ಈದ್ ಪ್ರಾರ್ಥನೆ ವೇಳೆ ಜೇನುನೊಣಗಳ ದಾಳಿ; ದಿಕ್ಕಾಪಾಲಾಗಿ ಓಡಿದ ಭಕ್ತರು, ಹಲವರಿಗೆ ಗಾಯ

ಆನಗೋಡು ಗ್ರಾಮದಲ್ಲಿ ಇಂದು ಸಂಭ್ರಮದ ರಂಜಾನ್ ಪ್ರಾರ್ಥನೆ ವೇಳೆ ನಡೆದ ಈ ಅನಿರೀಕ್ಷಿತ ಘಟನೆಯಿಂದ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಸಲ್ಲಿಸುತ್ತಿದ್ದ ಮುಸಲ್ಮಾನ ಬಾಂಧವರು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಪಾಲಾಗಿ ಓಡಿದರು. ಆದರೆ ಅಷ್ಟೊತ್ತಿಗೆ ಸುಮಾರು ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡರು.

ಈದ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ, ಆತಂಕದ ವಾತಾವರಣ
ದಾವಣಗೆರೆ ತಾಲೂಕಿನ ಆನಗೋಡು ಈದ್ಗಾ ಮೈದಾನದಲ್ಲಿ ಇಂದು ಬೆಳಗ್ಗೆ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಅಂಗವಾಗಿ ಸಾಮೂಹಿಕ ನಮಾಜ್ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನುಗಳು ಗುಂಪಿನ ಮೇಲೆ ದಾಳಿ ಮಾಡಿವೆ. ದಾಳಿಯಿಂದಾಗಿ ಮೈದಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾಸ್ಪತ್ರೆಗೆ ಕಾಂಗ್ರೆಸ್ ಶಾಸಕ ಕೆಎಸ್ ಬಸವಂತಪ್ಪ ಭೇಟಿ
ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ವಿಷಯ ತಿಳಿಯುತ್ತಿದ್ದಂತೆಯೇ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ಅವರು ದಾವಣಗೆರೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಗಾಯಾಳುಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಶಾಸಕರು, ಸಂತ್ರಸ್ತರಿಗೆ ಧೈರ್ಯ ತುಂಬಿದರು ಹಾಗೂ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.