ಬೆಳ್ಳಾರೆ–ಸವಣೂರು ರಸ್ತೆ ಗರ್ಭದಲ್ಲಿ ಗಂಭೀರ ತೀವ್ರತೆ: ಹೊಳೆ ಬದಿ ಕುಸಿತದಿಂದ ಸಂಚಾರಕ್ಕೆ ಭಾರಿ ಆತಂಕ

ಬೆಳ್ಳಾರೆ :ಧರ್ಮಸ್ಥಳವನ್ನು ಸುಳ್ಯ ಭಾಗದಿಂದ ಸಂಪರ್ಕಿಸುವ ಬೆಳ್ಳಾರೆ-ಸವಣೂರು ನಡುವಣ ಮಾಪ್ಲ ಮಜಲು ಬಳಿ ಹೊಳೆ ಬದಿ ಕುಸಿದಿದ್ದು ಸಂಚಾರ ಸ್ಥಗಿತದ ಆತಂಕ ಮೂಡಿದೆ.
ಗೌರಿ ಹೊಳೆಗೆ ತಾಗಿಕೊಂಡಿರುವ ರಸ್ತೆ ಇದಾಗಿದೆ. ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ರಸ್ತೆಯ ಒಂದು ಬದಿ ಹೊಳೆ ಪಾಲಾಗಿದೆ.
ರಸ್ತೆಯ ಒಂದು ಭಾಗದ ಡಾಮರು ಬಿರುಕು ಬಿಟ್ಟಿದ್ದು ಇನ್ನಷ್ಟು ಕುಸಿಯುವ ಆತಂಕ ಮೂಡಿದೆ. ಕುಸಿತದ ಹೊಳೆ ಬದಿಯ ಸ್ಥಳಕ್ಕೆ ಕಲ್ಲು ಹಾಕ ಲಾಗಿದ್ದರೂ ಎಷ್ಟೆ ದಿನಕ್ಕೆ ಎಂಬ ಪ್ರಶ್ನೆ ಇದೆ.
4 ವರ್ಷದಲ್ಲೇ ರಸ್ತೆ ಬಿರುಕು
ಸವಣೂರು-ಬೆಳ್ಳಾರ ತನಕ ಲೋಕೋ ಪಯೋಗಿ ಇಲಾಖೆಯ ಪುತ್ತೂರು ಉಪ ವಿಭಾಗ ಮತ್ತು ಸುಳ್ಯ ಉಪವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವ ರಾಜ್ಯ ರಸ್ತೆ ಇದಾಗಿದೆ. 2021 ಮಾರ್ಚ್ಲ್ಲಿ ಈ ಎರಡೂ ಉಪವಿಭಾಗ ವ್ಯಾಪ್ತಿಯಲ್ಲಿ 7 ಕಿ.ಮೀ. ರಸ್ತೆ ಒಟ್ಟು 7.5 ಕೋ.ರೂ. ವೆಚ್ಚದಲ್ಲಿ 5.5 ಮೀ.ಅಗಲದಲ್ಲಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿತ್ತು. ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ-ಕಾಪುಕಾಡು ತನಕ 3.5 ರೂ.ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಇದೇ ರಸ್ತೆಯ ಮಾಪ್ಲಮಜಲು ಬಳಿ ಗೌರಿ ಹೊಳೆ ಬದಿಗೆ ತಡೆಗೋಡೆ ನಿರ್ಮಿಸಬೇಕು ಎನ್ನುವ ಬೇಡಿಕೆಯನ್ನು ಸಾರ್ವಜನಿಕರು ಇರಿಸಿದ್ದರು. ಆದರೆ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ಹರಿಸದ ಕಾರಣ ನಾಲ್ಕೇ ವರ್ಷದಲ್ಲಿ ರಸ್ತೆ ಬಿರುಕು ಬಿಟ್ಟಿದೆ.
