ʻಜನ ಸುನ್ವಿ’ ಸಂದರ್ಭದಲ್ಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ – ವ್ಯಕ್ತಿ ವಶಕ್ಕೆ, ಮಾನಸಿಕ ಅಸ್ವಸ್ಥತೆ ಆರೋಪ

ನವದೆಹಲಿ: ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ಘಟನೆ ಇದೀಗ ರಾಷ್ಟ್ರ ರಾಜಧಾನಿಯಾದ್ಯಂತ ಸದ್ದು ಮಾಡುತ್ತಿದೆ. ಈ ನಡುವೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿದ್ದು, ಮೇಲ್ನೋಟಕ್ಕೆ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನೆಂದು ತಿಳಿದುಬಂದಿದೆ.

ಸಿವಿಲ್ ಲೈನ್ಸ್ ಬಳಿಯಿರುವ ತಮ್ಮ ನಿವಾಸದಲ್ಲಿ ʻಜನ್ ಸುನ್ವಿ’ ಕಾರ್ಯಕ್ರಮದ ವೇಳೆ ಸಿಎಂ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನ 41 ವರ್ಷದ ರಾಜೇಶ್ ಭಾಯಿ ಖಿಮ್ಜಿ ಭಾಯಿ ಸಕರಿಯಾ ಎಂದು ಗುರುತಿಸಲಾಗಿದೆ. ಈತ ತಿಹಾರ್ ಜೈಲಿನಲ್ಲಿದ್ದ ತನ್ನ ಸಂಬಂಧಿಕರೊಬ್ಬರನ್ನ ಬಿಡುಗಡೆ ಮಾಡಿಸುವಂತೆ ಸಿಎಂಗೆ ಮನವಿ ಕೊಡಲು ಬಂದಿದ್ದ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಗುಜರಾತ್ನ ರಾಜ್ಕೋಟ್ ನಿವಾಸಿಯಾಗಿರುವ ಸಕಾರಿಯಾ ಇಂದು ಬೆಳಗ್ಗೆ 7:30ಕ್ಕೆ ದೆಹಲಿ ಮುಖ್ಯಮಂತ್ರಿಗಳ ಕಚೇರಿ ಕೆಲಸಕ್ಕೆ ಬಂದಿದ್ದ. ತನ್ನ ಸಂಬಂಧಿಕರೊಬ್ಬರು ತಿಹಾರ್ ಜೈಲಿನಲ್ಲಿರುವುದರಿಂದ ಅವರನ್ನ ಬಿಡುಗಡೆ ಮಾಡಿಸುವಂತೆ ಮನವಿ ಮಾಡಲು ಬಂದಿದ್ದ. ನ್ಯಾಯಾಲಯಕ್ಕೆ ಸಂಬಂಧಪಟ್ಟ ದಾಖಲೆಯನ್ನೂ ತಂದಿದ್ದ. ಮನವಿ ಕೊಡಲು ಬಂದಾಗ ಕೂಡಾಗಿ ಏಕಾಏಕಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮಾನಸಿಕ ಅಸ್ವಸ್ಥನೆಂಬ ಶಂಕೆ
ಈ ಬೆನ್ನಲ್ಲೇ ಸಕಾರಿಯಾ ತಾಯಿಯನ್ನ ರಾಜ್ಕೋಟ್ ಪೊಲೀಸರು ವಿಚಾರಣೆ ನಡೆಸಿದ್ದು, ಮೇಲ್ನೋಟಕ್ಕೆ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನೆಂದು ಕಂಡುಬಂದಿದೆ.
ಸಕಾರಿಯ ತಾಯಿ ಮಾತನಾಡಿ, ತಮ್ಮ ಮಗ ದೆಹಲಿ ಮುಖ್ಯಮಂತ್ರಿಯ ನಿವಾಸಕ್ಕೆ ಹೋಗ್ತಾನೆ ಅನ್ನೋದು ಗೊತ್ತಿರಲಿಲ್ಲ. ಆತ ಪ್ರಾಣಿ ಪ್ರಿಯ, ಬೀದಿ ನಾಯಿಗಳಿಗೆ ಸಂಬಂಧಿಸಿದ ತೀರ್ಪಿನ ಕುರಿತು ದೆಹಲಿ ಕೋರ್ಟ್ಗೆ ಹೋಗ್ತಾನೆ ಅಂದುಕೊಂಡಿದ್ದೆ. ಏಕೆಂದರೆ ಈ ಹಿಂದೆಯೋ ಒಬ್ಬನೇ ದೆಹಲಿಗೆ ಹೋಗಿದ್ದ ಎಂದು ಹೇಳಿದ್ದಾರಲ್ಲದೇ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ
ಏನಿದು ಪ್ರಕರಣ?
ದೆಹಲಿಯ ಸಿವಿಲ್ ಲೈನ್ಸ್ ಬಳಿಯಿರುವ ತಮ್ಮ ನಿವಾಸದಲ್ಲಿ ʻಜನ್ ಸುನ್ವಿ’ (ಜನ ಸಂದರ್ಶನ) ಕಾರ್ಯಕ್ರಮದ ವೇಳೆ 41 ವರ್ಷದ ವ್ಯಕ್ತಿ ದೆಹಲಿ ಸಿಎಂ ಮೇಲೆ ಹಲ್ಲೆ ನಡೆಸಿದ್ದ, ಕೂಡಲೇ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
ಜನ ಸಂದರ್ಶನಕ್ಕೆ ಸಿಎಂ ಆಗಮಿಸಿದ್ದ ವೇಳೆ, ವ್ಯಕ್ತಿ ಕೆಲವು ಕಾಗದ ಪತ್ರಗಳೊಂದಿಗೆ ಬಂದಿದ್ದ. ಮನವಿ ಕೊಡುವ ನೆಪದಲ್ಲಿ ಬಂದು ಏಕಾಏಕಿ ಕೂಗಾಡಿ, ಕಪಾಳಮೋಕ್ಷ ಮಾಡಿದ್ದ.
