ನೇಪಾಳದಲ್ಲಿ ಹಿಂದೂ ರಾಷ್ಟ್ರಕ್ಕೆ ಬೇಡಿಕೆ ಹಾಕಿದವರ ಮೇಲೆ ಅಟ್ಟಹಾಸ-ಕದನಕ್ಕೆ ತಿರುಗಿತೇ ಪ್ರತಿಭಟನೆ?

ಕಠ್ಮಂಡು: ನೇಪಾಳದಲ್ಲಿ ಮತ್ತೆ ರಾಜಾಡಳಿತ, ಹಿಂದೂ ರಾಷ್ಟ್ರ ಘೋಷಣೆಗಾಗಿ ಹಿಂದೂಗಳು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದು, ರಾಜಧಾನಿ ಕಠ್ಮಂಡುವಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ
ಶುಕ್ರವಾರ ಕಠ್ಮಂಡುವಿನಲ್ಲಿ ನೇಪಾಳದ ಭದ್ರತಾ ಪಡೆಗಳು ಮತ್ತು ಹಿಂದೂಪರ ಕಾರ್ಯಕರ್ತರ ನಡುವೆ ಘರ್ಷಣೆಗಳು ಆರಂಭವಾಗಿದ್ದು, ನೇಪಾಳದಲ್ಲಿ ಮತ್ತೆ ರಾಜಪ್ರಭುತ್ವ-ಹಿಂದೂ ಸಾಮ್ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಲು ಒತ್ತಾಯಿಸಿ ವ್ಯಾಪಕ ಪ್ರತಿಭಟನೆ ನಡೆಸಿವೆ.
ರಾಜಪ್ರಭುತ್ವ ಪರ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (RPP) ಮತ್ತು ಇತರ ಗುಂಪುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.
ಪ್ರತಿಭಟನೆಗಳು ಹಿಂಸಾರೂಪ ಪಡೆದಿದ್ದು, ನೂರಾರು ವಾಹನಗಳು ಬೆಂಕಿಗಾಹುತಿಯಾಗಿವೆ. ಹಿಂಸಾಚಾರದಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಇದು ನಗರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಲವಾರು ಸುತ್ತು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಪ್ರತಿಭಟನಾಕಾರರು ಹಲವಾರು ಮನೆಗಳು, ಇತರ ಕಟ್ಟಡಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಕರ್ಫ್ಯೂ ಹೇರಿಕೆ
ಹಿಂಸಾಚಾರ ವ್ಯಾಪಕವಾಗಿರುವ ಕಠ್ಮಂಡುವಿನ ಟಿಂಕುನೆ, ಸಿನಮಂಗಲ್ ಮತ್ತು ಕೋಟೆಶ್ವರ್ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಘರ್ಷಣೆಯ ಸಮಯದಲ್ಲಿ, ಪ್ರತಿಭಟನಾಕಾರರು ವ್ಯಾಪಾರ ಸಂಕೀರ್ಣ, ಶಾಪಿಂಗ್ ಮಾಲ್, ರಾಜಕೀಯ ಪಕ್ಷದ ಪ್ರಧಾನ ಕಚೇರಿ ಮತ್ತು ಮಾಧ್ಯಮ ಕೇಂದ್ರಗಳು ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಒಂದು ಡಜನ್ಗೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಟಿಂಕುಣೆ ಪ್ರದೇಶದಲ್ಲಿ ಸಾವಿರಾರು ರಾಜಪ್ರಭುತ್ವವಾದಿಗಳು ಜಮಾಯಿಸಿ, ನೇಪಾಳದ ರಾಷ್ಟ್ರೀಯ ಧ್ವಜಗಳನ್ನು ಬೀಸುತ್ತಾ ಮತ್ತು ಮಾಜಿ ರಾಜ ಜ್ಞಾನೇಂದ್ರ ಷಾ ಅವರ ಚಿತ್ರಗಳನ್ನು ಹಿಡಿದು, “ರಾಜ ಆವೋ, ದೇಶ್ ಬಚಾವೋ” (ರಾಜ ಬರಲಿ.. ದೇಶ ಉಳಿಸಲಿ), “ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಿರಿ” ಮತ್ತು “ನಮಗೆ ರಾಜಪ್ರಭುತ್ವ ಮರಳಿ ಬೇಕು” ಎಂಬ ಘೋಷಣೆಗಳನ್ನು ಕೂಗುತ್ತಾ ನೇಪಾಳದಲ್ಲಿ ರಾಜಪ್ರಭುತ್ವವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ.