ತುಮಕೂರಿನಲ್ಲಿ ಮತ್ತೊಂದು ಹೃದಯಾಘಾತ ದುರಂತ: 23 ವರ್ಷದ ಯುವಕ ಸಾವು, ಮದುವೆಯಾಗಿ 22 ದಿನಗಳಷ್ಟೇ ಆಗಿತ್ತು!

ತುಮಕೂರು: ಕರ್ನಾಟಕದಲ್ಲಿ ಹೃದಯಾಘಾತ ಪ್ರಕರಣಗಳು ದೊಡ್ಡ ಚಿಂತೆಗೆ ಕಾರಣವಾಗಿದೆ. ಹಾಸನದಲ್ಲಿ (Hassan) ಸಾಲು ಸಾಲು ಪ್ರಕರಣಗಳು ವರದಿಯಾಗಿದೆ. ಇಂದು ರಾಜ್ಯದಲ್ಲಿ ಮತ್ತೊಂದು ಹೃದಯಾಘಾತ ಪ್ರಕರಣ ದಾಖಲಾಗಿದ್ದು, 23 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ.

ಲವ್ ಮ್ಯಾರೇಜ್ ಆಗಿದ್ದ ಯುವಕ
ತುಮಕೂರಿನ ಗುಬ್ಬಿ ತಾಲೂಕಿನ ಹೊಸಕೆರೆ ಬಳಿಯ ಅರೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಿದ್ದೇಶ್ ಎಂಬ 23 ವರ್ಷದ ಯುವಕ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆ. ಚಿಕ್ಕನಾಯಕನಹಳ್ಳಿಯ ತನ್ನ ಅಕ್ಕನ ಮನೆಯಲ್ಲಿ ಊಟ ಮಾಡಿ ಬರುವಾಗ ಈ ದುರಂತ ಉಂಟಾಗಿದ್ದು, ಯುವಕ ಕೇವಲ 22 ದಿನಗಳ ಹಿಂದೆಯಷ್ಟೇ ಲವ್ ಮ್ಯಾರೇಜ್ ಆಗಿದ್ದು, ಇದೀಗ ಮಸಣ ಸೇರಿದ್ದಾನೆ. ಊಟ ಮುಗಿಸಿ ಬರುತ್ತಿದ್ದಾಗ ಎದೆನೋವು ಕಾಣಿಸಿದ್ದು, ಆಸ್ಪತ್ರೆಗೆ ಸೇರಿಸುವ ಮೊದಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ವರದಿ ನೀಡಿದ್ದ ಸಮಿತಿ
ರಾಜ್ಯದಲ್ಲಿ ಯಾವಾಗ ಹೃದಯಾಘಾತ ಪ್ರಕರಣಗಳು ಹೆಚ್ಚಾಯಿತೋ ಆಗ ಸರ್ಕಾರ ಈ ಬಗ್ಗೆ ತನಿಖೆ ಮಾಡಲು ಸಮಿತಿ ರಚನೆ ಮಾಡಿತ್ತು. ಈ ಸಮಿತಿ ತನ್ನ ವರದಿ ನೀಡಿದ್ದು, ಬೊಜ್ಜು, ಜೀವನಶೈಲಿ ಹಾಗೂ ಒತ್ತಡ ಈ ಹೃದಯಾಘಾತಕ್ಕೆ ಮುಖ್ಯ ಕಾರಣ ಎಂದು ತಿಳಿಸಿದೆ. ಹೃದಯಾಘಾತ ಪ್ರಕರಣಗಳು ಹೆಚ್ಚಾದಾಗ ಕೋವಿಡ್ ಲಸಿಕೆಯಿಂದ ಆಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಸಮಿತಿಯ ವರದಿ ಪ್ರಕಾರ ಕೋವಿಡ್ ಲಸಿಕೆ ಕಾರಣವಲ್ಲ. ಇತ್ತೀಚಿನ ದಿನಗಳಲಿ ಜೀವನ ಬರೀ ಒತ್ತಡದಿಂದ ತುಂಬಿದೆ. ಈ ಒತ್ತಡ ಜೀವವನ್ನೇ ಬಲಿ ಪಡೆಯುತ್ತಿದೆ. ಹಾಗಾಗಿ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಮಿತಿ ಹೇಳಿದೆ.