ರಿಕ್ಕಿ ರೈ ಮೇಲೆ ದಾಳಿ ಪ್ರಕರಣ – ಅನುರಾಧಗೆ ತಾತ್ಕಾಲಿಕ ರಿಲೀಫ್, ತನಿಖೆಯಲ್ಲಿ ಬಿಗ್ ಟ್ವಿಸ್ಟ್

ಬೆಂಗಳೂರು : ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿ ಅನುರಾಧ ಮುತ್ತಪ್ಪ ರೈಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಪೊಲೀಸರ ತನಿಖೆಯಲ್ಲಿ ಹೊಸ ತಿರುವುಗಳು ಕಂಡುಬಂದಿದ್ದು, ರಿಕ್ಕಿ ರೈ ಸ್ವಯಂ ದಾಳಿ ಮಾಡಿಸಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಗನ್ಮ್ಯಾನ್ ವಿಠ್ಠಲ್ ಮೇಲೆ ಪೊಲೀಸರ ಅನುಮಾನ ಹೆಚ್ಚಾಗಿದೆ.
ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅನುರಾಧ ಮುತ್ತಪ್ಪ ರೈಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಿಕ್ಕಿ ರೈ ಕೊಲೆ ಯತ್ನ ಪ್ರಕರಣದಲ್ಲಿ 2ನೇ ಆರೋಪಿ ಸ್ಥಾನದಲ್ಲಿರುವ ಅನುರಾಧ ವಿದೇಶದಲ್ಲಿದ್ದು, ಅಲ್ಲಿಂದಲೇ ತಮ್ಮ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಅನುರಾಧ ಮುತ್ತಪ್ಪ ರೈಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ. ಪ್ರಕರಣ ರದ್ದು ಕೋರಿ ಅನುರಾಧ ವಕೀಲರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅನುರಾಧ ಅಮೆರಿಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ತಾಳೆಯಾಗದ ಹೇಳಿಕೆಗಳು!
ಇನ್ನು ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣಕ್ಕೆ ಬಿಗ್ ಟ್ಬಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ಅಂತಿಮ ಹಂತಕ್ಕೆ ತಲುಪಿದೆ. ರಿಕ್ಕಿ ರೈ ಮೇಲೆಯೇ ಪೊಲೀಸರಿಗೆ ಅನುಮಾನ ಹೆಚ್ಚಾಗುತ್ತಿದೆ. ಮನೆ ಕೆಲಸದವರು, ಗನ್ ಮ್ಯಾನ್ ಗಳು, ಸೆಕ್ಯುರಿಟಿ, ಮ್ಯಾನೇಜರ್ ರಿಂದ ವಿಭಿನ್ನ ಹೇಳಿಕೆ ಹಿನ್ನೆಲೆ ಈ ಅನುಮಾನ ಮೂಡಿದೆ. ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಕ್ಕೂ ವಿಚಾರಣಾಧೀನರ ಹೇಳಿಕೆಗೂ ತಾಳೆಯಾಗದ ಹಿನ್ನೆಲೆ ತಮ್ಮದೇ ಆಯಾಮದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.