ತೆಂಗು ತೋಟದಲ್ಲಿ ಕಪ್ಪು-ಕೆಂಪು ಮೂತಿ ಹುಳು ಅಟ್ಟಹಾಸ: 900 ಎಕರೆ ತೋಟ ಸಂಕಟದಲ್ಲಿ

ದಾವಣಗೆರೆ: ಕೆಂಪು ಮತ್ತು ಕಪ್ಪು ಮೂತಿ ಹುಳು ಬಾಧೆ ನಿಯಂತ್ರಿಸಲಾಗದೆ ಜಿಲ್ಲೆಯ ಹರಿಹರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತೆಂಗು ಬೆಳೆಗಾರರು ಹತ್ತಾರು ಎಕರೆಯಲ್ಲಿ ಆಕಾಶದೆತ್ತರಕ್ಕೆ ಬೆಳೆದು ನಿಂತ ತೆಂಗಿನ ಮರಗಳನ್ನು ಕಡಿದು ಉರುಳಿಸುತ್ತಿದ್ದಾರೆ.
ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ 20 ಎಕರೆಗೂ ಅಧಿಕ ತೆಂಗಿನ ತೋಟಕ್ಕೆ ಸ್ವತಃ ಕೊಡಲಿ ಏಟು ನೀಡಿ ಕತ್ತರಿಸಿದ್ದಾರೆ.
ಹೊಳೆಸಿರಿಗೆರೆ ಸುತ್ತಲಿನ ಧೂಳೆಹೊಳೆ, ನಿಟ್ಟೂರು, ಜಿಗಳಿ ಮುಂತಾದ ಗ್ರಾಮದ ತೋಟಗಳು ಸಹ ನುಸಿ ರೋಗದಿಂದ ಒಣಗಿವೆ. ಅಲ್ಲದೆ ಕಡರನಾಯಕನ ಹಳ್ಳಿಯಲ್ಲಿ ಈ ರೋಗ ಹೆಚ್ಚು ಉಲ್ಬಣಿಸಿದ್ದು, ಇಲ್ಲಿಯೂ ರೈತರು 50-60 ವರ್ಷ ಹಳೆಯ ತೆಂಗಿನ ಮರಗಳನ್ನು ನೆಲಕ್ಕುರುಳಿಸುತ್ತಿದ್ದಾರೆ.
ನಿಯಂತ್ರಣವಾಗದೆ ಹೈರಾಣ
ಹೊಳೆಸಿರಿಗೆರೆ ಗ್ರಾಮದ ಸುತ್ತಮುತ್ತ ಕಳೆದ ನಾಲ್ಕೈದು ವರ್ಷಗಳಿಂದ ಕಪ್ಪು-ಕೆಂಪು ಮೂತಿ ಹುಳು ಕಾಟ ವಿಪರೀತವಾಗಿದೆ. ತೋಟಗಾರಿಕೆ ಇಲಾಖೆಯಿಂದ ನೀಡಿದ ಕೆಂಪು, ಕಪ್ಪು ಮೂತಿ ಹುಳ ನಾಶಪಡಿಸುವ ಪರೋಪಕಾರಿ ಜೀವಿ ಎಂಬ ಹುಳಗಳನ್ನು ಬಿಟ್ಟು ಸಹ ನೋಡಿದ್ದಾರೆ. ಈ ಕಪ್ಪು-ಕೆಂಪು ಮೂತಿ ಹುಳುಗಳು ತೋಟದಿಂದ ತೋಟಗಳಿಗೆ ಹೋಗುತ್ತಿದ್ದು ಕೀಟಬಾಧೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರೈತರು ಮರಗಳನ್ನೇ ಕತ್ತರಿಸುವ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕೀಟ ಬಾಧೆಯಿಂದ ತೆಂಗಿನ ಮರಗಳಲ್ಲಿ ಇಳುವರಿ ಸಂಪೂರ್ಣ ಕುಸಿದಿದೆ. ರೈತರು ಅನಿರ್ವಾಯವಾಗಿ ಇಡೀ ತೆಂಗಿನ ತೋಟ ನಾಶ ಮಾಡಿ, ಮತ್ತೆ ಹೊಸದಾಗಿ ಸಸಿ ನೆಡಲು ಚಿಂತನೆ ನಡೆಸಿದ್ದಾರೆ. ಸುತ್ತಲಿನ ಗ್ರಾಮಗಳಲ್ಲಿ ಸುಮಾರು 900 ಎಕರೆ ತೆಂಗಿನ ತೋಟಗಳಿದ್ದು, ಎಲ್ಲರಿಗೂ ಈ ಕೀಟ ಬಾಧೆ ಆತಂಕ ಸೃಷ್ಟಿಸಿದೆ.
