ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧ: ಪ್ರಯಾಣಿಕರಿಗೆ ಪರದಾಟ, ಆಟೋ ಚಾಲಕರಿಂದ ದುಪ್ಪಟ್ಟು ದರ ವಸೂಲಿ!

ರಾಜ್ಯಾದ್ಯಂತ ಹೈಕೋರ್ಟ್ ಬೈಕ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಮಹತ್ವದ ಆದೇಶಗಳನ್ನು ನೀಡಿದ ಬಳಿಕ, ನಿನ್ನೆಯಿಂದ ಈ ಸೇವೆ ಬಂದ್ ಆಗಿದೆ. ಆದರೆ, ಈ ನಿಷೇಧದ ಬಳಿಕ ಪ್ರಯಾಣಿಕರು ತೀವ್ರ ತೊಂದರೆಗಳನ್ನು ಎದುರಿಸಿದ್ದಾರೆ. ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧದ ನಂತರ, ಆಟೋ ಚಾಲಕರು ಪ್ರಯಾಣಿಕರಿಗೆ ತೊಂದರೆ ಕೊಡುವ ಜೊತೆಗೆ ತಮಗೆ ಇಷ್ಟ ಬಂದಂತೆ ಬೆಲೆಗಳನ್ನು ನಿಗದಿ ಮಾಡುವ ಮೂಲಕ ದುಪ್ಪಟ್ಟು ಹಣ ಪೀಕುತ್ತಿದ್ದಾರೆ.ಈ ಬಗ್ಗೆ ಪ್ರಯಾಣಿಕರನ್ನು ಕೇಳಿದರೆ, ‘ಹಣ ನೀಡಿ ಆಟೋಗಳಲ್ಲಿ ಪ್ರಯಾಣಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ’ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಸಂಚಾರ ಮಾಡಲು ಮೆಟ್ರೋ, ಬಿಎಂಟಿಸಿ, ಓಲಾ ಆಟೋ, ಉಬರ್ ಟ್ಯಾಕ್ಸಿಗಳಿಗಿಂತ
ಅನೇಕ ಜನರು ಕೈಗೆಟುಕುವ ಬೈಕ್ ಟ್ಯಾಕ್ಸಿ ಬೆಸ್ಟ್ ಎಂದು ಆಯ್ಕೆ ಮಾಡಿಕೊಂಡಿ ಇಷ್ಟು ದಿನ ಸಂಚಾರ ಮಾಡುತ್ತಿದ್ದರು. ಆದರೆ ಇದೀಗ ಬೈಕ್ ಟ್ಯಾಕ್ಸಿಯನ್ನು ಸ್ಥಗಿತ ಮಾಡಿರುವುದರಿಂದ ಸಾರ್ವಜನಿಕರ ಹತ್ತಿರ ಹೆಚ್ಚಿನ ದರವನ್ನು ವಸೂಲಿ ಮಾಡಲು ಆಟೋ ಚಾಲಕರು ನಿಂತಿದ್ದಾರೆ. ಈ ಬಗ್ಗೆ ಪ್ರಯಾಣಿಕರು ಪ್ರಶ್ನೆ ಮಾಡಿದ್ದರೆ ಆಟೋ ಚಾಲಕರು ಕ್ಯಾರೆ ಅಂತಿಲ್ಲ.
