“ಎಚ್ಡಿಎಫ್ಸಿ ಬ್ಯಾಂಕ್ ಅಧ್ಯಕ್ಷರ ದಿಢೀರ್ ರಾಜೀನಾಮೆ: ನೈತಿಕ ಸಂಘರ್ಷವೇ ಕಾರಣ ಎಂದ ಅತಾನು ಚಕ್ರವರ್ತಿ”

ಹೊಸದಿಲ್ಲಿ: HDFC ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷ ಹಾಗೂ ಸ್ವತಂತ್ರ ನಿರ್ದೇಶಕರಾದ ಅತನು ಚಕ್ರವರ್ತಿ ಅವರು ‘ನೈತಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬುಧವಾರದಿಂದಲೇ ಅವರ ರಾಜೀನಾಮೆ ಜಾರಿಯಾಗಿದೆ.
ಬ್ಯಾಂಕಿನ ಆಡಳಿತ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಗೆ ಬರೆದ ಪತ್ರದಲ್ಲಿ ಕಳೆದ ಎರಡು ವರ್ಷಗಳಲ್ಲಿ ಬ್ಯಾಂಕಿನೊಳಗಿನ ಕೆಲವು ಘಟನೆಗಳು ಮತ್ತು ನಡೆಗಳು ತಮ್ಮ ವೈಯಕ್ತಿಕ ಮೌಲ್ಯಗಳು ಹಾಗೂ ನೀತಿಶಾಸ್ತ್ರಕ್ಕೆ ಹೊಂದಿಕೆಯಾಗಿಲ್ಲವೆಂದು ತಿಳಿಸಿದ್ದಾರೆ. ಇದೇ ಕಾರಣದಿಂದ ಹುದ್ದೆಯಿಂದ ಹೊರಬರುವ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಇದಲ್ಲದೆ ಬೇರೆ ಯಾವುದೇ ಕಾರಣಗಳಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಮೇ 2021ರಲ್ಲಿ ಮಂಡಳಿಗೆ ಸೇರ್ಪಡೆಯಾದ ಅವರು, ತಮ್ಮ ಅವಧಿಯಲ್ಲಿ HDFC Ltd-HDFC ಬ್ಯಾಂಕ್ ವಿಲೀನದಂತಹ ಮಹತ್ವದ ಬೆಳವಣಿಗೆ ನಡೆದಿದೆ ಎಂದು ಹೇಳಿದ್ದಾರೆ. ಈ ವಿಲೀನದಿಂದ ಬ್ಯಾಂಕ್ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿ ಬೆಳೆದಿದ್ದರೂ, ಅದರ ಸಂಪೂರ್ಣ ಪ್ರಯೋಜನಗಳು ಇನ್ನೂ ಕಾಣಿಸಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
NDTV Profit ಗೆ ಪ್ರತಿಕ್ರಿಯಿಸಿದ ಅವರು, “ಬ್ಯಾಂಕ್ನಲ್ಲಿ ಯಾವುದೇ ತಪ್ಪುಗಳನ್ನು ನಾನು ಆರೋಪಿಸುತ್ತಿಲ್ಲ. ಆದರೆ ನನ್ನ ಸಿದ್ಧಾಂತಗಳು ಸಂಸ್ಥೆಯೊಂದಿಗೆ ಹೊಂದಿಕೆಯಾಗಲಿಲ್ಲ” ಎಂದು ಹೇಳಿದ್ದಾರೆ.
ಚಕ್ರವರ್ತಿ ತಮ್ಮ ಪತ್ರದಲ್ಲಿ ಮಂಡಳಿ ಹಾಗೂ ಹಿರಿಯ ಆಡಳಿತದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
HDFC ಬ್ಯಾಂಕ್ ತನ್ನ ಹೇಳಿಕೆಯಲ್ಲಿ, ರಾಜೀನಾಮೆಗೆ ಅವರು ಉಲ್ಲೇಖಿಸಿದ ಕಾರಣಗಳ ಹೊರತು ಬೇರೆ ಕಾರಣಗಳಿಲ್ಲವೆಂದು ದೃಢಪಡಿಸಿದೆ. ಅವರ ಸೇವೆಗೆ ಮಂಡಳಿ ಧನ್ಯವಾದ ತಿಳಿಸಿದೆ.
ಇದರ ನಡುವೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೇಕಿ ಮಿಸ್ತ್ರಿಯನ್ನು ಮಾರ್ಚ್ 19ರಿಂದ ಮೂರು ತಿಂಗಳ ಕಾಲ ಮಧ್ಯಂತರ ಅರೆಕಾಲಿಕ ಅಧ್ಯಕ್ಷರಾಗಿ ನೇಮಿಸಲು ಅನುಮೋದನೆ ನೀಡಿದೆ. ಬ್ಯಾಂಕಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟಿದ್ದೇವೆ ಎಂದು RBI ಹೇಳಿದೆ.ಅದೇ ವೇಳೆ, HDFC ಬ್ಯಾಂಕ್ ವ್ಯವಸ್ಥಾತ್ಮಕವಾಗಿ ಪ್ರಮುಖ ಬ್ಯಾಂಕ್ (D-SIB) ಆಗಿದ್ದು, ಅದರ ಆಡಳಿತ ಅಥವಾ ಕಾರ್ಯವಿಧಾನದಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಕಂಡುಬಂದಿಲ್ಲವೆಂದು RBI ಸ್ಪಷ್ಟಪಡಿಸಿದೆ.