Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚರಂಡಿಯಾಗಿ ಮಾರ್ಪಟ್ಟ ಬಸವಣ್ಣ ಕಾಲುವೆ – ಎಡಿಬಿಯಿಂದ ₹50 ಕೋಟಿ ವಾಪಸ್, ರಾಜ್ಯ ಸರ್ಕಾರದಿಂದ ₹64 ಕೋಟಿ ಮಂಜೂರು!

Spread the love

Hospet Basavanna Canal Project: ಬಸವಣ್ಣ ಕಾಲುವೆ ಸ್ಥಿತಿ ಕಂಡು ಎಡಿಬಿ ₹50 ಕೋಟಿ ವಾಪಸ್‌!

ಹೊಸಪೇಟೆ: ವಿಜಯನಗರ ಆಳರಸರ ಕಾಲದ ಕಾಲುವೆಗಳ ಆಧುನೀಕರಣಕ್ಕಾಗಿ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ಬಸವಣ್ಣ ಕಾಲುವೆ ಆಧುನೀಕರಣಕ್ಕಾಗಿ ನೀಡಿದ್ದ ₹50 ಕೋಟಿ ವಾಪಸ್‌ ಪಡೆದಿದೆ!. ಇದರಿಂದ ಈ ಕಾಲುವೆ ಆಧುನೀಕರಣಕ್ಕೆ ಹೊಡೆತ ಬೀಳಲಿದೆ ಎಂಬುದನ್ನರಿತು ರಾಜ್ಯ ಸರ್ಕಾರ ₹64 ಕೋಟಿ ಮಂಜೂರು ಮಾಡಿದೆ.

ವಿಜಯನಗರ ಆಳರಸರ ಕಾಲದ ಕಾಲುವೆಯಾದ ಬಸವಣ್ಣ ಕಾಲುವೆ ಚರಂಡಿಯಾಗಿ ಪರಿವರ್ತನೆಯಾಗಿದೆ. ಜೊತೆಗೆ ಕಾಲುವೆ ಒತ್ತುವರಿಯಾಗಿದೆ. ಇದು ನೀರಾವರಿ ಕಾಲುವೆಯಾಗಿದ್ದು, ಇದನ್ನು ಚರಂಡಿಯಾಗಿ ಮಾರ್ಪಾಡು ಮಾಡಲಾಗಿದೆ. ಆದರೂ ಸ್ಥಳೀಯಾಡಳಿತ (ನಗರಸಭೆ) ಈ ಬಗ್ಗೆ ಮುತುರ್ಜಿ ವಹಿಸಿಲ್ಲ. ಈ ಕಾಲುವೆ ಎ ಕೆಟಗರಿಯಿಂದ ಸಿ ಕೆಟಗರಿಗೆ ಹೋಗಿದೆ. ಹಾಗಾಗಿ ಈ ಕಾಲುವೆ ಆಧುನೀಕರಣಕ್ಕೆ ಮಂಜೂರಾಗಿರುವ ₹50 ಕೋಟಿ ನೀಡುವುದಿಲ್ಲ ಎಂದು ಎಡಿಬಿ ಸ್ಪಷ್ಟವಾಗಿ ಹೇಳಿ ಹಣ ವಾಪಸ್‌ ಪಡೆದಿದೆ. ಹಾಗಾಗಿ ಕಾಲುವೆ ಆಧುನೀಕರಣಕ್ಕೆ ಗುತ್ತಿಗೆ ಪಡೆದಿರುವ ಆರ್‌ಎನ್‌ಎಸ್‌ ಸಂಸ್ಥೆ ಕೂಡ ಕಾಲುವೆ ಆಧುನೀಕರಣ ಕಾಮಗಾರಿಯಿಂದ ಹಿಂದೆ ಸರಿದಿದೆ.

ಕಾಲುವೆ ಸ್ಥಿತಿ ಶೋಚನೀಯ:

ನಗರದ ಮಧ್ಯಭಾಗದಲ್ಲೇ ಹಾಯ್ದು ಹೋಗಿರುವ ಬಸವಣ್ಣ ಕಾಲುವೆ ಸ್ಥಿತಿ ಶೋಚನೀಯವಾಗಿದೆ. ಈ ಕಾಲುವೆಯಲ್ಲಿ ಚರಂಡಿ ನೀರು, ತ್ಯಾಜ್ಯ, ಕಸ, ಕಡ್ಡಿ ಸುರಿಯಲಾಗುತ್ತಿದೆ. ಹಾಗಾಗಿ ಕಾಲುವೆ ಸಂಪೂರ್ಣವಾಗಿ ಚರಂಡಿಯಾಗಿ ಮಾರ್ಪಟ್ಟಿದೆ. ಈ ಕಾಲುವೆ ಕುರಿತು ವಸ್ತುಸ್ಥಿತಿ ವರದಿ ಪಡೆದುಕೊಂಡ ಬಳಿಕವೇ ಎಡಿಬಿಯ ತಜ್ಞರು ₹50 ಕೋಟಿ ಹಣ ವಾಪಸ್‌ ಪಡೆದಿದ್ದಾರೆ.