ಏನಿದು ಕೀಟಬಾಧೆ?
ಕಪ್ಪು ಇಲ್ಲವೇ ಕೆಂಪು ಬಣ್ಣದ ಮೂತಿಯ ಹುಳುಗಳು ತೆಂಗಿನ ಮರಗಳಲ್ಲಿ ಬೀಡು ಬಿಡುತ್ತವೆ. ಈ ಹುಳುಗಳು ಲಗ್ಗೆ ಇಡುತ್ತಿದ್ದಂತೆ ತೋಟವೇ ಸರ್ವನಾಶವಾಗುತ್ತದೆ. ಮೊದಲಿಗೆ ತೆಂಗಿನಕಾಯಿಯ ತಲೆಯ ಭಾಗದಲ್ಲಿ ಪ್ರಭಾವ ಬೀರುವ ಈ ಕೀಟಗಳಿಂದ ಗರಿಗಳು ಒಣಗಲಾರಂಭಿಸುತ್ತವೆ. ಹಂತ ಹಂತವಾಗಿ ಇಡೀ ಮರಗಳು ಒಣಗಲು ಆರಂಭವಾಗುತ್ತದೆ.
ಇಳುವರಿ ಕೊರತೆ, ನುಸಿ ರೋಗ ಹಾಗೂ ಕೆಂಪು, ಕಪ್ಪು ಮೂತಿ ಹುಳದ ಕಾಟಕ್ಕೆ ತೆಂಗು ನಲುಗಿ ಹೋಗಿದೆ. ಈ ಕೀಟ ಬಾಧೆ ಮರದಿಂದ ಮರಕ್ಕೆ ವಿಸ್ತಾರ ಆಗುತ್ತಲಿದೆ. ಹೊಳೆಸಿರಿಗೆರೆಯಲ್ಲಿ 20 ಎಕರೆಯಷ್ಟು ಪ್ರದೇಶದ ತೆಂಗಿನ ಮರಗಳ ನಾಶ ಮಾಡಲಾಗಿದೆ.
– ಮಂಜಪ್ಪ ಕುಂದೂರು, ರೈತ
ನುಸಿ ರೋಗದ ಕಾಟದಿಂದ ಎರಡು ವರ್ಷಗಳಿಂದ ಕಾಯಿ ಬಿಟ್ಟಿಲ್ಲ, ನಿಯಂತ್ರಣಕ್ಕೆ ಏನೇ ಕ್ರಮ ಕೈಗೊಂಡರೂ ಪ್ರಯೋಜನವಾಗಿಲ್ಲ. ತಮಿಳುನಾಡು ಮೂಲದವರನ್ನು ಕರೆಸಿ ಒಂದು ಮರಕ್ಕೆ 200 ರೂ. ಕೊಟ್ಟು ಕಡಿಸಿದ್ದೇವೆ.
– ಶ್ರೀನಿವಾಸ್, ರೈತ
ಪ್ಯಾರಾಸೈಟ್ ಎಂಬ ಹುಳು ರೋಗಬಾಧಿಸುವ ಕೀಟವನ್ನು ತಿಂದು ಹಾಕುತ್ತದೆ. ಆದರೆ ಇದನ್ನು ಒಬ್ಬ ರೈತ ತನ್ನ ತೋಟದಿಂದ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಸುತ್ತಲಿನ ಎಲ್ಲ ರೈತರು ಏಕಕಾಲಕ್ಕೆ ನಿಯಂತ್ರಣಕ್ಕೆ ಶ್ರಮಿಸಿದರೆ ಮಾತ್ರ ರೋಗವನ್ನು ಸದೆಬಡಿಯಬಹುದು.
– ರಾಘವೇಂದ್ರ ಪ್ರಸಾದ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