Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ಗೆ ಜೀವ ಬೆದರಿಕೆ!

Spread the love

ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಅವರಿಗೆ ಜೀವ ಬೆದರಿಕೆ ಹಿನ್ನೆಲೆ ಬೈಕ್ ಓಡಾಟ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಬೆದರಿಕೆಗಳಿಗೆ ಹೆದರಿ ಓಡಾಡಲು ಸಾಧ್ಯವಿಲ್ಲವೆಂದು ರಾಜಾ ಸಿಂಗ್ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

ಹೈದರಾಬಾದ್: ನಾನು ಅಪಾಯದಲ್ಲಿದ್ದೇನೆ. ನನ್ನ ಕ್ಷೇತ್ರವಾದ ಗೋಶಮಹಲ್‌ನಲ್ಲೂ ನಾನು ಬೈಕ್‌ ಮೇಲೆ ಓಡಾಡುವುದು ನಿಲ್ಲಿಸುವಂತೆ ಪೊಲೀಸ್ ಇಲಾಖೆಯವರು ಅಧಿಕೃತವಾಗಿ ಪತ್ರ ಬರೆದು ತಿಳಿಸಿದ್ದಾರೆ ಎಂದು ಹೈದರಾಬಾದ್‌ನ ಗೋಶಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಪೊಲೀಸರ ವಿರುದ್ಧವೇ ಕಿಡಿಕಾರಿದ್ದಾರೆ.
ಶಾಸಕ ಟಿ ರಾಜಾ ಸಿಂಗ್ ಅವರಿಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆ ಈ ಬಗ್ಗೆ ಹೈದರಾಬಾದ್ ಪೊಲೀಸರು ಟಿ ರಾಜಾಗೆ ಬೈಕ್‌ನಲ್ಲಿ ಹೊರಗೆ ಹೋಗದಂತೆ ಸೂಚಿಸಿದ್ದಾರೆ. ಅಲ್ಲದೇ ಗುಂಡು ನಿರೋಧಕ ಕಾರುಗಳು ಮತ್ತು ಬಂದೂಕುಧಾರಿಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಟಿ ರಾಜಾ ಸಿಂಗ್, ಪೊಲೀಸರ ವಿರುದ್ಧವೇ ಹರಿಹಾಯ್ದಿದ್ದಾರೆ.

ಬೆದರಿಕೆಗಳಿಗೆ ಹೆದರಿ ಓಡಾಡಲು ಸಾಧ್ಯವಿಲ್ಲ:

ನನಗೆ ಬೆದರಿಕೆ ಕರೆ ಬಂದರೆ ಪೊಲೀಸರು ಅಂಥವರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು. ಅದರ ಬದಲು ಪೊಲೀಸರು ನನ್ನ ರಕ್ಷಣೆಗಾಗಿ ಗನ್ ಮ್ಯಾನ್ ಇರುವ ಗುಂಡು ನಿರೋಧಕ ಕಾರನ್ನು ಬಳಸಲು ಅವರು ನನಗೆ ಸಲಹೆ ನೀಡಿದ್ದಾರೆ. ಆದರೆ, ನನ್ನ ಕ್ಷೇತ್ರದಲ್ಲಿ ಅನೇಕ ಕೊಳೆಗೇರಿಗಳು ಓಣಿಗಳಿವೆ. ಅಂಥ ಸ್ಥಳದಲ್ಲಿ ಗುಂಡು ನಿರೋಧಕ ವಾಹನ, ಗನ್ ಮ್ಯಾನ್ ಇಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡಲು ಸಾಧ್ಯವಿಲ್ಲ. ಅವರೊಂದಿಗೆ ಬೆರೆಯಲು ನಾನು ಬೈಕ್ ನಲ್ಲಿ ಓಡಾಡುವುದು ಅನುಕೂಲವಾಗುತ್ತದೆ ಎಂದಿದ್ದಾರೆ.

ನನಗೆ ಬಂದೂಕು ಪರವಾನಗಿ ಏಕೆ ನೀಡಲಿಲ್ಲ?

ನನ್ನ ಜನರಿಗಾಗಿ ದಿನದ ಯಾವುದೇ ಸಮಯದಲ್ಲೂ ನಾನು ಸಿಗಬೇಕು. ಇದು ನನ್ನ ಆದ್ಯತೆಯಾಗಿದೆ. ಹೀಗಾಗಿ ಬೈಕ್ನಲ್ಲಿ ಓಡಾಡುವುದರಿಂದ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತೆ. ಆಶ್ಚರ್ಯಕರ ಸಂಗತಿಯೆಂದರೆ, ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ನಾನು ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಿದಾಗ, ಅದೇ ಪೊಲೀಸ್ ಇಲಾಖೆ ನನ್ನ ವಿರುದ್ಧದ ಪ್ರಕರಣಗಳನ್ನು ಉಲ್ಲೇಖಿಸಿ ನನ್ನ ಅರ್ಜಿಯನ್ನು ತಿರಸ್ಕರಿಸಿತು. ಇನ್ನೊಂದು ವಿಚಾರ ಮಾಡಬೇಕಾದ ವಿಷಯವೆಂದರೆ, ಬಾಕಿ ಇರುವ ಪ್ರಕರಣಗಳಿರುವ ಅನೇಕ ಜನರಿಗೆ ಯಾವುದೇ ಆಕ್ಷೇಪಣೆಯಿಲ್ಲದೆ ಬಂದೂಕು ಪರವಾನಗಿಗಳನ್ನು ಇದೇ ಪೊಲೀಸರು ನೀಡಿದ್ದಾರೆ. ಆದರೆ ನನಗೆ ನೀಡಲಾಗಿಲ್ಲ. ಈಗ ಗುಂಡು ನಿರೋಧಕ ವಾಹನ, ಗನ್ ಮ್ಯಾನ್ ಇಟ್ಟುಕೊಳ್ಳುವಂತೆ ಪತ್ರ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಪತ್ರದಲ್ಲಿ ಏನು ಬರೆಯಲಾಗಿತ್ತು?

ತೆಲಂಗಾಣ ಸರ್ಕಾರ ಒದಗಿಸಿರುವ ಭದ್ರತೆಯನ್ನು ಬಳಸಿಕೊಳ್ಳುವಂತೆ ಶಾಸಕರಿಗೆ ಸಲಹೆ ನೀಡಿರುವ ಹೈದರಾಬಾದ್ ಪೊಲೀಸರು, ‘ನಿಮಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ನೀವು ನಿಮ್ಮ ಮನೆ ಅಥವಾ ಕಚೇರಿಯಿಂದ ಹೊರಗೆ ಹೋಗಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆ ಜನರ ನಡುವೆ ಸುತ್ತಾಡುವುದನ್ನು ಸಹ ಗಮನಿಸಲಾಗಿದೆ. ಈ ನಿಟ್ಟಿನಲ್ಲಿ, ನೀವು ಗುಂಡು ನಿರೋಧಕ ಕಾರಿನಲ್ಲಿ ಮಾತ್ರ ಹೊರಗೆ ಹೋಗಬೇಕು ಮತ್ತು ಸರ್ಕಾರವು ನಿಮಗೆ ಒದಗಿಸಿರುವ ಭದ್ರತೆಯನ್ನು ಬಳಸಿಕೊಳ್ಳಬೇಕು ಎಂದು ವಿನಂತಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *