ಸರ್ಕಾರದ ಆದೇಶವಿಲ್ಲದೆ ಬಸವಸಾಗರ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಬಿಡುಗಡೆ – ರೈತರ ಆಕ್ರೋಶ

ಯಾದಗಿರಿ: ಬಸವಸಾಗರ ಜಲಾಶಯನಾಲ್ಕು ಜಿಲ್ಲೆಯ ಜನರ ಜೀವನಾಡಿಯಾಗಿದೆ. ಅದೇ ಜಲಾಶಯ ನೀರು ಬಳಕೆ ಮಾಡಿಕೊಂಡು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯನ್ನು ಬೆಳೆಯಲಾಗುತ್ತದೆ. ಅದೇ ಜಲಾಶಯ ನೀರನ್ನು ಕುಡಿಯೋಕು ಸಹ ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಸರ್ಕಾರದ ಯಾವುದೇ ಆದೇಶವಿಲ್ಲದೆ ಅಧಿಕಾರಿಗಳು ಪಕ್ಕದ ತೆಲಂಗಾಣ ರಾಜ್ಯಕ್ಕೆ ನೀರು ಹರಿಬಿಟ್ಟಿದ್ದಾರೆ. ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಬಿಜೆಪಿ, ಅಧಿಕಾರಿಗಳ ವಿರುದ್ಧ ಕೆಂಡಕಾರಿದೆ.
ಯಾದಗಿರಿಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಿಂದ ತೆಲಂಗಾಣಕ್ಕೆ ನೀರು ಬಿಡಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ ಜೋರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಸವಸಾಗರ ಡ್ಯಾಂನಿಂದ ತೆಲಂಗಾಣಕ್ಕೆ ಕೃಷ್ಣನದಿ ಮೂಲಕ ನೀರು ಹರಿಬಿಡಲಾಗಿದೆ. ರಾತ್ರಿ ವೇಳೆ ಸುಮಾರು 1.24 ಟಿಎಂಸಿಯಷ್ಟು ನೀರನ್ನ ಹರಿಸಲಾಗಿದೆ.
ತೆಲಂಗಾಣಕ್ಕೆ ನೀರು ಬಿಟ್ಟಿದ್ದನ್ನು ರೈತರು ಖಂಡಿಸಿದ್ದಾರೆ. ಬಸವಸಾಗರ ಜಲಾಶಯ ನೀರನ್ನ ಯಾದಗಿರಿ, ವಿಜಯಪುರ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಯ ಲಕ್ಷಾಂತರ ರೈತರು ಅವಲಂಬಿಸಿದ್ದಾರೆ. 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯನ್ನು ಬೆಳೆಯುತ್ತಾರೆ. ನವೆಂಬರ್ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತರ ಎರಡನೇ ಬೆಳೆಗೆ ನೀರು ಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 10ರಿಂದ ಮಾರ್ಚ್ 23ರ ತನಕ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ವಾರಬಂದಿ ಅಂದರೆ 14 ದಿನಗಳ ಕಾಲ ನೀರು ಬಿಟ್ಟು ನಿರಂತರವಾಗಿ 10 ದಿನಗಳ ಕಾಲ ನೀರು ಬಂದ್ ಮಾಡಲಾಗುತ್ತದೆ. ಇದರಿಂದ ರೈತ ಮುಖಂಡರು ಆಕ್ರೋಶ ಹಾಕಿದ್ದಾರೆ.
ಕಳೆದ ವರ್ಷ ಡ್ಯಾಂನಲ್ಲಿ ನೀರಿನ ಕೊರತೆಯಿದ್ದ ಕಾರಣಕ್ಕೆ ಎರಡನೇ ಬೆಳೆಗೆ ನೀರು ಬಿಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ಇದೇ ಕಾರಣಕ್ಕೆ ರೈತರು ನಿರಂತರ ಹೋರಾಟ ಮಾಡಿದ್ದರು. ಕೆಲ ಸಂಘಟನೆಗಳು ಡ್ಯಾಂಗೆ ಮುತ್ತಿಗೆ ಹಾಕುವ ಪ್ರಯತ್ನ ಕೂಡ ಮಾಡಿದ್ದರು. ಇಷ್ಟಾದ ಬಳಿಕ ಸರ್ಕಾರ ರೈತರಿಗೆ ನೀರು ಒದಗಿಸುವ ಕೆಲಸ ಮಾಡಿತ್ತು. ಆದರೆ ಈಗ ಡ್ಯಾಂನಲ್ಲಿ ನೀರಿದೆ ಎನ್ನುವ ಕಾರಣಕ್ಕೆ ಸರ್ಕಾರದ ಯಾವುದೇ ಆದೇಶವಿಲ್ಲದೇ ಇದ್ದರೂ ಅಧಿಕಾರಿಗಳು ನೀರು ಬಿಟ್ಟಿದ್ದಾರೆ. ಬುಧವಾರ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಕಚೇರಿಗೆ ಭೇಟಿ ನೀಡಿದ ಮಾಜಿ ಸಚಿವ ರಾಜುಗೌಡ ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ.