Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರಾಣಹಾನಿಯ ದಾರಿಯಲ್ಲಿ ಬೆಸ್ಕಾಂ: ಸಾರ್ವಜನಿಕರ ಜೀವಗಳಿಗೆ ಏನು ಮೌಲ್ಯ?

Spread the love

ಬೆಂಗಳೂರು: ಮಳೆಗಾಲ ಆರಂಭವಾಗಿದೆ. ಬೆಂಗಳೂರು ನಗರದಲ್ಲಿ ಟ್ರಾನ್ಸ್‌ ಫಾರ್ಮರ್ ದೋಷಗಳು, ತುಂಡಾಗಿ ಬೀಳುವ ಕೇಬಲ್‌ಗಳು, ನೀರು ನಿಂತು ಆಗುವ ಅವಘಡಗಳಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿರುವ ಕರಾಳ ದಿನಗಳು ಕಣ್ಮುಂದೆ ಬರುತ್ತವೆ. ಈ ನಡುವೆಯೇ ಬೆಸ್ಕಾಂ ಒಂದು ಆಘಾತಕಾರಿ ವರದಿ ಬಿಡುಗಡೆ ಮಾಡಿದೆ.

ಳೆದ ಆರು ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ವಿದ್ಯುತ್ ಅವಘಡಗಳಿಂದ 118 ಜನರು ಸಾವನ್ನಪ್ಪಿದ್ದಾರೆ. ಇದು ಹಿಂದಿನ ದಶಕದ ವಾರ್ಷಿಕ ಸರಾಸರಿಗಿಂತ ಎರಡು ಪಟ್ಟು ಹೆಚ್ಚು ಇರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಬೆಸ್ಕಾಂ ಈ ಮಾಹಿತಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಸಲ್ಲಿಸಿದೆ.

ಸಾವಿಗೆ ಕಾರಣಗಳೇನು?

ವಿದ್ಯುತ್ ದರ ಪರಿಷ್ಕರಣೆ ಪ್ರಸ್ತಾವನೆಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಆದರೆ, ಬೆಸ್ಕಾಂ ಅಧಿಕಾರಿಗಳು ಇದು ಆತಂಕಕಾರಿ ಪ್ರವೃತ್ತಿಯಲ್ಲ ಬದಲಾಗಿ, ಸಾರ್ವಜನಿಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದಿದ್ದಾರೆ. ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅವಘಡಗಳು ಹೆಚ್ಚಾಗುತ್ತವೆ. ಕಳೆದ ವರ್ಷ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ಹೆಚ್ಚಿನ ಸಾವುಗಳು ಸಂಭವಿಸಿವೆ. ಕಳೆದ ವರ್ಷ ಹೆಚ್ಚಿನ ಸಾವುಗಳು ಸಾರ್ವಜನಿಕರ ನಿರ್ಲಕ್ಷ್ಯದಿಂದ ಸಂಭವಿಸಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಂಕಿಅಂಶಗಳು ಬೇರೆಯೇ ಹೇಳುತ್ತವೆ. 24 ಅಪಘಾತಗಳು ವಿದ್ಯುತ್ ತಂತಿಗಳಿಗೆ ಆಕಸ್ಮಿಕವಾಗಿ ತಗುಲಿದ್ದರಿಂದ ಸಂಭವಿಸಿವೆ. 7 ಸಾವು ನಿರ್ವಹಣೆಯ ಕೊರತೆಯಿಂದ, 9 ಮೇಲ್ವಿಚಾರಣೆಯ ಕೊರತೆಯಿಂದ, 10 ತಂತಿಗಳು ತುಂಡಾದ್ದರಿಂದ ಮತ್ತು 24 ಇತರ ಕಾರಣಗಳಿಂದ ಸಂಭವಿಸಿವೆ. ಇದು ಬೆಸ್ಕಾಂನ ನಿರ್ಲಕ್ಷ್ಯವನ್ನು ಸೂಚಿಸುತ್ತದೆ.

ಕೆಇಆರ್‌ಸಿ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದೆ. ಕಡಿಮೆ-ವೋಲ್ಟೇಜ್ ತಂತಿಗಳು ತುಂಡಾಗುವುದು, ಸಾಕಷ್ಟು ಅಂತರವಿಲ್ಲದಿರುವುದು, ಮೇಲ್ವಿಚಾರಣೆಯ ಕೊರತೆ ಮತ್ತು ಕಳಪೆ ನಿರ್ವಹಣೆ ವಿದ್ಯುತ್ ಅವಘಡಗಳಿಗೆ ಪ್ರಮುಖ ಕಾರಣಗಳಾಗಿವೆ. ಇವು ಎಸ್ಕಾಂಗಳ ನಿರ್ಲಕ್ಷ್ಯವನ್ನು ತೋರಿಸುತ್ತವೆ ಎಂದು ಕೆಇಆರ್‌ಸಿ ಹೇಳಿದೆ. ವಿದ್ಯುತ್ ಅವಘಡಗಳನ್ನು ಕಡಿಮೆ ಮಾಡಲು ಮತ್ತು ಪ್ರಾಣಹಾನಿಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೆಇಆರ್‌ಸಿ ಎಸ್ಕಾಂಗಳಿಗೆ ನಿರ್ದೇಶನ ನೀಡಿದೆ.

