ಭಯೋತ್ಪಾದಕರ ಕೃತ್ಯಕ್ಕೆ ಬೆಂಬಲ: ಬೊಕಾರೋ ನಿವಾಸಿ ನೌಶಾದ್ ಅರೆಸ್ಟ್

ರಾಂಚಿ: ಕಾಶ್ಮೀರದ ಪಹಲ್ಲಾಮ್ನಲ್ಲಿ ನಡೆದ ಭ*ಯೋತ್ಪಾದಕರ ದಾಳಿಯಿಂದಾಗಿ 28 ಅಮಾಯಕ ಜೀವಗಳನ್ನು ಕಳೆದುಕೊಂಡು ದೇಶವು ಶೋಕಿಸುತ್ತಿದೆ. ಇತರ ದೇಶಗಳ ನಾಯಕರು ಸಹ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಆದಾಗ್ಯೂ, ಜಾರ್ಖಂಡ್ನ ಬೊಕಾರೊ ನಿವಾಸಿ ಮೊಹಮ್ಮದ್ ನೌಶಾದ್ ಎಂಬಾತ ಮುಗ್ಧ ಪ್ರವಾಸಿಗರ ಹತ್ಯೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾನೆ ಎಂದು ವರದಿಯಾಗಿದೆ.
ಆತ ಸಾಮಾಜಿಕ ಮಾಧ್ಯಮದಲ್ಲಿ ಸಂತೋಷವನ್ನು ವ್ಯಕ್ತಪಡಿಸಿದ್ದಲ್ಲದೆ, ಭ*ಯೋತ್ಪಾದಕರು ಮಾಡಿದ ಕೃತ್ಯವನ್ನು ಬೆಂಬಲಿಸಿದ್ದಾನೆ.
ಮೊಹಮ್ಮದ್ ನೌಶಾದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಮಂದಿ ಜಾರ್ಖಂಡ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ದೂರುಗಳಿಗೆ ಪ್ರತಿಕ್ರಿಯಿಸಿದ ಬೊಕಾರೊ ಪೊಲೀಸರು ಬುಧವಾರ ಬೆಳಗ್ಗೆ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಮೊಹಮ್ಮದ್ ನೌಶಾದ್ (35) ಬಿಹಾರದ ಮದರಸಾದಲ್ಲಿ ಶಿಕ್ಷಣ ಪಡೆದಿದ್ದ. ಆತನ ಸಹೋದರರಲ್ಲಿ ಒಬ್ಬರು ದುಬೈನಲ್ಲಿ ವಾಸಿಸುತ್ತಿದ್ದು, ನೌಶಾದ್ ತನ್ನ ತಂದೆಯೊಂದಿಗೆ ಬೊಕಾರೊದಲ್ಲಿ ವಾಸಿಸುತ್ತಿದ್ದಾನೆ.
ಮೂಲಗಳ ಪ್ರಕಾರ, ಆತ ಈ ಹಿಂದೆಯೂ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪ್ರಚೋದನಕಾರಿ ಪೋಸ್ಟ್ಗಳನ್ನು ಮಾಡಿದ್ದಾನೆ. ದುಬೈನಲ್ಲಿರುವ ತಮ್ಮ ಸಹೋದರನ ಮೂಲಕ ಪಡೆದ ಸಿಮ್ ಕಾರ್ಡ್ ಬಳಸಿ, ನೌಶಾದ್ ಫೇಸ್ಬುಕ್, ಎಕ್ಸ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸಕ್ರಿಯನಾಗಿದ್ದಾನೆ.
ಪಹಲ್ಗಾಮ್ ಘಟನೆಗೆ ನೌಶಾದ್ ಭಯೋತ್ಪಾದಕರನ್ನು ಅಭಿನಂದಿಸಿದ್ದಲ್ಲದೆ, ಹಲವಾರು ಇತರ ಪ್ರಚೋದನಕಾರಿ ವಿಷಯಗಳನ್ನು ಬರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಎಕ್ಸ್ ನಲ್ಲಿ, ಆತ ಉರ್ದು ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾನೆ: ‘ಪಾಕಿಸ್ಥಾನಕ್ಕೆ ಧನ್ಯವಾದಗಳು, ಲಷ್ಕರ್-ಎ-ತೈಬಾ ಕ್ಕೆ ಧನ್ಯವಾದಗಳು. ಅಲ್ಲಾಹು ನಿಮ್ಮನ್ನು ಯಾವಾಗಲೂ ಸಂತೋಷವಾಗಿರಿಸಲಿ.’

‘ಆರ್ಎಸ್ಎಸ್, ಬಿಜೆಪಿ, ಬಜರಂಗದಳ ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿಕೊಂಡರೆ ನಾವು ಇನ್ನೂ ಸಂತೋಷಪಡುತ್ತೇವೆ’ ಎಂದು ನೌಶಾದ್ ಹೇಳಿಕೊಂಡು, ಪೋಸ್ಟ್ನಲ್ಲಿ ಸ್ಮೈಲಿ ಎಮೋಜಿಗಳನ್ನು ಸಹ ಸೇರಿಸಿದ್ದಾನೆ.
ನೌಶಾದ್ ಮೇಲೆ ಇನ್ನೂ ಹಲವು ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ ಆರೋಪವಿದೆ. ಆತನ ವಿರುದ್ಧ ದೂರುಗಳು ದಾಖಲಾದ ಬಳಿಕ, ಬೊಕಾರೊ ಎಸ್ಪಿ ಮನೋಜ್ ಸ್ವರ್ಗಿಯಾರಿ ಅವರು ಪೊಲೀಸರ ತಾಂತ್ರಿಕ ವಿಭಾಗದ ಸಮನ್ವಯದೊಂದಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದಾರೆ. ಇನ್ಸ್ಪೆಕ್ಟರ್ ನವೀನ್ ಕುಮಾರ್ ಸಿಂಗ್ ಅವರನ್ನು ಈ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಎಸ್ಐಟಿ ರಾತ್ರಿಯಿಡೀ ನೌಶಾದ್ಗಾಗಿ ಹುಡುಕಾಟ ನಡೆಸಿದ್ದು, ಅಂತಿಮವಾಗಿ ಬುಧವಾರ ಬೆಳಗ್ಗೆ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.