ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕರ ಬಂಟ ಮಲಿಯಾಳಿ ಅಜಿತ್ ಪರಾರಿ, ಭೈರತಿ ಬಸವರಾಜ್ ವಿಚಾರಣೆಗೆ ಹಾಜರು

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ಎರಡು ಬಾರಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ತನಿಖಾಧಿಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಕೊಲೆಗೂ ತಮಗೂ ಸಂಬಂಧವಿಲ್ಲ ಅಂದಿದ್ದಾರೆ. ಈ ಮಧ್ಯೆ ಬಂಧನ ಭೀತಿಯಿಂದ ಮತ್ತೊಬ್ಬ ಆರೋಪಿ ಪರಾರಿ ಆಗಿದ್ದಾನೆ. ಭೈರತಿ ಬಸವರಾಜ್ ಬಲಗೈ ಬಂಟ ಮಲಿಯಾಳಿ ಅಜಿತ್ ಎಸ್ಕೇಪ್ ಆದ ಆರೋಪಿ. ಸಾಕಷ್ಟು ಕಡೆ ಪೊಲೀಸರು ಹುಡುಕಾಟ ನಡೆಸಿದರು ಪತ್ತೆ ಆಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ್ ಮನೆ ಮತ್ತು ಕಚೇರಿಯಲ್ಲಿ ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಮಲಿಯಾಳಿ ಅಜಿತ್ಗೆ ಸೇರಿದ ಕೆಲವು ದಾಖಲೆಗಳು ಪತ್ತೆ ಆಗಿವೆ. ಈ ದಾಖಲೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಲಿಯಾಳಿ ಅಜಿತ್ಗೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ನೋಟಿಸ್ ಸ್ವೀಕರಿಸಿದ್ದ ಅಜಿತ್ ವಿಳಾಸವಿಲ್ಲದ ಲೆಟರ್ ಹೆಡ್ನಲ್ಲಿ ಉತ್ತರ ನೀಡಿದ್ದ.
ಪೊಲೀಸರಿಗೇ ಅವಾಜ್ ಹಾಕಿದ್ದ ಅಜಿತ್
‘ನಾನು ಹೈಕೋರ್ಟ್ ವಕೀಲ. ನನಗೆ ನೀವು ಸುಖಾಸುಮ್ಮನೆ ತೊಂದರೆ ನೀಡುತ್ತಿದ್ದೀರಿ. ನನಗೆ ಹಾಗೂ ಜಗ್ಗನಿಗೆ ಅಥವಾ ಕೊಲೆಯಾದ ಶಿವನ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲ. ಒಂದು ವೇಳೆ ನೀವು ನನ್ನನ್ನು ಈ ಕೇಸ್ನಲ್ಲಿ ಸಿಲುಕಿಸುವ ಪ್ರಯತ್ನ ಪಟ್ಟರೆ ನಾನು ಕಾನೂನಿನ ರೀತಿಯಲ್ಲಿ ಕ್ರಮಕ್ಕೆ ಮುಂದಾಗುತ್ತೇನೆ’ ಎಂದು ಅಜಿತ್ ಉತ್ತರ ನೀಡಿದ್ದ.
ತಕ್ಷಣವೇ ಪೊಲೀಸರು ಪ್ರತ್ಯುತ್ತರವಾಗಿ ಕೆಲವು ಕೇಸ್ ಅಂಶಗಳನ್ನು ಇಟ್ಟುಕೊಂಡು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಟಿ.ಸಿ ಪಾಳ್ಯದಲ್ಲಿರುವ ಸಿನಿಮಾಸ್ ವಿ ಗ್ರೂಪ್ನ ಕಚೇರಿಯನ್ನು ಖಾಲಿ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಕಚೇರಿ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಡೆಡ್ಲಿ ಮರ್ಡರ್ಗೂ ಮುನ್ನ ಜಗ್ಗನ ಸ್ಕೆಚ್ ಹೇಗಿತ್ತು?
ಇನ್ನು ಬಿಕ್ಲು ಶಿವ ಕೊಲೆಗೆ ಜಗ್ಗ ಅಲಿಯಾಸ್ ಜಗದೀಶ್ ಪ್ರೀಪ್ಲಾನ್ ಮಾಡಿದ್ದ. ರಾಮಮೂರ್ತಿ ನಗರದ ಬಾರ್ ನಲ್ಲಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಜುಲೈ 15ರ ರಾತ್ರಿ ಶಿವನ ಕೊಲೆಗೂ ಮುನ್ನ ಎಂಟು ಜನ ಆರೋಪಿಗಳೊಂದಿಗೆ ಜಗದೀಶ್ ಮೀಟಿಂಗ್ ಮಾಡಿದ್ದ. ಹಂತಕರು ಸ್ಕೆಚ್ ಹಾಕಿದ್ದ ಸಿಸಿ ಕ್ಯಾಮೆರಾ ದೃಶ್ಯವಳಿ ಟಿವಿ9 ಗೆ ಲಭ್ಯವಾಗಿದೆ.