ಗೇಟೆಡ್ ಸಮುದಾಯದಲ್ಲಿ ಮಹಿಳೆಯ ಭೀಕರ ಕೊಲೆ, ಆಭರಣ, ಹಣ ದೋಚಿ ರಕ್ತಸಿಕ್ತ ಬಟ್ಟೆ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು

ಹೈದರಾಬಾದ್: ಮಹಿಳೆಯನ್ನು ಕಟ್ಟಿ ಹಾಕಿ, ಕುಕ್ಕರ್ನಿಂದ ತಲೆಗೆ ಹೊಡೆದು, ಕತ್ತು ಸೀಳಿ ಕೊಲೆ ಮಾಡಿ, ಬಾತ್ ರೂಮ್ಗೆ ಹೋಗಿ ಸ್ನಾನ ಮಾಡಿ, ಕಳ್ಳ ಅಲ್ಲಿಂದ ಪರಾರಿಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಇಬ್ಬರು ವ್ಯಕ್ತಿಗಳು ಮನೆಯನ್ನು ಲೂಟಿ ಮಾಡಿ, ಆಕೆಯ ಮನೆಯಲ್ಲಿ ಸ್ನಾನ ಮಾಡಿ, ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯು ಗೇಟೆಡ್ ಸಮುದಾಯದೊಳಗೆ ನಡೆದಿದ್ದು, ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

50 ವರ್ಷದ ರೇಣು ಅಗರ್ವಾಲ್ ತನ್ನ ಪತಿ ಹಾಗೂ ಮಗನೊಂದಿಗೆ ಸೈಬರಾಬಾದ್ನ ಐಟಿ ಕೇಂದ್ರದಲ್ಲಿರುವ ಗೇಟೆಡ್ ಸಮುದಾಯವಾದ ಸ್ವಾನ್ ಲೇಕ್ ಅಪಾರ್ಟ್ಮೆಂಟ್ನ 13 ನೇ ಮಹಡಿಯಲ್ಲಿ ವಾಸವಾಗಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಅಗರ್ವಾಲ್ ತಮ್ಮ ಮಗನೊಂದಿಗೆ ಕೆಲಸಕ್ಕೆ ತೆರಳಿದ್ದರು. ರೇಣು ಅವರ ಪತಿ ಪದೇ ಪದೇ ಕರೆ ಮಾಡಿದರೂ ರೇಣು ಉತ್ತರಿಸದಿದ್ದಾಗ, 5 ಗಂಟೆ ಸುಮಾರಿಗೆ ದಿನಕ್ಕಿಂತ ಸ್ವಲ್ಪ ಬೇಗ ಮನೆಗೆ ಬಂದಿದ್ದಾರೆ.
ಬಾಗಿಲು ಲಾಕ್ ಆಗಿದ್ದರಿಂದ, ಪ್ಲಂಬರ್ ಸಹಾಯದಿಂದ ಬಾಲ್ಕನಿಯಿಂದ ಹೋಗಿ ಬಾಗಿಲು ತೆರೆದಾಗ ರೇಣು ಮೃತಪಟ್ಟಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದಾರೆ.
ಹಲ್ಲೆಕೋರರು ರೇಣು ಅಗರ್ವಾಲ್ ಅವರ ಕೈಕಾಲುಗಳನ್ನು ಕಟ್ಟಿ, ಪ್ರೆಶರ್ ಕುಕ್ಕರ್ನಿಂದ ಹೊಡೆದಿದ್ದಾರೆ ಬಳಿಕ ಚಾಕುವಿನಿಂದ ಕುತ್ತಿಗೆ ಇರಿದಿದ್ದಾರೆ.
ಮನೆಯನ್ನು ಲೂಟಿ ಮಾಡಿದ ಆ ವ್ಯಕ್ತಿಗಳು ಸುಮಾರು 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದನ್ನು ದೋಚಿದ್ದಾರೆ. ನಂತರ ಅವರು ಮನೆಯಲ್ಲಿ ಸ್ನಾನ ಮಾಡಿ, ಬೇರೆ ಬಟ್ಟೆಗಳನ್ನು ಧರಿಸಿ, ಅಪರಾಧದ ಸ್ಥಳದಲ್ಲಿ ತಮ್ಮ ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ರೇಣು ಅಗರ್ವಾಲ್ ಅವರ ದೇಹವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.
ಪ್ರಾಥಮಿಕ ತನಿಖೆಯಲ್ಲಿ ಆ ಇಬ್ಬರು ಆರೋಪಿಗಳು ಮನೆಕೆಲಸಗಾರರು ಎಂಬುದು ತಿಳಿದುಬಂದಿದೆ. ಒಬ್ಬರು ಅಗರ್ವಾಲ್ ಅವರ ಮನೆಯಲ್ಲಿ ಮತ್ತು ಇನ್ನೊಬ್ಬರು ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಇಬ್ಬರೂ 13 ನೇ ಮಹಡಿಗೆ ಹೋಗಿ ಹೊರಟಿರುವುದು ಕಂಡುಬಂದಿದೆ. ಈ ಇಬ್ಬರು ವ್ಯಕ್ತಿಗಳು ಕೊಲೆ ಮಾಡಿ ರಾಂಚಿಗೆ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ .
ಅಗರ್ವಾಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷ ಜಾರ್ಖಂಡ್ ಮೂಲದವರಾಗಿದ್ದು, ಸುಮಾರು 10 ದಿನಗಳ ಹಿಂದೆ ಕೋಲ್ಕತ್ತಾದ ಮಾನವಶಕ್ತಿ ಏಜೆನ್ಸಿಯ ಮೂಲಕ ನೇಮಕಗೊಂಡಿದ್ದರು. ರೌಶನ್ 14 ನೇ ಮಹಡಿಯಲ್ಲಿರುವ ಬೇರೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕುಕಟ್ಪಲ್ಲಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯ ಭಾಗವಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
