ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿ ದೇಹದಾನ: ಸಾವಿನಲ್ಲೂ ಜೀವಂತವಾಗಿದ್ದಾರೆ

ಬೆಂಗಳೂರು: ಮನುಷ್ಯ ಸತ್ತ ನಂತರವೂ ಸಾರ್ಥಕ ಬಾಳು ಬಾಳಬೇಕು ಅಂದರೆ ದೇಹ ಮಣ್ಣು ಮಾಡುವ ಬದಲು ದೇಹದಾನ (Body Donate) ಮಾಡಬೇಕು ಎಂದು ಹೇಳುತ್ತಾರೆ. ಇದೀಗ ಮಾಜಿ ಸಚಿವ, ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ (Suresh Kumar) ಅವರ ತಾಯಿ ಸುಶೀಲಮ್ಮ ಅವರ ನೇತ್ರ ಸೇರಿದಂತೆ ದೇಹದಾನ ಮಾಡಲಾಗಿದೆ. ಆ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯಲಾಗಿದೆ.

ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ಅವರು ಸೆಪ್ಟೆಂಬರ್ 23ರಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಈ ದುಃಖದ ವಿಚಾರವನ್ನು ಸ್ವತಃ ಸುರೇಶ್ ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.
ಇದೀಗ ಸುಶೀಲಮ್ಮ ಅವರ ನೇತ್ರ ಮತ್ತು ದೇಹದಾನ ಮಾಡಲಾಗಿದೆ. ಈ ಕುರಿತಾಗಿಯೂ ಎಸ್. ಸುರೇಶ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಮೊನ್ನೆ ನಮ್ಮನ್ನು ಬಿಟ್ಟು ತೆರಳಿದ ನನ್ನಮ್ಮ, ಸುಶೀಲಮ್ಮ ಟೀಚರ್ ಹೆಸರಿಗೆ ಸಿಕ್ಕ ಕೊನೆಯ CERTIFICATES. (ನೇತ್ರದಾನ, ದೇಹದಾನ) ಎಂದು ಬರೆದುಕೊಂಡಿದ್ದಾರೆ.
ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದ ಎಸ್. ಸುರೇಶ್ ಕುಮಾರ್
‘ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್ ಇನ್ನಿಲ್ಲ. ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು’ ಎಂದು ತಮ್ಮ ತಾಯಿಯ ಭಾವಚಿತ್ರದೊಂದಿಗೆ ಎಸ್. ಸುರೇಶ್ ಕುಮಾರ್ ಅವರು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು.
ಇನ್ನು ಶಾಸಕ ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ಅವರು ಶಿಕ್ಷಕಿ ಆಗಿದ್ದರು. ಆ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ಚೆಲ್ಲಿದ್ದರು. ಅಷ್ಟೇ ಅಲ್ಲದೆ ಸಮಾಜದಲ್ಲಿ ವಿವಿಧ ಆಯಾಮಗಳಲ್ಲಿ ಅವರು ಗುರುತಿಸಿಕೊಳ್ಳುವುರೊಂದಿಗೆ ಜನಪ್ರಿಯರಾಗಿದ್ದರು.
