ಭಿಕ್ಷಾಟನೆ ಮುಕ್ತ ಇಂದೋರ್: ಮುಂದಿನ ಮಾದರಿ ನಗರಗಳಿಗೂ ಪ್ರೇರಣೆ

ಇಂದೋರ್: ಮಧ್ಯಪ್ರದೇಶದ ಇಂದೋರ್ ನಗರವು ದೇಶದ ಮೊದಲ ಭಿಕ್ಷಾಟನೆ ಮುಕ್ತ ನಗರವಾಗಿ ಹೊರಹೊಮ್ಮಿದೆ ಎಂದು ಅಧಿಕಾರಿಗಳು ಗುರುವಾರ ಘೋಷಿಸಿದ್ದಾರೆ. ಕಳೆದ ವರ್ಷ ಇಂದೋರ್ನ ಬೀದಿಗಳಲ್ಲಿ ಸುಮಾರು 5,000 ಭಿಕ್ಷುಕರು ಇದ್ದರು.
ಆಡಳಿತವು ಭಿಕ್ಷಾಟ ನಿರ್ಮೂಲನೆಗಾಗಿ ವಿಶೇಷ ಯೋಜನೆಯನ್ನು ಆರಂಭಿಸಿತು. “ಇಂದೋರ್ ಈಗ ದೇಶದ ಮೊದಲ ಭಿಕ್ಷಾಟನೆ ಮುಕ್ತ ನಗರವಾಗಿದೆ,” ಎಂದು ಜಿಲ್ಲಾಧಿಕಾರಿ ಆಶೀಷ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಭಿಕ್ಷುಕರಿಗೆ ಉದ್ಯೋಗ ಕಲ್ಪಿಸುವ ಮೂಲಕ ಪುನರ್ವಸತಿ ಕಲ್ಪಿಸಲಾಗಿದೆ. ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ಶಾಲೆಗಳಿಗೆ ಸೇರಿಸಲಾಗಿದೆ ಎಂದು ಅವರು ವಿವರಿಸಿದರು. “ನಾವು ಆರಂಭಿಸಿದ ಭಿಕ್ಷಾಟನೆ ನಿರ್ಮೂಲನೆ ಯೋಜನೆಯು ರಾಷ್ಟ್ರೀಯ ಮಾದರಿಯಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಿಶ್ವಬ್ಯಾಂಕ್ ತಂಡವು ಇದನ್ನು ಗುರುತಿಸಿದೆ,” ಎಂದು ಅವರು ಹೇಳಿದರು.
ಇಂದೋರ್ ಸೇರಿದಂತೆ ದೇಶದ 10 ನಗರಗಳಲ್ಲಿ ಕೇಂದ್ರ ಸಚಿವಾಲಯವು ಭಿಕ್ಷಾಟನೆ ನಿರ್ಮೂಲನೆಗಾಗಿ ಪೈಲಟ್ ಯೋಜನೆಯನ್ನು ಆರಂಭಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಕಾರ್ಯಕ್ರಮಾಧಿಕಾರಿ ರಾಮನಿವಾಸ್ ಬುಧೋಲಿಯಾ, “ಈ ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಪ್ರಾರಂಭಿಸಲಾಯಿತು. ನಗರದಲ್ಲಿ ಸುಮಾರು 5,000 ಭಿಕ್ಷುಕರಿದ್ದರು, ಅದರಲ್ಲಿ 500 ಮಕ್ಕಳು ಸೇರಿದ್ದರು,” ಎಂದು ತಿಳಿಸಿದರು.
“ಮೊದಲ ಹಂತದಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಯಿತು. ನಂತರ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಯಿತು. ರಾಜಸ್ಥಾನದಿಂದ ಇಂದೋರ್ಗೆ ಭಿಕ್ಷಾಟನೆಗಾಗಿ ಬರುತ್ತಿದ್ದ ಅನೇಕ ಭಿಕ್ಷುಕರನ್ನೂ ಗುರುತಿಸಲಾಗಿದೆ” ಎಂದು ಬುಧೋಲಿಯಾ ಹೇಳಿದರು.
ನಗರದಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಭಿಕ್ಷುಕರಿಗೆ ಹಣ ನೀಡುವುದು ಅಥವಾ ಅವರಿಂದ ಯಾವುದೇ ವಸ್ತು ಖರೀದಿಸುವುದನ್ನೂ ನಿಷೇಧಿಸಲಾಗಿದೆ. ಈಗಾಗಲೇ ಈ ನಿಯಮ ಉಲ್ಲಂಘನೆಗಾಗಿ ಮೂರು ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.ಭಿಕ್ಷಾಟನೆ ಬಗ್ಗೆ ಮಾಹಿತಿ ನೀಡುವವರಿಗೆ 1,000 ರೂ. ಬಹುಮಾನ ನೀಡಲಾಗುತ್ತಿದ್ದು, ಈಗಾಗಲೇ ಅನೇಕರು ಈ ಬಹುಮಾನವನ್ನು ಪಡೆದಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.