ನಂಬಿಕೆ ದ್ರೋಹ ಎಸೆದ ಮನೆ ಕೆಲಸದಾಕೆ – ಮಗಳ ಮದುವೆ ಸಾಲ ತೀರಿಸಲು ಕಳ್ಳತನ, ಚಿನ್ನಾಭರಣ ಸಮೇತ ಬಂಧನ!

ಬೆಂಗಳೂರು: ಮಗಳ ಮದುವೆಗೆ ಮಾಡಿಕೊಂಡಿದ್ದ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಮಹಿಳೆಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ.
ಜೆ.ಪಿ.ನಗರ 2ನೇ ಹಂತದ ವಿವೇಕಾನಂದ ಸಂಕೀರ್ಣದ ನಿವಾಸಿ ಶಾಂತಿ ಅಲಿಯಾಸ್ ಲಕ್ಷ್ಮೀ (40) ಬಂಧಿತೆ. ಆಕೆಯಿಂದ 14.30 ಲಕ್ಷ ರೂ.
ಮೌಲ್ಯದ 143 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಜೆ.ಪಿ.ನಗರದ 2ನೇ ಹಂತದಲ್ಲಿರುವ ಆಯಿಷಾ ಸಿದ್ದಿಕ್ಕಿ ಎಂಬವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮನೆಯಲ್ಲಿ ಶಾಂತಿ ಕಳೆದ ಮೂರು ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿದ್ದಳು. ಹೀಗಾಗಿ ಆಕೆ ಮೇಲೆ ಆಯಿಷಾ ಕುಟುಂಬ ತುಂಬಾ ನಂಬಿಕೆ ಇಟ್ಟಿದ್ದು, ಬೆಡ್ರೂಮ್ ಸೇರಿ ಎಲ್ಲೆಡೆ ಓಡಾಡಲು ಅವಕಾಶ ನೀಡಲಾಗಿತ್ತು. ಅದನ್ನೇ ದುರುಪಯೋಗ ಪಡಿಸಿಕೊಂಡ ಆರೋಪಿ ಚಿನ್ನಾಭರಣ ಕಳವು ಮಾಡಿದ್ದಾಳೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.

ದೂರುದಾರೆ ಆಯಿಷಾ ಮನೆಯ ವಾರ್ಡ್ರೂಬ್ನಲ್ಲಿದ್ದ 4 ಬಂಗಾರದ ಬಳೆಗಳು, 1 ಬಂಗಾರ ನಕ್ಲೇಸ್ ಅನ್ನು ಸಂಬಂಧಿಕರ ಮನೆಯ ಮದುವೆಗೆಂದು ಬಳಸಿ, ಬಳಿಕ ಅಲ್ಲಿಯೇ ಇರಿಸಿದ್ದರು. ಕಳೆದ ಮೇ 17ರಂದು ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ವಾರ್ಡ್ರೂಬ್ ತೆರೆದಾಗ ಚಿನ್ನಾಭರಣಗಳು ನಾಪತ್ತೆಯಾಗಿತ್ತು. ಕೂಡಲೇ ಮನೆಕೆಲಸದಾಕೆ ಶಾಂತಿಯನ್ನು ವಿಚಾರಿಸಿದ್ದಾರೆ. ಆದರೆ, ಆಕೆ ತಾನು ಕಳವು ಮಾಡಿಲ್ಲ ಎಂದು ಉತ್ತರಿಸಿದ್ದಳು ಎಂದು ಅವರು ಹೇಳಿದರು.
ಮತ್ತೂಂದೆಡೆ ವಾರ್ಡ್ರೂಬ್ನ ಕೀ ಬಳಸಿಯೇ ಕಳವು ಮಾಡಿ, ಬಳಿಕ ಕೀಯನ್ನು ಅದೇ ಜಾಗದಲ್ಲಿ ಇರಿಸಲಾಗಿತ್ತು. ಹೀಗಾಗಿ ಅನುಮಾನಗೊಂಡ ಆಯಿಷಾ, ಪೊಲೀಸ್ ಠಾಣೆಯಲ್ಲಿ ಶಾಂತಿ ಮೇಲೆ ಅನುಮಾನ ಇರುವುದಾಗಿ ದೂರು ನೀಡಿದ್ದರು. ಅದನ್ನು ಆಧರಿಸಿ ಶಾಂತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ತಪ್ಪಿಕೊಂಡಿದ್ದು, ಕೋಣನಕುಂಟೆ ಮತ್ತು ಮೈಕೋ ಲೇಔಟ್ನಲ್ಲಿರುವ ಜ್ಯೂವೆಲ್ಲರಿ ಶಾಪ್ನಲ್ಲಿ ಚಿನ್ನಾಭರಣ ಮಾರಿದ್ದಾಗಿ ಹೇಳಿದ್ದಳು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ಜೆ.ಪಿ.ನಗರ ಠಾಣೆಯ ಪಿಐ ವಿ.ಹರೀಶ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
ಪುತ್ರಿಯ ಮದುವೆಗೆ 6 ಲಕ್ಷ ರೂ. ಸಾಲ
ಆರೋಪಿ ಶಾಂತಿ ಆರೇಳು ತಿಂಗಳ ಹಿಂದಷ್ಟೇ ತನ್ನ ಮಗಳ ಮದುವೆ ಮಾಡಿದ್ದು, 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದಳು. ಆದರೆ, ತನ್ನ ವೇತನದಲ್ಲಿ ಸಾಲ ತೀರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆಯಿಷಾ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ, ಮಾರಿದ್ದಾಗಿ ಹೇಳಿಕೆ ನೀಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.