ಬೆಂಗಳೂರು ನಗರದಲ್ಲಿ ನಾನು ಹಲವಾರು ಬೇರೆ ಓಲಾ ಆಟೋ ಬುಕ್ ಮಾಡಲು ಪ್ರಯತ್ನಪಟ್ಟಿದ್ದೇನೆ ಆದರೆ ಆಟೋ ಚಾಲಕರು ಸ್ಥಳ ನೋಡದ ತಕ್ಷಣ ಅದನ್ನು ತಗೆದುಕೊಳ್ಳವುದೇ ಇಲ್ಲ.ದಾಸನಪುರ ದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಸುಮಾರು 450 ರೂ ಪ್ರಯಾಣದ ಶುಲ್ಕವಿದೆ ಬೈಕ್ ಟ್ಯಾಕ್ಸಿಯಲ್ಲಿ ಹೋದರೆ ಕಡಿಮೆ ಇರುತ್ತದೆ. ಬೆಲೆಗಳನ್ನು ಆಟೋ ಚಾಲಕರು ಬೇಗ ಬಿಟ್ಟಿ ಏರಿಕೆ ಮಾಡುತ್ತಾರೆ ಎಂದು ಪ್ರಯಾಣಿಕರೊಬ್ಬರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆಟೋ ಚಾಲಕರು ದುಪ್ಪಟ್ಟು ಹಣ ಕೇಳುತ್ತಿದ್ದಾರೆ
ಬೆಂಗಳೂರಿನಾದ್ಯಂತ ಅನೇಕ ಜನರು ಆಟೋ ಚಾಲಕರ ದರ ಏರಿಕೆಗೆ ಬೇಸತ್ತು ಹೋಗಿದ್ದಾರೆ. ಬೆಂಗಳೂರಿನಲ್ಲಿ 2,500 ಕ್ಕೂ ಹೆಚ್ಚು ಆಟೋ ನಿಲ್ದಾಣಗಳಿವೆ. ಅವರೆಲ್ಲರೂ ಬುಕಿಂಗ್ಗಳಿಗೆ ಹೆಚ್ಚಿನ ಹಣವನ್ನು ಕೇಳುತ್ತಾರೆ. ಈ ಸಂದರ್ಭದಲ್ಲಿ, ಸರ್ಕಾರ ನಿಯಂತ್ರಿತ ಬೈಕ್ ಟ್ಯಾಕ್ಸಿಗಳನ್ನು ಏಕೆ ನಿಷೇಧಿಸುತ್ತಿದೆ ಎಂದು ಬೆಂಗಳೂರು ಮೂಲದ ಪ್ರಯಾಣಿಕರೊಬ್ಬರು ಪ್ರಶ್ನೆಯನ್ನು ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಸರ್ಕಾರವು ಆಟೋಗಳನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಈ ಬೈಕ್ ಟ್ಯಾಕ್ಸಿಗಳು ನ್ಯಾಯಯುತವಾಗಿ ಓಡಲಿ ಎಂದು ಸಾರಿಗೆ ನೀತಿ ಸಂಶೋಧಕ ವಿನಾಯಕ ದೇಶಪಾಂಡೆ ಕೇಳಿಕೆಯನ್ನು ನೀಡಿದ್ಧಾರೆ.
103 ಬೈಕ್ ಪೊಲೀಸರ ವಶಕ್ಕೆ
ಹೈಕೋರ್ಟ್ ಆದೇಶವನ್ನು ಪಾಲಿಸದೇ ಸೇವೆ ಮಾಡುತ್ತಿದ್ದ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಂಡ ಸಾರಿಗೆ ಇಲಾಖೆ, ಒಟ್ಟು 103 ಬೈಕ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ. ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿದಾಗ, ಸಾರಿಗೆ ಇಲಾಖೆ ಅಧಿಕಾರಿಗಳು ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ 103 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 103 ಬೈಕ್ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತಲಾ 5,000 ರೂ. ದಂಡವನ್ನು ವಿಧಿಸಲಾಗಿದೆ.