2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಈ ದುರ್ಘಟನೆಗಳು ಸಂಭವಿಸಿವೆ. ಬೆಂಗಳೂರು ನಗರ, ಗ್ರಾಮಾಂತರ, ದಾವಣಗೆರೆ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳಲ್ಲಿ ಈ ಅವಘಡಗಳು ಸಂಭವಿಸಿವೆ. ಇದೇ ಅವಧಿಯಲ್ಲಿ 61 ಪ್ರಾಣಿಗಳು ವಿದ್ಯುತ್ ಅವಘಡಗಳಿಂದ ಸಾವನ್ನಪ್ಪಿವೆ. 2024-25ನೇ ಸಾಲಿನ ಅಂತಿಮ ಅಂಕಿಅಂಶಗಳು ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಫೆಬ್ರವರಿ ವೇಳೆಗೆ ಒಟ್ಟು ಸಾವುಗಳ ಸಂಖ್ಯೆ 150 ದಾಟಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ. 2018-2019 ರಲ್ಲಿ 136 ಸಾವು ಸಂಭವಿಸಿದ್ದವು. ಇದುವರೆಗಿನ ಅತಿ ಹೆಚ್ಚು ಸಾವು ಈ ವರ್ಷದಲ್ಲಿ ದಾಖಲೆಯಾಗಿತ್ತು.


ಬೆಂಗಳೂರು ನಗರ ನಿವಾಸಿಗಳಲ್ಲಿ ಆತಂಕ

ಬೆಂಗಳೂರಿನ ವಿದ್ಯುತ್ ಮೂಲಸೌಕರ್ಯದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ” ವಿದ್ಯುತ್ ಕೇಬಲ್‌ಗಳು ತುಂಡಾಗಿ ನೇತಾಡುತ್ತಿರುವುದು ಅಥವಾ ಫುಟ್‌ಪಾತ್‌ಗಳಲ್ಲಿ ಬಿದ್ದಿರುವುದು ಸಾಮಾನ್ಯವಾಗಿದೆ” ಎಂದು ಸುಡುಗುಂಟೆಪಾಳ್ಯದ ನಿವಾಸಿ ಪಾಯಲ್ ಯಾದವ್ ಹೇಳಿದ್ದಾರೆ. “ನಡೆಯಲು ಭಯವಾಗುತ್ತದೆ. ಎಲ್ಲೋ ತಪ್ಪಿ ಇಟ್ಟ ಒಂದು ಹೆಜ್ಜೆ ಕೂಡಾ ಮಾರಣಾಂತಿಕವಾಗಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಎಸ್‌ಜಿ ಪಾಳ್ಯ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಕಂಬ ಕುಸಿದು ಬಿದ್ದಿತ್ತು. ನೇತಾಡುತ್ತಿದ್ದ ಆಪ್ಟಿಕಲ್ ಫೈಬರ್ ಕೇಬಲ್ ನೀರಿನ ಟ್ಯಾಂಕರ್‌ಗೆ ತಗುಲಿದ್ದರಿಂದ ಈ ದುರ್ಘಟನೆ ಸಂಭವಿಸಿತ್ತು. ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಇದರಿಂದ ತೀವ್ರವಾಗಿ ಗಾಯಗೊಂಡಿದ್ದನು.

