ಬಿಹಾರ ರಾಜಕೀಯ ಚದುರಂಗ: ಮುಖ್ಯಮಂತ್ರಿ ಹುದ್ದೆ ತೊರೆಯಲಿರುವ ನಿತೀಶ್ ಕುಮಾರ್; ಮಗನಿಗೆ ಪಟ್ಟ?

ಪಾಟ್ನಾಮಾ.4 ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಯನ್ನು ಪ್ರವೇಶಿಸುವ ಮತ್ತು ಅವರ ಪುತ್ರ ನಿಶಾಂತ್ ಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ. ಬಿಜೆಪಿಯ ವ್ಯಕ್ತಿ ನಿತೀಶ್ ಸ್ಥಾನದಲ್ಲಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಬಿಹಾರದ ಯುಗವೊಂದರ ಅಂತ್ಯವನ್ನು ಸೂಚಿಸುವ ಈ ಪ್ರಮುಖ ಬದಲಾವಣೆಯು ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಕಾರ್ಯಗತಗೊಳ್ಳಬಹುದು. ರಾಜ್ಯಸಭಾ ಚುನಾವಣೆಗೆ ನಾಮಪತ್ರ ಈ ವಾರ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಇದು ದುಃಖಿಸಬೇಕಾದ ಸಮಯ, ಪ್ರತಿಯೊಂದನ್ನೂ ದಿಲ್ಲಿಯಲ್ಲೇ ನಿರ್ಧರಿಸಲಾಗಿದೆ ಎಂದು ನಿತೀಶ್ಗೆ ಆಪ್ತ ನಾಯಕರೋರ್ವರು ಹೇಳಿದರು. ಅವರು ನಿತೀಶ್ ಜಾತಿಗೇ ಸೇರಿದ್ದುಅವರ ಹೆಸರನ್ನೂ ರಾಜ್ಯಸಭೆಗೆ ಪರಿಗಣಿಸಲಾಗುತ್ತಿದೆ. ನಿತೀಶ್ ಮುಂದಿನ ವಾರವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬಹುದು ಎಂದು ಮೂಲಗಳು ತಿಳಿಸಿದವು.

ಈ ವಿಷಯದಲ್ಲಿ ನಿತೀಶ್ ನಿಲುವು ಇನ್ನೂ ಸ್ಪಷ್ಟವಾಗಿಲ್ಲವಾದರೂ ಬದಲಾವಣೆಯು ಸಂಭವಿಸಿದರೆ ರಾಜ್ಯದ ಆಡಳಿತ ಬಿಜೆಪಿ ಕೈಸೇರಲಿದೆ. ಅದು ಕೆಲ ಸಮಯದಿಂದ ಈ ಹುದ್ದೆಗೆ ಕಾತರಿಸುತ್ತಿತ್ತು.
2025ರ ವಿಧಾನಸಭಾ ಚುನಾವಣೆಗೆ ಮೊದಲಿನಿಂದಲೂ ನಿತೀಶ್ ಅವರ ಬದಲಾವಣೆಯನ್ನು ನಿರೀಕ್ಷಿಸಲಾಗಿತ್ತು.ಆದರೆ ಅವರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಅವಸರಿಸಿರಲಿಲ್ಲ.
75ರ ಹರೆಯದ ನಿತೀಶ್ ಅತಿ ಹೆಚ್ಚು ಕಾಲ ಬಿಹಾರದ ಮುಖ್ಯಮಂತ್ರಿಯಾಗಿದ್ದು10 ಸಲ ಪ್ರಮಾಣವಚನ ಸ್ವೀಕರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆಗ ತನ್ನ ನಿಕಟವರ್ತಿಯಾಗಿದ್ದ ಜಿತನ್ ರಾಮ ಮಾಂಝಿ ಮುಖ್ಯಮಂತ್ರಿಯಾಗಿದ್ದ ಅಲ್ಪಾವಧಿಯನ್ನು ಹೊರತು ಪಡಿಸಿ 2025ರಿಂದಲೂ ನಿತೀಶ್ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ.
ನಿತೀಶ್ ಎನ್ಡಿಎ ಅಥವಾ ಮಹಾ ಘಟಬಂಧನಲ್ಲಿದ್ದಾಗಲೂ ಬಿಹಾರದಲ್ಲಿ ಯಾವಾಗಲೂ ಚುನಾವಣಾ ಪ್ರಚಾರಗಳನ್ನು ಅವರೇ ಮುನ್ನಡೆಸಿದ್ದಾರೆ.
ತನ್ನ ಎಲ್ಲ ರಾಜಕೀಯ ಸರ್ಕಸ್ಗಳ ಮತ್ತು ಪಾಳಯ ಬದಲಾವಣೆ ಹೊರತಾಗಿಯೂ ದೃಢವಾದ ಬೆಂಬಲದ ಬುನಾದಿಯೊಂದಿಗೆ ರಾಜ್ಯದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲೊಬ್ಬರಾಗಿ ನಿತೀಶ ಚುನಾವಣೆಗಳಲ್ಲಿ ಗೆಲ್ಲುತ್ತಲೇ ಬಂದಿದ್ದಾರೆ.
