ಧರ್ಮಸ್ಥಳ ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ನಿರ್ಬಂಧ: ಹೈಕೋರ್ಟ್ ಆದೇಶ

ಬೆಂಗಳೂರು : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ಹಾಗೂ ಅಪಪ್ರಚಾರ ಮಾಡದಂತೆ ಹೈಕೋರ್ಟ್ ಯೂಟ್ಯೂಬರ್ ಸಮೀರ್ ಹಾಗೂ ಕೆಲ ಸಾಮಾಜಿಕ ಜಾಲತಾಣಗಳಿಗೆ ಆದೇಶಿಸಿದೆ.
ನ್ಯಾಯಮೂರ್ತಿ ನಟರಾಜ್ ಅವರಿದ್ದ ಏಕ ಸದಸ್ಯ ಪೀಠ ಆದೇಶ ನೀಡಿದೆ. ಸಾರ್ವಜನಿಕ ಸಭೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಡಾ.ವೀರೇಂದ್ರ ಹೆಗ್ಗಡೆ, ಅವರ ಕುಟುಂಬ, ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಅಪಪ್ರಚಾರ ಅಥವಾ ಮಾನಹಾನಿ ಹೇಳಿಕೆ ನೀಡಬಾರದು. ಅಲ್ಲದೆ, ಯೂಟ್ಯೂಬರ್ ಸಮೀರ್ ಹಾಗೂ ಇತರೆ ಜಾಲತಾಣದಲ್ಲಿ ಯಾವುದೇ ಧಾರಗಳಿಲ್ಲದೆ ಅಪ್ ಲೋಡ್ ಮಾಡಿರುವ ವಿಡಿಯೋಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ.
2023ರ ಜುಲೈನಲ್ಲೇ ನಿರ್ಬಂಧ : ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರು ನಡೆಸುತ್ತಿರುವ ಸಂಸ್ಥೆಗಳ ವಿರುದ್ದ ಅವಹೇಳನಕಾರಿಯಾಗಿ ಮಾತನಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ 2023 ಜುಲೈನಲ್ಲಿ ನಿರ್ಬಂಧಕಾಜ್ಞೆ ನೀಡಿತ್ತು.
ಧರ್ಮಸ್ಥಳದ ದೇವಸ್ಥಾನ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಅವರು ನಡೆಸುತ್ತಿರುವ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ದ ಮೇಲೆ ಹೇಳಿದ 6 ಮಂದಿ ವ್ಯಕ್ತಿಗಳು, ಫೇಸ್ಬುಕ್, ವಾಟ್ಸ್ ಆಪ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಯೂಟ್ಯೂಬ್, ಟಿವಿ ಟಿವಿ ಚಾನಲ್ ಮತ್ತು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರು ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡದಂತೆ ನಿರ್ಬಂಧ ವಿಧಿಸಿತ್ತು.
ಅಲ್ಲದೆ ಈಗಾಗಲೇ ಟಿ.ವಿ.ಚಾನಲ್ಗಳು, ಫೇಸ್ಬುಕ್, ವಾಟ್ಸ್ ಆ್ಯಪ್, ಟ್ವಿಟರ್, ಇನ್ಸಾ ಗ್ರಾಂ, ಯೂಟ್ಯೂಬ್ಗಳಲ್ಲಿ ಅವಹೇಳನಕಾರಿಯಾಗಿ ಪ್ರಸಾರವಾಗಿರುವ ಅಥವಾ ಹಂಚಿಕೊಂಡಿರುವ ವಿಚಾರಗಳನ್ನು ಅಳಿಸಿ ಹಾಕುವಂತೆ ಆದೇಶ ಮಾಡಲಾಗಿತ್ತು.