ಟೋಲ್ ಹಣ ಕೇಳಿದ್ದಕ್ಕೆ ಬಿಜೆಪಿ ಮುಖಂಡ ವಿಜೂಗೌಡ ಪಾಟೀಲ್ ಪುತ್ರನಿಂದ ಸಿಬ್ಬಂದಿ ಮೇಲೆ ಹಲ್ಲೆ

ವಿಜಯಪುರ: ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ (BJP) ಮುಖಂಡ ವಿಜೂಗೌಡ ಪಾಟೀಲ್ (Vijugouda Patil) ಪುತ್ರ ಹಲ್ಲೆ ನಡೆಸಿರುವ ಘಟನೆ ವಿಜಯಪುರ-ಕಲಬುರಗಿ ಟೋಲ್ನಲ್ಲಿ ನಡೆದಿದೆ.

ಬಿಜೆಪಿ ಮುಖಂಡ ವಿಜೂಗೌಡ ಪಾಟೀಲ್ ಅವರ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಸ್ನೇಹಿತರು ವಿಜಯಪುರದಿಂದ ಕಪ್ಪು ಬಣ್ಣದ ಥಾರ್ನಲ್ಲಿ ಸಿಂದಗಿ ಕಡೆ ಹೊರಟಿದ್ದರು. ಈ ವೇಳೆ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯಿರುವ ಟೋಲ್ನಲ್ಲಿ ಹಣ ಪಾವತಿಸಲು ಕೇಳಿದ್ದಾರೆ. ಆಗ ಸಮರ್ಥಗೌಡ ನಾನು ವಿಜೂಗೌಡ ಪಾಟೀಲ್ ಪುತ್ರ ಎಂದು ಹೇಳಿದ್ದಾನೆ. ಆಗ ಟೋಲ್ ಸಿಬ್ಬಂದಿ ಯಾವ ವಿಜೂಗೌಡ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಸಮರ್ಥಗೌಡ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.
ಸಮರ್ಥಗೌಡ ಮಾತ್ರವಲ್ಲದೇ ಆತನ ಸ್ನೇಹಿತರು ಕೂಡ ಹಲ್ಲೆ ನಡೆಸಿದ್ದಾರೆ. ಇದರಿಂದ ಟೋಲ್ ಸಿಬ್ಬಂದಿ ಹಣ ತೆಗೆದುಕೊಳ್ಳದೇ ಹಾಗಾಯೇ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಹಲ್ಲೆ ನಡೆಸಿದ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಗಾಯಾಳು ಸಂಗಪ್ಪ ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲಾಗಿದ್ದು, ಟೋಲ್ ಸಿಬ್ಬಂದಿ ದೂರು ದಾಖಲಿಸಲು ಮುಂದಾಗಿದ್ದಾರೆ