‘ಆಯಪ್’ ಹೊಸ ಆಯುಧ! ಮನೆಗೆ ಮನೆಗೆ ಕ್ಯೂಆರ್ ಸ್ಕ್ಯಾನ್ ಮೂಲಕ ಕಸ ಸ್ಮಾರ್ಟ್ ನಿಗಾವಹಣೆ

ಮಹಾನಗರ: ಮನೆ ಮನೆಗೆ ಕಸ ಸಂಗ್ರಹಕ್ಕಾಗಿ ತೆರಳುವ ಕಾರ್ಮಿಕರು ಕಸ ಪ್ರತ್ಯೇಕಿಸದ ಮನೆಗಳನ್ನು ಗುರುತಿಸಿ ಆಯಪ್ಗೆ ಫೋಟೋ ಅಪ್ಲೋಡ್ ಮಾಡುವ ಪ್ರಕ್ರಿಯೆ ನಗರದಲ್ಲಿ ಈಗಾಗಲೇ ಆರಂಭಗೊಂಡಿದೆ ಎಂದು ಮನಪಾ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆಯಪ್ ಮೂಲಕ ಮನೆ ಸಮೀಪ ಹಾಕಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದು, ಆ ಮೂಲಕ ಕಸ ಸಂಗ್ರಹಣೆ ಆಗಿದೆ ಎನ್ನುವ ಮಾಹಿತಿ ಪಡೆಯುವುದು ಸಾಧ್ಯವಾಗಲಿದೆ.
ಅಲ್ಲದೆ ಕಸ ವಿಂಗಡನೆ ಮಾಡದ ಮನೆಗಳಿಗೆ ಆರಂಭಿಕ ಎಚ್ಚರಿಕೆಗಳನ್ನು ನೀಡಿ, ಇದೇ ಪರಿಪಾಠ ಮುಂದುವರಿದರೆ ದಂಡ ವಿಧಿಸಲಾಗುವುದು ಎಂದರು.
ಕಳೆದ ಒಂದು ವಾರದಿಂದ ಈ ಆಯಪ್ ಪ್ರಾಯೋಗಿಕವಾಗಿ ಕಾರ್ಯ ನಿರ್ವಹಣೆ ಆಗುತ್ತಿದೆ, ಎಲ್ಲ ಕಡೆಯೂ ಕ್ಯೂಆರ್ ಕೋಡ್ ಇಲ್ಲ, ಅದನ್ನೂ ಹಾಕುವ ಕೆಲಸ ನಡೆಯಲಿದೆ ಎಂದರು.
ರಸ್ತೆ ಬದಿ ವ್ಯಾಪಾರಿಗಳ ಸ್ಪಂದನೆ
ರಸ್ತೆ ಬದಿ ಆಹಾರ ವಸ್ತು ಮಾರಾಟ ಮಾಡುವವರು, ಕ್ಯಾಂಟೀನ್ನವರು ಅಲ್ಲಲ್ಲೇ ಕಸ ಬಿಟ್ಟು ಹೋಗುತ್ತಿದ್ದರು, ಅವರ ಮನವೊಲಿಸಿ, ತಮ್ಮ ಕಸವನ್ನು ಕಟ್ಟಿ ತಮ್ಮ ಮನೆಗೇ ಕೊಂಡೊಯ್ಯಬೇಕು, ಅಲ್ಲಿ ಕಸ ಸಂಗ್ರಾಹಕರಿಗೆ ಕೊಡಬೇಕು ಎಂದು ತಿಳಿಸಲಾಗಿದೆ, ಇದನ್ನು ಅವರೂ ಪಾಲಿಸತೊಡಗಿದ್ದಾರೆ, ಇದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಸ್ಯಾನಿಟರಿ ತ್ಯಾಜ್ಯವನ್ನು ಹಿಂದೆ ವಾರಕ್ಕೊಮ್ಮೆ ಕೊಂಡೊಯ್ಯುವುದು ಸಮಸ್ಯೆಯಾಗುತ್ತಿತ್ತು, ಈಗ ಅದನ್ನು ದಿನವೂ ಸಂಗ್ರಹಿಸುವಂತೆ ಸೂಚನೆ ಕೊಡಲಾಗಿದೆ.
ಕಸ ಪ್ರತ್ಯೇಕಿಸದೆ ಕೊಡುವ ಹೋಟೆಲ್ಗಳ ಮೇಲೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದೆ, ನಿನ್ನೆ ಒಂದೇ ದಿನ 32,500 ರೂ. ದಂಡ ವಿಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.