ಪಾಕ್ ಐಎಸ್ಐಯಿಂದ ಪಹಲ್ಗಾಮ್ ಹತ್ಯೆಗೆ ಮುನ್ನ ಭಾರತದಲ್ಲಿ ದೊಡ್ಡ ದಾಳಿಯ ಸಂಚು

ನವದೆಹಲಿ: ಪಹಲ್ಗಾಮ್ ದಾಳಿಗೂ ಮುನ್ನ ಪಾಕಿಸ್ತಾನ ದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಭಾರತದಲ್ಲಿ ಪ್ರಮುಖ ದಾಳಿ ನಡೆಸಲು ಸಂಚು ರೂಪಿಸಿತ್ತು ಎನ್ನುವ ವಿಚಾರ ಇದೀಗ ಬಹಿರಂಗಗೊಂಡಿದೆ. ಆದರೆ ಆ ಸಂಚನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಹಚ್ಚಿ, ವಿಫಲಗೊಳಿಸಿದ್ದವು. ಪಹಲ್ಗಾಮ್ ಹತ್ಯೆಗೂ ಮುನ್ನವೇ ಈ ದಾಳಿಗೆ ಸಂಚು ರೂಪಿಸಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.
ದೆಹಲಿಯ ಹೋಟೆಲ್ವೊಂದರಲ್ಲಿ ನೇಪಾಳ ಮೂಲದ ಐಎಸ್ಐ ಏಜೆಂಟ್ ಅನ್ಸಾರುಲ್ ಮಿಯಾ ಅನ್ಸಾರಿಯನ್ನು ಬಂಧಿಸಲಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಅನ್ಸಾರಿ ಐಎಸ್ಐ ಆದೇಶದ ಮೇರೆಗೆ ಪಾಕಿಸ್ತಾನದಿಂದ ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದ. ಪಾಕಿಸ್ತಾನಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು.
ಕೇಂದ್ರೀಯ ಸಂಸ್ಥೆಗಳು ಮತ್ತು ದೆಹಲಿ ಪೊಲೀಸ್ ವಿಶೇಷ ದಳದ ನೇತೃತ್ವದಲ್ಲಿ ಜನವರಿ ಮತ್ತು ಮಾರ್ಚ್ 2025 ರ ನಡುವೆ ನಡೆಸಿದ ಅತ್ಯಂತ ರಹಸ್ಯ ಜಂಟಿ ಕಾರ್ಯಾಚರಣೆಯ ಭಾಗವಾಗಿ ಆತನನ್ನು ಅನ್ಸಾರಿ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಅನ್ಸಾರಿ ಐಎಸ್ಐನ ವ್ಯಾಪಕ ಬೇಹುಗಾರಿಕೆ ಜಾಲದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದ ಮತ್ತು ಪಾಕಿಸ್ತಾನಕ್ಕೆ ಭಾರತದ ಮಿಲಿಟರಿ ದಾಖಲೆಗಳನ್ನು ಸಂಗ್ರಹಿಸುವ ಮತ್ತು ಕಳುಹಿಸುವ ಕಾರ್ಯವನ್ನು ಅವರಿಗೆ ವಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.