ಪೈಪ್ ಲೈನ್ ಆವಾಂತರ
ಹೊಳೆ ಬದಿ ಕುಸಿಯುವ ಭೀತಿ ಹಲವು ವರ್ಷಗಳಿಂದ ಕಾಡುತ್ತಿದ್ದರೂ ಕೆಲವು ತಿಂಗಳ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೈಪ್ ಲೈನ್ ಅಳವಡಿಸುವ ಸಂದರ್ಭದಲ್ಲಿ ಹೊಳೆ ಬದಿ ಯನ್ನು ಅಗೆದು ಪೈಪ್ ಹಾಕಲಾಯಿತು. ಅದೇ ಸ್ಥಳ ಕುಸಿದಿದೆ.
ಡಾಮರು ಬಿರುಕು
ರಸ್ತೆಯ ಅರ್ಧ ಭಾಗದಿಂದ ಡಾಮರು ಬಿರುಕು ಬಿಟ್ಟಿದ್ದು ಅಷ್ಟು ಭಾಗವೂ ಹೊಳೆ ಪಾಲಾಗುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಹೊಳೆ ಬದಿ ನೀರು ಪಾಲಾಗುತ್ತಿದ್ದು ಡಾಮರು ರಸ್ತೆಯೇ ಕುಸಿದಂತೆ ಕಾಣುತ್ತಿದೆ.
ಇನ್ನು ಮಳೆಗಾಲದಲ್ಲಿ ಗೌರಿ ಹೊಳೆ ಉಕ್ಕಿ ಹರಿದರೆ ಮಾಪ್ಲಮಜಲು ಬಳಿ ರಸ್ತೆಗೆ ನೀರು ನುಗ್ಗಿ ತಾಸುಗಟ್ಟಲೆ ಬಂದ್ ಆಗುತ್ತದೆ. ನೀರು ರಸ್ತೆಯಿಂದ ಇಳಿಯುವ ತನಕವೂ ವಾಹನ ಸವಾರರು ಕಾಯಬೇಕು.
ಎಚ್ಚರಿಕೆ ಫಲಕ: ಸುರಕ್ಷತೆಯ ದೃಷ್ಟಿ ಯಿಂದ ಪೆರುವಾಜೆ ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆ ಫಲಕ ಅಳವಡಿಸಲಾಗಿದೆ.
ನಿರ್ಲಕ್ಷ್ಯ ಕಾರಣ
ಈ ಹಿಂದೆ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ತಡೆಗೋಡೆ ನಿರ್ಮಾಣ, ರಸ್ತೆ ಎತ್ತರಿಸುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದರೂ ಅವರು ಅದಕ್ಕೆ ಸ್ಪಂದನೆ ನೀಡಿರಲಿಲ್ಲ. ಈಗ ಅದರ ಪರಿಣಾಮ ಉಂಟಾಗಿದೆ. ಕುಸಿತದ ಸ್ಥಳಕ್ಕೆ ತಾತ್ಕಾಲಿಕವಾಗಿ ಕಲ್ಲು ಹಾಕಲಾಗಿದ್ದರೂ ಮಳೆಗಾಲದಲ್ಲಿ ಮತ್ತೆ ಕುಸಿತ ಕಾಣುವ ಸಾಧ್ಯತೆ ಇದೆ.
– ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷರು, ಪೆರುವಾಜೆ ಗ್ರಾ.ಪಂ.
ರಸ್ತೆಯೇ ಹೊಳೆ ಪಾಲಾಗಬಹುದು
ಕುಡಿಯುವ ನೀರಿನ ಪೈಪ್ ಲೈನ್ ಪರಿಣಾಮದಿಂದಲೂ ಹೊಳೆ ಬದಿ ಕುಸಿದಿದೆ. ರಸ್ತೆ ಡಾಮರು ಬಿರುಕು ಬಿಟ್ಟಿದೆ. ಈಗಾಗಲೇ ಶಾಸಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ತಡೆಗೋಡೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ. ತಡೆಗೋಡೆ ನಿರ್ಮಿಸದಿದ್ದರೆ ರಸ್ತೆಯೇ ಹೊಳೆ ಪಾಲಾಗಬಹುದು.
-ಪದ್ಮನಾಭ ಶೆಟ್ಟಿ ಪೆರುವಾಜೆ ಗ್ರಾ.ಪಂ. ಸದಸ್ಯ