ರಾಜರಾಜೇಶ್ವರಿನಗರದಲ್ಲಿ ಪತ್ನಿ ಕೊಲೆಗೆ ಯತ್ನ: ಪತಿ ಅರೆಸ್ಟ್!

ಬೆಂಗಳೂರು: ಪತ್ನಿ ಕೊಲೆಗೆ ಯತ್ನಿಸಿದ್ದ ಪತಿಯನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮ್ ನರೇಶ್ ಬಂಧಿತ.
ಉತ್ತರ ಪ್ರದೇಶದ ರಾಮ್ ನರೇಶ್ 15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಪತ್ನಿ ಗಾಯತ್ರಿ, ಪುತ್ರಿ ಜತೆಗೆ ಆರ್.ಆರ್.ನಗರದ ಕೃಷ್ಣಪ್ಪ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ನೆಲಸಿದ್ದ.
ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಜುಲೈ 13ರಂದು ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
‘ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ರಾಮ್ ಕೆಲಸ ಮಾಡುತ್ತಿದ್ದ. ಮದ್ಯವ್ಯಸನಿ ಆಗಿದ್ದ ಆರೋಪಿ ಇತ್ತೀಚೆಗೆ ಕೆಲಸ ಬಿಟ್ಟಿದ್ದ. ಮದ್ಯಸೇವನೆಗೆ ಹಣ ನೀಡುವಂತೆ ಪತ್ನಿಯ ಬಳಿ ಪೀಡಿಸುತ್ತಿದ್ದ. ಅಲ್ಲದೇ ಪತ್ನಿಯ ಮೇಲೆ ಅನುಮಾನಗೊಂಡು ನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದ. ಜುಲೈ 13ರಂದು ಮನೆಯಲ್ಲಿದ್ದ ಪುತ್ರಿಯನ್ನು ಅಂಗಡಿಗೆ ಕಳುಹಿಸಿ, ಪತ್ನಿ ಮಲಗಿರುವಾಗಲೇ ಸೀರೆಯಿಂದ ಕುಣಿಕೆ ಸಿದ್ಧಪಡಿಸಿ, ನೇಣು ಬಿಗಿದು ಕೊಲೆಗೆ ಯತ್ನಿಸಿದ್ದ’ ಎಂದು ಪೊಲೀಸರು ಹೇಳಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪತ್ನಿ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
