ಕಾಲ್ತುಳಿತದ ಭೀಕರತೆಯ ಪಥದಲಿ – ಚಪ್ಪಲಿ ಶೂಗಳ ರಾಶಿ ತೆರವುಗೊಳಿಸಿದ ಬಿಬಿಎಂಪಿ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾವಿರಾರು ಆರ್ಸಿಬಿ ಅಭಿಮಾನಿಗಳ ಭೀಕರ ಕಾಲ್ತುಳಿತದಲ್ಲಿ ಜನರು ತೊಟ್ಟಿದ್ದ ಶೂಗಳು ಮತ್ತು ಚಪ್ಪಲಿಗಳು ಸ್ಟೇಡಿಯಂ ಸುತ್ತಲೂ ಬಿದ್ದಿರುವ ದೃಶ್ಯವು ಕಾಲ್ತುಳಿತದ ಭೀಕರತೆಯನ್ನು ಬಿಚ್ಚಿಡುವಂತಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಕಾಲ್ತುಳಿತ ದುರ್ಘಟನೆ ಸಂಭವಿಸಿದ ಬಳಿಕ ಅಲ್ಲಿಂದ ಹಂತ-ಹಂತವಾಗಿ ಜನರನ್ನು ಕಳುಹಿಸಲಾಯಿತು.
ನೆರೆದಿದ್ದ ಲಕ್ಷಾಂತರ ಮಂದಿ ಆರ್ಸಿಬಿ ಅಭಿಮಾನಿಗಳು ಸ್ಟೇಡಿಯಂನಿಂದ ಹೊರ ಹೋಗಿ ತಡರಾತ್ರಿ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಖಾಲಿ-ಖಾಲಿಯಾಗಿತ್ತು. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನ ಪ್ರತಿ ಗೇಟ್ ಮುಂಭಾಗ ರಾಶಿ ರಾಶಿ ಚಪ್ಪಲಿ, ಶೂಗಳು ಬಿದ್ದಿದ್ದವು.
ಮಹಿಳೆಯರು, ಪುಟ್ಟ ಮಕ್ಕಳ ಸಾವಿರಾರು ಶೂ, ಚಪ್ಪಲಿ ರಾಶಿಗಳೇ ಭಯಾನಕತೆಯ ಕಥೆ ಹೇಳುವಂತಿದ್ದವು. ಅಲ್ಲಲ್ಲಿ, ಚೆಲ್ಲಾಪಿಲ್ಲಿಯಾಗಿ ಬಿದ್ದಿರೋ ಬ್ಯಾರಿಕೇಡ್ಗಳ ಕೆಳಗೆ ಎಲ್ಲಿ ನೋಡಿದರಲ್ಲಿ ಚಪ್ಪಲಿಗಳೇ ಕಂಡು ಬರುತ್ತಿದ್ದವು. ಜೊತೆಗೆ ನುಜ್ಜುಗುಜ್ಜಾಗಿರೋ ನೀರಿನ ಬಾಟಲ್ಗಳು, ಕನ್ನಡಕಗಳು ಕಂಡು ಬರುತ್ತಿದ್ದವು. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತಲಿನ ರಸ್ತೆ ಕಸದತೊಟ್ಟಿಯಂತಾಗಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲೂ ಚಪ್ಪಲಿಗಳ ರಾಶಿಗಳೇ ರಾರಾಜಿಸುತಿತ್ತು. ಗುರುವಾರ ಬೆಳಗ್ಗೆ ಬಿಬಿಎಂಪಿ ಸಿಬ್ಬಂದಿಗಳು ಸ್ಟೇಡಿಯಂ ಬಳಿ ಬಿದ್ದಿದ್ದ ಲೋಡ್ಗಟ್ಟಲೇ ಚಪ್ಪಲಿಗಳನ್ನು ಕಸದ ಗಾಡಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸುಮಾರು 2 ಲೋಡ್ಗೂ ಅಧಿಕ ಚಪ್ಪಲಿ ರಾಶಿಗಳನು ಹೊತ್ತೂಯ್ದಿದ್ದಾರೆ ಎಂದು ತಿಳಿದು ಬಂದಿದೆ.