ಬೆಸ್ಕಾಂ ಏಪ್ರಿಲ್ ಮತ್ತು ಸೆಪ್ಟೆಂಬರ್ 2024ರ ನಡುವೆ 39,024 ಅಪಾಯಕಾರಿ ಸ್ಥಳಗಳನ್ನು ಸರಿಪಡಿಸಿದೆ. ಆದರೆ, ಇನ್ನೂ 17,463 ಸ್ಪಾಟ್‌ಗಳನ್ನು ಸರಿಪಡಿಸಬೇಕಿದೆ. ವಿದ್ಯುತ್ ಮೂಲಸೌಕರ್ಯವನ್ನು ಸುಧಾರಿಸಲು ಕೆಲಸ ಮಾಡುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಕ್ರಮ ನಿರ್ಮಾಣಗಳನ್ನು ತಡೆಯಲು ಬೆಸ್ಕಾಂ, ಬಿಬಿಎಂಪಿಯೊಂದಿಗೆ ಕೈಜೋಡಿಸಿದೆ. ಹೆಚ್ಚಿನ ಸಾವುಗಳು ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸಿವೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಆದರೆ, ನಗರದಲ್ಲಿ ನೇತಾಡುವ ವಿದ್ಯುತ್ ತಂತಿಗಳು ಸಮಸ್ಯೆಯಾಗಿವೆ ಎಂದು ಅಧಿಕಾರಿಗಳು ಕೂಡಾ ಒಪ್ಪಿಕೊಳ್ಳುತ್ತಾರೆ. ಆಪ್ಟಿಕಲ್ ಫೈಬರ್ ಕೇಬಲ್‌ಗಳ ಕಾಟ ನಿಯಂತ್ರಣ ಮೀರಿ ಹೆಚ್ಚಾಗುತ್ತಿದೆ.


ರೈತರಿಂದ ಅಸುರಕ್ಷಿತ ಕ್ರಮ

“ರೈತರು ವಿದ್ಯುತ್ ಪಡೆಯಲು ಅನಧಿಕೃತವಾಗಿ ವಿದ್ಯುತ್ ಕೆಲಸ ಮಾಡುತ್ತಾರೆ. ಅಥವಾ ಕಾನೂನುಬಾಹಿರ ವಿದ್ಯುತ್ ಮೂಲಗಳನ್ನು ಬಳಸುತ್ತಾರೆ. ಅಂತಹ ಸಂದರ್ಭಗಳಲ್ಲಿ, ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುವುದರಿಂದ ಸಾವುಗಳು ಸಂಭವಿಸುತ್ತವೆ” ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೈರ್‌ಗಳನ್ನು ಕೊಕ್ಕೆ ಹಾಕಿ ಅಕ್ರಮವಾಗಿ ವಿದ್ಯುತ್ ಪಡೆಯಲು ಪ್ರಯತ್ನಿಸುವಾಗ ಹಲವು ವಿದ್ಯುತ್ ಸ್ಪರ್ಶದಿಂದ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿ ಹೇಳಿದ್ದಾರೆ.


ಕರ್ತವ್ಯನಿರತ ಬೆಸ್ಕಾಂ ಸಿಬ್ಬಂದಿಗಳ ಸಾವು

ಇತರ ಸರ್ಕಾರಿ ಏಜೆನ್ಸಿಗಳಾದ ಬಿಬಿಎಂಪಿ, ಬಿಡಿಎ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಕೈಗೊಳ್ಳುವ ಮೂಲಸೌಕರ್ಯ ಅಥವಾ ಅಭಿವೃದ್ಧಿ ಕಾರ್ಯಗಳ ಸಂದರ್ಭದಲ್ಲಿಯೂ ಸಾವುಗಳು ಸಂಭವಿಸಿವೆ. ಕರ್ತವ್ಯದಲ್ಲಿರುವಾಗ ಬೆಸ್ಕಾಂ ನೌಕರರು ಸಹ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. “ಕೆಲವೊಮ್ಮೆ, ನಮ್ಮ ಸಿಬ್ಬಂದಿ ಅತಿಯಾದ ಆತ್ಮವಿಶ್ವಾಸದಿಂದಾಗಿ ಕ್ಷೇತ್ರಕಾರ್ಯದ ಸಮಯದಲ್ಲಿ ಸುರಕ್ಷತಾ ನಿಯಮಗಳನ್ನು ಮೀರುತ್ತಾರೆ. ಸಣ್ಣ ಸಮಸ್ಯೆಗಳ ಬಗ್ಗೆ ದೂರುಗಳು ಬಂದಾಗ, ಅವರು ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸಿ, ತರಾತುರಿಯಲ್ಲಿ ಸರಿಪಡಿಸಲು ಮುಂದಾಗುತ್ತಾರೆ” ಎಂದು ಅಧಿಕಾರಿ ವಿವರಿಸಿದ್ದಾರೆ.

ಮಳೆಗಾಲದಲ್ಲಿ ಪ್ರಮುಖವಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ವಿದ್ಯುತ್ ತಂತಿಗಳ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಅಪಾಯಕಾರಿ ಪರಿಸ್ಥಿತಿ ಕಂಡುಬಂದರೆ, ತಕ್ಷಣ ಬೆಸ್ಕಾಂಗೆ ತಿಳಿಸಬೇಕು ಎಂದು ಇಲಾಖೆಯು ತಿಳಿಸಿದೆ.


Spread the love
Share:

administrator

Leave a Reply

Your email address will not be published. Required fields are marked *