2025ರಲ್ಲಿ ಇನ್ನೇನು ನಿತೀಶ್ ಕಾಲ ಮುಗಿಯಿತು ಎಂದು ರಾಜಕೀಯ ಪಂಡಿತರು ಭಾವಿಸಿದ್ದರಾದರೂ ಅವರು ಮತ್ತೊಮ್ಮೆ ಜಯಭೇರಿ ಬಾರಿಸಿದ್ದರು. ರಾಜ್ಯದ ಮಹಿಳೆಯರ ಬೆಂಬಲ ಅವರ ಬೆನ್ನಿಗಿತ್ತು. ತನ್ನ ಶಾಲಾ ಬಾಲಕಿಯರಿಗಾಗಿ ಸೈಕಲ್ ಯೋಜನೆ ಮತ್ತು ಬಳಿಕ ರಾಜ್ಯದಲ್ಲಿ ಮದ್ಯ ನಿಷೇಧವನ್ನು ತರುವ ಮೂಲಕ ಅವರು ಮಹಿಳೆಯರ ನಿಷ್ಠೆಯನ್ನು ಗೆದ್ದುಕೊಂಡಿದ್ದರು.
ಚುನಾವಣಾ ಅಂದಾಜುಗಳು ಬಿಜೆಪಿಯನ್ನು ಅಗ್ರಸ್ಥಾನದಲ್ಲಿ ಮತ್ತು ನಿತೀಶ್ ಅವರ ಜೆಡಿಯುವನ್ನು ದೂರದ ಎರಡನೇ ಸ್ಥಾನದಲ್ಲಿ ಇರಿಸಿದ್ದರೂ ಅವರನ್ನು ಬದಲಿಸುವ ದುಃಸ್ಸಾಹಸಕ್ಕೆ ಕೇಸರಿ ಪಕ್ಷವು ಮುಂದಾಗಿರಲಿಲ್ಲ. ಹಾಗಿದ್ದರೂ ಬಿಜೆಪಿಯ ರಾಜ್ಯ ನಾಯಕರಿಗೆ ನೇಪಥ್ಯದಲ್ಲಿ ಕಾಯುತ್ತಲೇ ಇರುವುದು ತೃಪ್ತಿಯನ್ನು ನೀಡಿರಲಿಲ್ಲ. ಪ್ರತಿಪಕ್ಷ ಆರ್ಜೆಡಿಯು ನಿತೀಶ್ ಅವರನ್ನು ವಯೋಸಂಬಂಧಿ ಅರಿವಿನ ಕ್ಷೀಣತೆ ಕಾಡುತ್ತಿದೆ ಎಂದು ಹೇಳಿತ್ತು. ಇವೆಲ್ಲ ಆಡಳಿತ ಬದಲಾವಣೆಗೆ ದಾರಿ ಮಾಡಿಕೊಟ್ಟಿವೆ.
ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಹಲವಾರು ಹೆಸರುಗಳು ಕೇಳಿ ಬರುತ್ತಿವೆಯಾದರೂ ಬಿಜೆಪಿ ಅಚ್ಚರಿಗಳನ್ನು ಸೃಷ್ಟಿಸುವಲ್ಲಿ ಹೆಸರುವಾಸಿಯಾಗಿದೆ. ಬಿಹಾರದಲ್ಲಿ ಪ್ರಸ್ತುತ ಬಿಜೆಪಿಯ ಇಬ್ಬರು ಉಪ ಮುಖ್ಯಮಂತ್ರಿಗಳಿದ್ದು, ಅವರಲ್ಲಿ ಗೃಹ ಖಾತೆಯನ್ನೂ ಹೊಂದಿರುವ ಸಾಮ್ರಾಟ್ ಚೌಧರಿ ಹೆಚ್ಚು ಪ್ರಭಾವಿಯಾಗಿದ್ದಾರೆ.
ಪಾಟ್ನಾ ದಿಘಾ ಶಾಸಕ ಸಂಜೀವ ಚೌರಾಸಿಯಾ ಅವರ ಹೆಸರೂ ಚರ್ಚೆಯಾಗುತ್ತಿದೆ. ಯಾದವ್ ಸಮುದಾಯಕ್ಕೆ ಸೇರಿರುವ ಕೇಂದ್ರ ಸಚಿವ ನಿತ್ಯಾನಂದ ರಾಯ್ ಅವರು ಕೇಂದ್ರ ಗೃಹಸಚಿವರ ಪರಮಾಪ್ತರಾಗಿದ್ದು,ಅವರ ಹೆಸರೂ ಹರಿದಾಡುತ್ತಿದೆ.