ಎಟಿಎಂ ದರೋಡೆ ಪ್ರಕರಣ: ಎಸ್ಬಿಐಯಿಂದ ಲಕ್ಷಾಂತರ ರೂ. ದೋಚಿ ದುಷ್ಕರ್ಮಿಗಳು ಪರಾರಿ

ಕೋಲಾರ: ಇತ್ತೀಚೆಗೆ ಕರ್ನಾಟಕದಲ್ಲಿ ಬ್ಯಾಂಕ್ ಹಾಗೂ ಎಟಿಎಂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದರ್, ಕಲಬುರಗಿ, ಮಂಗಳೂರು ಸೇರಿದಂತೆ ಹಲವೆಡೆ ಬ್ಯಾಂಕ್ ಹಾಗೂ ಎಟಿಎಂನಲ್ಲಿ ಕಳ್ಳತನವಾಗಿದ್ದು, ಈ ಪೈಕಿ ಪೊಲೀಸರು, ಕೆಲ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು, ಕೆಲ ಕಳ್ಳರನ್ನು ಹಿಡಿಯಲು ಇದುವರೆಗೂ ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ಇದೀಗ ಕೋಲಾರದಲ್ಲಿ ಎಟಿಎಂ ದರೋಡೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೋಲಾರ ನಗರದ ಎಸ್ಬಿಐನಲ್ಲಿ ದರೋಡೆಯಾಗಿದೆ. ಕೋಲಾರ ನಗರದ ಗಲ್ ಪೇಟೆ ಪೋಲೀಸ್ ಠಾಣೆ ಸಮೀಪದ ಸಹಕಾರ ನಗರದಲ್ಲಿರುವ ಎಸ್ಬಿಐ ಎಟಿಎಂನಲ್ಲಿ ಕಳ್ಳತನವಾಗಿದ್ದು, ಎಟಿಎಂ ಮಷಿನ್ ನಲ್ಲಿದ್ದ ಸುಮಾರು 27 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನದ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್ ಸೇರಿದಂತೆ ಬೆರಳಚ್ವು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.