ಪಾಲಕ್ ಪನೀರ್ ವಾಸನೆಗೆ ಕಿರಿಕಿರಿ; ಅಮೆರಿಕ ವಿಶ್ವವಿದ್ಯಾಲಯದ ವಿರುದ್ಧ 1.8 ಕೋಟಿ ರೂ. ಗೆದ್ದ ಭಾರತೀಯ ವಿದ್ಯಾರ್ಥಿಗಳು!

ವಾಷಿಂಗ್ಟನ್: ಭಾರತೀಯ ಆಹಾರ ತಿನ್ನುವ ವಿಚಾರವಾಗಿ ತಾರತಮ್ಯ ಎದುರಿಸಿದ ನಂತರ ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾನಿಲಯದ ಇಬ್ಬರು ಭಾರತೀಯ PHD ವಿದ್ಯಾರ್ಥಿಗಳು ಕಾನೂನು ಹೋರಾಟದಲ್ಲಿ ಗೆಲ್ಲುವ ಮೂಲಕ $200,000 (ಅಂದಾಜು 1.8 ಕೋಟಿ) ಮೌಲ್ಯದ ಪರಿಹಾರವನ್ನು ಗಳಿಸಿದ್ದಾರೆ.

ಇದು 2023 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ. ಆದಿತ್ಯ ಪ್ರಕಾಶ್ ಅವರು ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ ಪಡೆಯುತ್ತಿದ್ದರು. ಸೆಪ್ಟೆಂಬರ್ 5, 2023 ರಂದು ವಿಶ್ವವಿದ್ಯಾನಿಲಯಕ್ಕೆ ಸೇರಿದ ಸುಮಾರು ಒಂದು ವರ್ಷದ ನಂತರ, ಪ್ರಕಾಶ್ ಅವರು ಡಿಪಾರ್ಟ್ಮೆಂಟ್ನಲ್ಲಿ ಮೈಕ್ರೋವೇವ್ನಲ್ಲಿ ಪಾಲಕ್ ಪನೀರ್ ಬಿಸಿಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಮಹಿಳಾ ಸಿಬ್ಬಂದಿಯೊಬ್ಬರು, ವಾಸನೆ ಬಗ್ಗೆ ದೂರು ನೀಡಿದ್ದು, ಆಹಾರವನ್ನು ಬಿಸಿಮಾಡಲು ಮೈಕ್ರೋವೇವ್ ಅನ್ನು ಬಳಸಬೇಡಿ ಎಂದು ಹೇಳಿದ್ದಾಗಿ ಪ್ರಕಾಶ್ ಹೇಳಿದ್ದಾರೆ.
ಅಷ್ಟಕ್ಕೂ ಏನಾಯಿತು?
ತುಂಬಾ ವಾಸನೆ ಬರುತಿತ್ತು ಎಂದು ಆಕೆ ಹೇಳಿದ್ದಾಳೆ. ಆಗ ಇದು ಸಾಮಾನ್ಯ ಸ್ಥಳವಾಗಿದ್ದು, ಅದನ್ನು ಬಳಸಿಕೊಳ್ಳುವ ಹಕ್ಕಿದೆ ಎಂದು ಪ್ರಕಾಶ ವಾದಿಸಿದ್ದು, “ನನ್ನ ಆಹಾರ ನನ್ನ ಹೆಮ್ಮೆ. ಒಳ್ಳೆಯ ಅಥವಾ ಕೆಟ್ಟ ವಾಸನೆಯ ಬಗ್ಗೆ ಕಲ್ಪನೆಗಳು ಸಾಂಸ್ಕೃತಿಕವಾಗಿ ನಿರ್ಧರಿಸಲ್ಪಡುತ್ತವೆ ಎಂದಿದ್ದಾರೆ. ಹೆಚ್ಚಿನ ವಾಸನೆಯಿಂದಾಗಿ ಬ್ರೊಕೊಲಿಯನ್ನು ಬಿಸಿಮಾಡುವುದನ್ನು ಸಹ ನಿಷೇಧಿಸಲಾಗಿದೆ ಎಂದು ಅಲ್ಲಿಯೇ ಇದ್ದ ಸಿಬ್ಬಂದಿಯೊಬ್ಬರು ಸಹ ಹೇಳಿದ್ದಾರೆ. ಆಗ ಮಾತಿನ ಚಕಮಕಿ ನಡೆದಿದ್ದು, ಪ್ರಕಾಶ್ ಅವರ ಪಾರ್ಟರ್ ಉರ್ಮಿ ಭಟ್ಟಾಚಾರ್ಯ ಬೆಂಬಲಕ್ಕೆ ನಿಂತಿದ್ದಾರೆ. ಕಿಚನ್ ವಿಚಾರದಲ್ಲಿ ಬಲವಾಗಿ ನಿಂತಿದ್ದಕ್ಕಾಗಿ ತಮ್ಮನ್ನು ತಾರತಮ್ಯಕ್ಕೆ ಒಳಪಡಿಸಲಾಗಿದೆ ಎಂದು ದಂಪತಿಗಳು ಆರೋಪಿಸಿದ್ದಾರೆ. ಸಿಬ್ಬಂದಿಗೆ ಅಸುರಕ್ಷಿತ ಆರೋಪದ ಮೇಲೆ ಹಿರಿಯ ಅಧ್ಯಾಪಕರೊಂದಿಗೆ ಪದೇ ಪದೇ ಸಭೆ ನಡೆಸಲಾಗಿತ್ತು ಎಂದು ಪ್ರಕಾಶ್ ಹೇಳಿದ್ದಾರೆ.

