ನಾಗರಹೊಳೆಯಲ್ಲಿ ಕರಡಿ ದಾಳಿ: ಅರಣ್ಯ ಇಲಾಖೆ ಸಿಬ್ಬಂದಿಗೆ ಗಂಭೀರ ಗಾಯ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದಲ್ಲಿ ಗಸ್ತು ತಿರುಗುವ ವೇಳೆ ಕರಡಿಯೊಂದು ದಾಳಿ ನಡೆಸಿ, ಅರಣ್ಯ ಇಲಾಖೆಯ ಪಿಸಿಪಿ ಸಿಬ್ಬಂದಿಯನ್ನು ಗಂಭೀರವಾಗಿ ಗಾಯಗೊಳಿಸಿದೆ.

ಅರಣ್ಯ ವೀಕ್ಷಕ ಮಾದ (35) ಎಂಬುವರು ಕರಡಿ ದಾಳಿಗೆ ತುತ್ತಾಗಿದ್ದು, ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಎಚ್.ಡಿ.ಕೋಟೆ ತಾಲೂಕಿನ ಸೋಗಹಳ್ಳಿ ಸಮೀಪದ ಎಂ.ಜಿ.ಹಳ್ಳಿ ಹಾಡಿಯ ನಿವಾಸಿ ಮಾದ ಅವರು ಎಂದಿನಂತೆ ಮಂಗಳವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿ, ಮಾದನಕಡ ಕ್ಯಾಂಪ್ನಿಂದ 5 ಮಂದಿಯ ತಂಡದೊಂದಿಗೆ ಗಸ್ತು ತಿರುಗಲು ಕಾಡಿಗೆ ಹೋಗಿದ್ದರು.
ಈ ವೇಳೆ ಗುಂಪಿನಲ್ಲಿ ಮುಂದೆ ಹೋಗುತ್ತಿದ್ದ ಮಾದ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಇದರಿಂದ ಅವರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಒಂದು ಭಾಗದ ಕಣ್ಣು ಕಿತ್ತು ಬಂದಿದೆ. ಕೂಡಲೇ ಉಳಿದ ನಾಲ್ವರು ಕಿರುಚಾಡಿದ್ದರಿಂದ ಕರಡಿ ಮಾದ ಅವರನ್ನು ಬಿಟ್ಟು ಓಡಿ ಹೋಗಿದೆ.
ಸಹೋದ್ಯೋಗಿಗಳು ಕೂಡಲೇ ಅರಣ್ಯ ಇಲಾಖೆಯ ವಾಹನದಲ್ಲಿ ಮಾದ ಅವರನ್ನು ಕಾಡಿನಿಂದ ಹೊರಗೆ ತಂದರು. ನಂತರ ಖಾಸಗಿ ಆಂಬುಲೆನ್ಸ್ ನಲ್ಲಿ ಮೈಸೂರಿಗೆ ಸಾಗಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿ.ಆರ್.ಟಿ. ವ್ಯಾಪ್ತಿಯಲ್ಲಿ ಸೋಮವಾರ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ತೆರಳಿದ್ದ ವೇಳೆ ಕರಡಿ ದಾಳಿ ನಡೆಸಿದ ಪರಿಣಾಮ ಸಿದ್ದೇಗೌಡ ಎಂಬುವರು ಮೃತಪಟ್ಟಿದ್ದರು.
ಎರಡು ತಿಂಗಳ ಅವಧಿಯಲ್ಲಿ ಹಲವೆಡೆ ಕರಡಿ ದಾಳಿ:
ಈ ದಾಳಿಯಿಂದಾಗಿ ಕಳೆದ ಎರಡು ತಿಂಗಳ ಅವಧಿಯಲ್ಲಿ ರಾಜ್ಯದ ಹಲವೆಡೆ ಕರಡಿ ದಾಳಿ ನಡೆದಿರುವುದು ವರದಿಯಾದಂತಾಗಿದೆ. ಜೊಯಿಡಾದಲ್ಲಿ ಎರಡು ಕರಡಿ ದಾಳಿ ಪ್ರಕರಣ ನಡೆದಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಕೊಪ್ಪಳದಲ್ಲಿ ನಡೆದ ಕರಡಿ ದಾಳಿಗೆ ವ್ಯಕ್ತಿ ಗಾಯಗೊಂಡಿದ್ದಾರೆ. ಸೋಮವಾರ (ಜು.14) ಬಿಳಿಗಿರಿರಂಗನ ಬೆಟ್ಟದಲ್ಲಿಯೂ ಕರಡಿ ದಾಳಿಗೆ ವ್ಯಕ್ತಿ ಮೃತಪಟ್ಟಿರುವುದು ವರದಿಯಾಗಿದೆ.