ಮಲ್ಪೆಯಲ್ಲಿ ಮಗುಚಿದ ದೋಣಿ: ನಾಲ್ವರು ಮೀನುಗಾರರಿಗೆ ಪ್ರಾಣಾಪಾಯದಿಂದ ರಕ್ಷಣೆ

ಮಲ್ಪೆ : ಮಲ್ಪೆಯ ತೊಟ್ಟಂ ಬಳಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಸಮುದ್ರ ಅಲೆಗೆ ಮುಗುಚಿ ಬಿದ್ದಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯರಾದ ಜೀವನ್ ಎಂಬವರ ದೋಣಿಯಲ್ಲಿ ನಾಲ್ವರ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದೋಣಿಯು ಅಲೆಗಳಿಗೆ ಸಿಲುಕಿ ಸಮುದ್ರದಲ್ಲಿ ಮಗುಚಿತ್ತೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಮುಳುಗು ತಜ್ಞ ಈಶ್ವರ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ತಂಡವು ಮೀನುಗಾರರಾದ ಪ್ರವೀಣ್ ಹಾಗೂ ಉದಯ್ ಜೊತೆಯಾಗಿ ನೀರಿಗೆ ಇಳಿದು ಅಪಾಯದಲ್ಲಿದ್ದ ನಾಲ್ವರಿಗೆ ಲೈಫ್ ಜಾಕೆಟ್ ನೀಡಿ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈಗಾಗಲೇ ಜಿಲ್ಲಾಡಳಿತ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಿದೆ. ಅಲ್ಲದೆ ಮೀನುಗಾರಿಕೆ ತೆರಳುವ ವೇಳೆ ಲೈಫ್ ಜಾಕೆಟ್ ಬಳಸುವಂತೆ ಕೂಡ ತಿಳಿಸಿದೆ. ಆದರೂ ಯಾವುದೇ ರೀತಿಯ ರಕ್ಷಣೆ ಇಲ್ಲದೆ ಜೀವವನ್ನು ಪಣಕ್ಕಿಟ್ಟು ಮೀನುಗಾರಿಕೆಗೆ ಮೀನುಗಾರರು ಇಳಿಯುತ್ತಿದ್ದಾರೆ.