ಅಮೃತಹಳ್ಳಿಯಲ್ಲಿ ಬರ್ಬರ ಹಲ್ಲೆ: ಲೇಡಿ ಗ್ಯಾಂಗ್ನಿಂದ ಸಲೂನ್ ಮಾಲಿಕನಿಗೆ ಜೀವ ಬೆದರಿಕೆ

ಬೆಂಗಳೂರು: ನಗರದ ಸ್ಪಾ ವೊಂದರಲ್ಲಿ ಕೆಲಸ ಬಿಟ್ಟು ಸ್ವಂತ ಸಲೂನ್ ಮಾಡಿದ್ದಕ್ಕೆ, ಲೇಡಿ ಗ್ಯಾಂಗ್ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಸಂಜು ಅನ್ನೋ 40 ವರ್ಷದ ವ್ಯಕ್ತಿ, ಕೊಡಿಗೆಹಳ್ಳಿ ಸಮೀಪದ ಸಾರಾ ಸ್ಪಾನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರಿಂದ ಅಲ್ಲಿ ಕೆಲಸ ಬಿಟ್ಟು ಸ್ವಂತ ಸಲೂನ್ ಮಾಡಿಕೊಂಡಿದ್ದ. ಇದರಿಂದ ಕೋಪಗೊಂಡ ಸಾರಾ ಸ್ಪಾ ಓನರ್ ನಿಶಾ, ಗ್ಯಾಂಗ್ ಕಟ್ಟಿಕೊಂಡು ಬಂದು, ಸಂಜು ನಡೆಸ್ತಿದ್ದ ಸಲೂನ್ಗೆ ನುಗ್ಗಿ ಧಾಂಧಲೆ ನಡೆಸಿದ್ದಾರೆ. 10-15 ನಿಮಿಷಗಳ ಕಾಲ ಮನಸೋಇಚ್ಛೆ ಥಳಿಸಿ ಸಲೂನ್ನಿಂದ ನೀಲಿ ಬಣ್ಣದ ಕಾರಿನಲ್ಲಿ ಎತ್ತಾಕ್ಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಜು ದೂರು ನೀಡಿದ್ದಾರೆ.
ಸಾರಾ ಸ್ಪಾ ಓನರ್ ನಿಶಾ, ಸ್ನೇಹಿತೆ ಕಾವ್ಯ, ಮೊಹಮ್ಮದ್ ಹಾಗೂ ಅಪರಿಚಿತರಿಬ್ಬರ ಮೇಲೆ ದೂರು ದಾಖಲಾಗಿದೆ. ದಾಸರಹಳ್ಳಿ ಮುಖ್ಯರಸ್ತೆ ಮೂಲಕ ಜಕ್ಕೂರು ಕಡೆ ಕರೆದುಕೊಂಡು ಹೋಗಿ, ಡ್ರ್ಯಾಗನ್, ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸಲೂನ್ಗೆ ನುಗ್ಗಿ ಹಲ್ಲೆ ಮಾಡಿರುವ ದೃಶ್ಯಗಳನ್ನ ಸಂಜು ಪತ್ನಿ ಮೊಬೈಲ್ ನಲ್ಲಿ ಸಿಸಿಟಿವಿ ದೃಶ್ಯಗಳನ್ನ ನೋಡಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ನಲ್ಲಿದ್ದ ಓರ್ವರನ್ನ ಪೊಲೀಸರು ಗುರ್ತಿಸಿ, ಫೋನ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಠಾಣೆಯ ಮುಂದೆ ಸಂಜುನನ್ನ ಬಿಟ್ಟೋಗಿದ್ದಾರೆ. ಕಣ್ಣು, ಕಿವಿ, ತಲೆ, ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜು ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಪೆಟ್ರೋಲ್ ಸುರಿದು ಸುಟ್ಟಾಕ್ತಿನಿ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ರೌಡಿ ಗ್ಯಾಂಗ್ನ ಅಟ್ಟಹಾಸದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಗ್ಯಾಂಗ್ ಗೆ ಸ್ಥಳೀಯ ರಾಜಕೀಯ ಮುಖಂಡ ಹಾಗೂ ರೌಡಿಶೀಟರ್ ಒಬ್ಬನ ಬೆಂಬಲ ಇದೆಯಂತೆ. ಇದೆ ಧೈರ್ಯದಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಸಲೂನ್ನ ಸಿಸಿಟಿವಿ ಕೇಬಲ್ಗಳನ್ನ ಕಿತ್ತಾಕಿ ಧಾಂಧಲೆ ನಡೆಸಿದ್ದಾರೆ ಎಂದು ದೂರಿದ್ದು, ಪೊಲೀಸರು ಹಲ್ಲೆಕೊರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಜು ದಂಪತಿ ಒತ್ತಾಯಿಸಿದ್ದಾರೆ. ರೌಡಿ ಪಟಾಲಂ ವಿರುದ್ಧ ಅಮೃತಹಳ್ಳಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪರಾರಿಯಾದ ಹಲ್ಲೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.