ಬೆಂಗಳೂರಿನ ಥಣಿಸಂದ್ರದಲ್ಲಿ ಬಿಡಿಎ ಬುಲ್ಡೋಝರ್ ಕಾರ್ಯಾಚರಣೆ

ಬೆಂಗಳೂರು: ನಗರದ ಥಣಿಸಂದ್ರ (ಸರೈಪಾಳ್ಯ) ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಳ್ಳಂಬೆಳಿಗ್ಗೆ ಬುಲ್ಡೋಝರ್ ಕಾರ್ಯಾಚರಣೆ ನಡೆಸಿ ಹಲವು ಮನೆಗಳನ್ನು ನೆಲಸಮಗೊಳಿಸಿದ್ದು, ಬಿಡಿಎ ಅಧಿಕಾರಿಗಳ ಈ ಕ್ರಮಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಮಗೆ ಯಾವುದೇ ನೋಟಿಸ್ ನೀಡದೆ ಬೆಳ್ಳಂಬೆಳಿಗ್ಗೆ ಬಿಡಿಎ ಅಧಿಕಾರಿಗಳು ಬಂದು ಮನೆಗಳನ್ನು ಕೆಡವಿದ್ದಾರೆ. ನಾವು ಎದ್ದಾಗ ಜೆಸಿಬಿಗಳು ನಿಂತಿದ್ದವು. ನಮಗೆ ಕನಿಷ್ಠ ತಯಾರಿಸಿಕೊಳ್ಳಲು ಸಮಯ ನೀಡಿಲ್ಲ. ಮಕ್ಕಳ ಹಾಲು, ಆಹಾರಕ್ಕೂ ವ್ಯವಸ್ಥೆಯಿಲ್ಲದೆ ನಾವು ಬೀದಿಗೆ ಬಂದಿದ್ದೇವೆ” ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ತೆರವು ಕಾರ್ಯಾಚರಣೆಯ ವೇಳೆ ಮನೆಯಲ್ಲಿದ್ದ ಸಾಮಗ್ರಿಗಳನ್ನು ರಸ್ತೆಗಳಿಗೆ ಎಸೆಯಲಾಗಿದ್ದು, ಯಾವುದೇ ಮುನ್ಸೂಚನೆ ನೀಡದೆ ಈ ರೀತಿ ಮಾಡುವುದು ಅನ್ಯಾಯ ಎಂದು ಜನರು ಕಿಡಿಕಾರಿದ್ದಾರೆ.

ಈ ಬಗ್ಗೆ ಪತ್ರಕರ್ತ ಮುಹಮ್ಮದ್ ಝುಬೈರ್ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, “ಉತ್ತರ ಬೆಂಗಳೂರಿನ ಸರೈಪಾಳ್ಯದಲ್ಲಿ ಬಿಡಿಎ ಧ್ವಂಸ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲಿನ ನಿವಾಸಿಗಳು ನೋಟಿಸ್ ನೀಡಿಲ್ಲ ಎಂದು ಆರೋಪಿಸುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಈ ಕಾರ್ಯಾಚರಣೆಯಿಂದಾಗಿ ಹಲವು ಕುಟುಂಬಗಳು ತಮ್ಮ ವಸತಿ ಕಳೆದುಕೊಂಡು ಬೀದಿಯಲ್ಲಿ ನಿಲ್ಲುವಂತಾಗಿದೆ. ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.