ಈ ಕಾಲುವೆಯಲ್ಲಿ ಕಸ, ತ್ಯಾಜ್ಯ ಸೇರಿ ನಗರದ ಮೂರಂಗಡಿ ವೃತ್ತದ ಬಳಿ ಮಲಿನ ನೀರು ಆಗಾಗ ಹರಿಯುತ್ತಲೇ ಇರುತ್ತದೆ. ನೀರಾವರಿ ಇಲಾಖೆ ಹಾಗೂ ನಗರಸಭೆಯಿಂದ ಕಾಲುವೆ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಲೇ ಬರಲಾಗುತ್ತಿದೆ. ಜೂನ್‌ 14ರಂದು ಕೂಡ ಈ ಕಾಲುವೆ ನೀರು ರಸ್ತೆಯಲ್ಲಿ ಹರಿದಾಡಿತ್ತು. ಈಗ ಕಾಲುವೆಗೆ ನೀರು ಬಿಡುವುದನ್ನು ನಿಲ್ಲಿಸಲಾಗಿದೆ.

ಏನೀದು ಆಧುನೀಕರಣ ಯೋಜನೆ?:

ವಿಜಯನಗರದ ಆಳರಸರ ಕಾಲದ 16 ಕಾಲುವೆಗಳನ್ನು ಆಧುನೀಕರಣಗೊಳಿಸಲು ಎಡಿಬಿ ರಾಜ್ಯ ಸರ್ಕಾರಕ್ಕೆ ಅನುದಾನ ಮಂಜೂರು ಮಾಡಿದೆ. ವಿಜಯನಗರ ಜಿಲ್ಲೆಯಲ್ಲಿ ಐದು, ಕೊಪ್ಪಳ ಜಿಲ್ಲೆಯಲ್ಲಿ ಐದು, ಬಳ್ಳಾರಿ ಜಿಲ್ಲೆಯಲ್ಲಿ ಮೂರು ಮತ್ತು ರಾಯಚೂರು ಜಿಲ್ಲೆಯಲ್ಲಿ ಎರಡು ಕಾಲುವೆಗಳಿವೆ. ಈ ಕಾಲುವೆಗಳನ್ನು ವಿಜಯನಗರದ ಆಳರಸರ ಕಾಲದಲ್ಲೇ ನಿರ್ಮಿಸಲಾಗಿದೆ. ಈ ಕಾಲುವೆಗಳ ಆಧುನೀಕರಣಕ್ಕಾಗಿ ₹432 ಕೋಟಿಯನ್ನು ಎಡಿಬಿ ಮಂಜೂರು ಮಾಡಿತ್ತು. ಆದರೆ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಹೃದಯ ಭಾಗದಲ್ಲಿರುವ ಬಸವಣ್ಣ ಕಾಲುವೆಗೆ ಮಂಜೂರು ಮಾಡಿದ್ದ ಅನುದಾನವನ್ನು ವಾಪಸ್‌ ಪಡೆದಿದೆ. ಹಾಗಾಗಿ ಈ ಕಾಲುವೆ ಆಧುನೀಕರಣ ಕಾರ್ಯ ಕೈಗೊಳ್ಳಲಾಗಿಲ್ಲ. ಈ ಕಾಲುವೆಯ ಮೂಲಕ ಹೊಸಪೇಟೆ ತಾಲೂಕಿನ ರೈತರ ಹೊಲಗಳಿಗೆ ನೀರು ಹೋಗಲಿದೆ.

ಈ ಕಾಲುವೆ ಸ್ಥಿತಿ ಮುಂದೇನು?:

ಈಗ ಎಡಿಬಿ ಹಣ ವಾಪಸ್‌ ಹೋಗಿರುವ ಹಿನ್ನೆಲೆ ನೀರಾವರಿ ಇಲಾಖೆಯೇ ₹64 ಕೋಟಿ ಮಂಜೂರು ಮಾಡಿದೆ ಎಂದು ನೀರಾವರಿ ಇಲಾಖೆಯ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ. ಸದ್ಯದಲ್ಲೇ ಟೆಂಡರ್‌ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲು ಇಲಾಖೆ ಮುಂದಾಗಿದೆ. ಈ ಕಾಲುವೆಗೆ ನಗರದಲ್ಲಿ ಜಾಲರಿ ಹಾಕಬೇಕೆಂಬ ಕೂಗಿದೆ. ಈ ಕಾರ್ಯ ಮಾಡಿದರೆ ಕಾಲುವೆ ಉಳಿಯಲಿದೆ. ಜೊತೆಗೆ ತ್ಯಾಜ್ಯ ಕೂಡ ಸೇರುವುದಿಲ್ಲ ಎಂಬ ಚರ್ಚೆಯೂ ನಡೆದಿದೆ. ಈ ಕಾರ್ಯ ಕೈಗೂಡಿದರೆ, ಈ ಕಾಲುವೆ ಚರಂಡಿ ಹಣೆಪಟ್ಟಿಯಿಂದ ಮುಕ್ತಿ ಹೊಂದಲಿದೆ


Spread the love
Share:

administrator

Leave a Reply

Your email address will not be published. Required fields are marked *