ಬೇಲೆಕೇರಿ ಅಕ್ರಮ ಅದಿರು ರಫ್ತು ಪ್ರಕರಣ: ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಇಡಿ ದಾಳಿ; ಕರ್ನಾಟಕ, ಹರಿಯಾಣದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ನವದೆಹಲಿ: ಬೇಲೆಕೇರಿ ಬಂದರಿನ ಮೂಲಕ ಅಕ್ರಮ (Belekeri Illegal Iron Ore Case) ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಕರ್ನಾಟಕ ಮತ್ತು ಹರಿಯಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.

ಹರಿಯಾಣದ ಗುರುಗ್ರಾಮ್ನ ಕೆಲವು ಸ್ಥಳಗಳು ಹಾಗೂ ಬೆಂಗಳೂರು ಮತ್ತು ಹೊಸಪೇಟೆ (ವಿಜಯನಗರ ಜಿಲ್ಲೆ)ಯಲ್ಲಿ ಕನಿಷ್ಠ 20 ಸ್ಥಳಗಳ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ದಾಳಿ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದ ನಂತರ, ಈ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಹಲವಾರು FIRಗಳು ಮತ್ತು ಚಾರ್ಜ್ಶೀಟ್ಗಳಿಂದ ಹಣ ವರ್ಗಾವಣೆ ತನಿಖೆ ಹುಟ್ಟಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡಿ ಶೋಧದಲ್ಲಿ ಒಳಗೊಂಡಿರುವ ಕಂಪನಿಗಳಲ್ಲಿ MSPL ಲಿಮಿಟೆಡ್ (ಬಾಲ್ಡೋಟಾ ಗ್ರೂಪ್), ಗ್ರೀನ್ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂ., ಅರ್ಷದ್ ಎಕ್ಸ್ಪೋರ್ಟ್ಸ್, SVM ನೆಟ್ ಪ್ರಾಜೆಕ್ಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಮತ್ತು ಆಲ್ಫೈನ್ ಮಿನ್ಮೆಟಲ್ಸ್ ಇಂಡಿಯಾ ಪ್ರೈ. ಲಿ. ಕಂಪನಿಗಳು ಮತ್ತು ಪ್ರಮುಖ ನಿರ್ವಹಣಾ ವ್ಯಕ್ತಿಗಳು ಸೇರಿದ್ದಾರೆ.
ಆರೋಪಿಗಳು ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗೆದು, ಖರೀದಿಸಿ, ಮಾರಾಟ ಮಾಡಿ, ಸರಿಯಾದ ತೆರಿಗೆ ಮತ್ತು ರಾಯಧನವನ್ನು ಪಾವತಿಸದೆ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ರಾಜ್ಯದ ಖಜಾನೆಗೆ ಭಾರಿ ನಷ್ಟವನ್ನುಂಟು ಮಾಡಿತು. ಪರಿಸರಕ್ಕೆ ಅಪಾರ ಹಾನಿಯನ್ನುಂಟು ಮಾಡಿತು ಎಂದು ಇಡಿ ಮೂಲವೊಂದು ತಿಳಿಸಿದೆ.
ಈ ಬಂದರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, ಬಳ್ಳಾರಿಯಿಂದ ಬೇಲೆಕೇರಿಗೆ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸುವುದಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಸಂಸ್ಥೆಯು ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರನ್ನು ಬಂಧಿಸಿತ್ತು.