಕ್ತಿಗೆ ಅದನ್ನು ಎಸೆಯುವಂತೆ ಹೇಳಿದ್ದಳು. ಕಸದ ಬ್ಯಾಗಿನಲ್ಲಿ ಮಗುವಿನ ಶವವಿರುವ ವಿಚಾರ ತಿಳಿಯದ ವ್ಯಕ್ತಿ ಅದನ್ನು ಖಾಸಗಿ ಆಸ್ಪತ್ರೆಯ ಬಳಿ ಖಾಲಿ ಜಾಗದಲ್ಲಿ ಎಸೆದಿದ್ದ.
ಬಳಿಕ ಕಸದ ರಾಶಿಯಲ್ಲಿ ಮಗುವಿನ ಶವ ಪತ್ತೆಯಾಗುತ್ತಿದ್ದಂತೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ ವ್ಯಕ್ತಿಯೊಬ್ಬ ಕಸವನ್ನು ಎಸೆಯುವುದು ಕಂಡು ಬಂದಿತ್ತು. ಆತನನ್ನು ಪತ್ತೆ ಹಚ್ಚಿ ಪ್ರಶ್ನಿಸಿದಾಗ ಪಕ್ಕದ ಮನೆಯ ಹುಡುಗಿ ಕಸ ಎಸೆಯುವಂತೆ ಹೇಳಿದ್ದಾಗಿ ತಿಳಿಸಿದ್ದಾನೆ. ನಂತರ ಅಪ್ರಾಪ್ತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.