1 ಕೋಟಿ ರೂ. ಪರಿಹಾರ ಕೊಡಲು ಆಗ್ರಹ:
ಇನ್ನು ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತದಲ್ಲಿ ಮೃತರ ಕುಟುಂಬಗಳಿಗೆ 1 ಕೋಟಿ ಪರಿಹಾರ ಕೊಡುವಂತೆ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಆಗ್ರಹಿಸಿದ್ದಾರೆ. ಸರಿಯಾದ ಭದ್ರತೆ, ಆಯಂಬುಲೆನ್ಸ್ ವ್ಯವಸ್ಥೆ ಇರಲಿಲ್ಲ. ಮೃತ ಕುಟುಂಬಗಳಿಗೆ ಬರೀ 10 ಲಕ್ಷ ರೂ. ಕೊಟ್ಟಿರೋದು ಖಂಡನೀಯ ಎಂದು ಆರೋಪಿಸಿದ್ದಾರೆ.
ಕೈ ಚಳಕ ತೋರಿಸಿದ ಮೊಬೈಲ್ ಕಳ್ಳರು:
ಏಕಾಏಕಿ ಲಕ್ಷಾಂತರ ಮಂದಿ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂನತ್ತ ಹರಿದು ಬಂದ ಹಿನ್ನೆಲೆಯಲ್ಲಿ ಉಂಟಾದ ನೂಕು ನುಗ್ಗಲನ್ನೇ ಬಂಡವಾಳ ಮಾಡಿಕೊಂಡ ಮೊಬೈಲ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಾಲ್ತುಳಿತದ ವೇಳೆ ಕಳ್ಳರು ನೂರಾರು ಮೊಬೈಲ್ ಲಪಟಾಯಿಸಿದ್ದಾರೆ. ಮೊಬೈಲ್ ಕಳೆದುಕೊಂಡುವರು ದೂರು ನೀಡಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ ಸಾಲುಗಟ್ಟಿನಿಂತಿರುವುದು ಕಂಡು ಬಂತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ಇನ್ನು ಆಟೋ ಚಾಲಕ ನಾಗರಾಜ್ ನಂ.20ರ ಗೇಟ್ ಬಳಿ ನಿಂತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು ಮೊಬೈಲ್ ಕಳುವಾಗಿರುವುದಾಗಿ ಹೇಳಿಕೊಳ್ಳುತ್ತಿದ್ದ. ಅಲ್ಲೇ ಓಡಾಡುತ್ತಿದ್ದ ಸುಮಾರು 20 ವರ್ಷದ ಯುವಕನನ್ನು ಅನುಮಾನದ ಮೇಲೆ ಹಿಡಿದು ಪರಿಶೀಲಿಸಿದಾಗ ಆತ ತನ್ನ ಸೊಂಟದ ಬೆಲ್ಟ್ನಲ್ಲಿ 10ಕ್ಕೂ ಹೆಚ್ಚು ಕದ್ದ ಮೊಬೈಲ್ಗಳನ್ನು ಇಟ್ಟುಕೊಂಡಿರುವುದು ಕಂಡು ಬಂದಿತ್ತು. ಸಾರ್ವಜನಿಕರು ಆತನನ್ನು ಕೂಡಲೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಫೋನ್ಗಳನ್ನು ತಪಾಸಣೆ ಮಾಡುವಾಗ ನಾಗರಾಜ್ ಅವರಿಗೆ ತಮ್ಮ ಫೋನ್ ಸಹ ಕಳುವಾಗಿರುವುದು ಗಮನಕ್ಕೆ ಬಂದಿದೆ.