ಪಾರ್ಸೆಲ್ ಸೇವೆ ಆರಂಭಿಸಿದ ಬೈಕ್ ಸವಾರರು
ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ಎಲ್ಲಾ ಅಗ್ರಿಗೇಟರ್ಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಈಗಾಗಲೇ ಘೋಷಿಸಿವೆ. ಬೈಕ್ ಟ್ಯಾಕ್ಸಿ ಸೇವಾ ಆಯ್ಕೆಯನ್ನು ಸಹ ಅಪ್ಲಿಕೇಶನ್ಗಳಿಂದ ತೆಗೆದುಹಾಕಲಾಗಿದೆ. ಓಲಾ, ಉಬರ್, ರ್ಯಾಪಿಡೋ ಇತ್ತೀಚೆಗೆ ಬೈಕ್ ಪಾರ್ಸೆಲ್ ಸೇವೆಯನ್ನು ಪ್ರಾರಂಭಿಸಿವೆ. ಟ್ಯಾಕ್ಸಿ ಸೇವೆಯ ಬದಲಿಗೆ, ಅವರು ಗ್ರಾಹಕರಿಗೆ ಸರಕುಗಳನ್ನು ತಲುಪಿಸುವ ಸೇವೆಯನ್ನು ಒದಗಿಸುತ್ತಿದ್ದಾರೆ.ಈ ಸೇವೆಯ ಹೆಸರಿನಲ್ಲಿ ಬೈಕ್ ಸವಾರರು ಟ್ಯಾಕ್ಸಿ ಸೇವೆಯನ್ನು ಸಹ ಒದಗಿಸುತ್ತಿದ್ದಾರೆ ಎಂದು ಸಾರಿಗೆ ಇಲಾಖೆಗೆ ತಿಳಿದುಬಂದಿದೆ. ಇದರಿಂದಾಗಿ, ಸಾರಿಗೆ ಇಲಾಖೆ ಅವರ ವಿರುದ್ಧ ಕ್ರಮ ಕೈಗೊಂಡಿದೆ.
ಬಿಳಿ ಬೋರ್ಡ್ ವಾಹನಗಳು ಟ್ಯಾಕ್ಸಿ ಸೇವೆಗಳನ್ನು ಒದಗಿಸುವಂತಿಲ್ಲ
ರಾಜ್ಯ ಸಾರಿಗೆ ನಿಯಮಗಳ ಪ್ರಕಾರ, ಬೈಕ್ ಟ್ಯಾಕ್ಸಿಗಳು ಮತ್ತು ಬಿಳಿ ಬೋರ್ಡ್ ವಾಹನಗಳು ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ಸಾಧ್ಯವಿಲ್ಲ. ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇನ್ನೂ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಓಲಾ, ಉಬರ್,ರ್ಯಾಪಿಡೋ ದಂತಹ ಇತರ ಕಂಪನಿಗಳು ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿವೆ. ಈ ಸಂಬಂಧ ಅರ್ಜಿಯೊಂದು ನಿನ್ನೆ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದಿತು. ಈ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಜೂನ್ 15 ರ ನಂತರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಲ್ಲಿಸುವಂತೆ ಹೈಕೋರ್ಟ್ಗೆ ಆದೇಶಿಸಿತು.
ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಹೊಟ್ಟೆಗೆ ತಣ್ಣೀರು ಬಟ್ಟೆ
ರಾಜ್ಯದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರು ಬೈಕ್ ಟ್ಯಾಕ್ಸಿಗಳನ್ನು ಚಾಲನೆ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ ಎಂದು ಬೈಕ್ ಟ್ಯಾಕ್ಸಿ ಸಂಘ ಸರ್ಕಾರಕ್ಕೆ ಪತ್ರ ಬರೆಯುವ ಮೂಕಲ ಮಾಹಿತಿಯನ್ನು ತಿಳಿಸಿದೆ. ತಮ್ಮ ಜೀವನವನ್ನು ಸಾಗಿಸಲು ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹೈಕೋರ್ಟ್ ಹೇರಿದ ನಿಷೇಧ ಅವರೆಲ್ಲರೂ ಜೀವಕ್ಕೆ ದೊಡ್ಡ ಪಟ್ಟು ಕೊಟ್ಟಿದೆ. ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಪತ್ರದಲ್ಲಿ ವಿನಂತಿಸಿಕೊಂಡಿದೆ.