ವಿವರಣೆ ನೀಡದೆ ಕೆಲಸದಿಂದ ವಜಾ:
ಪ್ರಕಾಶ್ ಅವರನ್ನು ಬೆಂಬಲಿಸಿದ್ದಕ್ಕಾಗಿ ವಿವರಣೆ ನೀಡದೆ ಬೋಧಕ ಸಹಾಯಕ (teaching assistant)ಸ್ಥಾನದಿಂದ ಭಟ್ಟಾಚಾರ್ಯ ಅವರನ್ನು ವಜಾಗೊಳಿಸಲಾಗಿತ್ತು. ಪಿಹೆಚ್ ಡಿ ಗೆ ಹೋಗುವ ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿಗಳನ್ನು ನೀಡಲು ಇಲಾಖೆ ನಿರಾಕರಿಸಿತ್ತು. ಹೀಗಾಗಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೇವು ಎಂದು ಪ್ರಕಾಶ್ ತಿಳಿಸಿದ್ದಾರೆ.
ಕೋರ್ಟ್ ನಲ್ಲಿ ಕಾನೂನು ಹೋರಾಟ: ಕಿಚನ್ ವಿವಾದದ ನಂತರ ಪಿಹೆಚ್ ಡಿ ಮಾಡ ಬಯಸುವ ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿಗಳನ್ನು ತಡೆಹಿಡಿಯಲಾಗಿದ್ದು, ಅವರ ಶೈಕ್ಷಣಿಕ ಪ್ರಗತಿಗೆ ಅಡ್ಡಿಯನ್ನುಂಟು ಮಾಡಲಾಗುತ್ತಿದೆ ಎಂದು ಪ್ರಕಾಶ್ ಹಾಗೂ ಭಟ್ಟಾಚಾರ್ಯ ಅವರು ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ ಫಾರ್ ಕೊಲೊರಾಡೊದಲ್ಲಿ ಮೊಕದ್ದಮೆ ದಾಖಲಿಸಿದ್ದರು.

ಅವರ ಸಾಂಸ್ಕೃತಿಕ ಆಹಾರಕ್ಕೆ ವಿಶ್ವವಿದ್ಯಾನಿಲಯದ ಪ್ರತಿಕ್ರಿಯೆಯು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಿರುದ್ಧ “ವ್ಯವಸ್ಥಿತ ಪಕ್ಷಪಾತ” ದ ಅಭಿವ್ಯಕ್ತಿಯಾಗಿದೆ ಎಂದು ವಾದಿಸಿದ್ದರು. ಸೆಪ್ಟೆಂಬರ್ 2025 ರಲ್ಲಿ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾನಿಲಯ ಪ್ರಕಾಶ್ ಮತ್ತು ಭಟ್ಟಾಚಾರ್ಯ ಅವರಿಗೆ $ 200,000 ಪಾವತಿಸಿ, ಪ್ರಕರಣವನ್ನು ಇತ್ಯರ್ಥಪಡಿಸಿ, ಅವರಿಗೆ ಮಾಸ್ಟರ್ ಡಿಗ್ರಿ ನೀಡಿದೆ. ಆದಾಗ್ಯೂ, ಇಬ್ಬರನ್ನು ವಿಶ್ವವಿದ್ಯಾನಿಲಯದಲ್ಲಿ ಭವಿಷ್ಯದ ದಾಖಲಾತಿ ಅಥವಾ ಉದ್ಯೋಗದಿಂದ ನಿರ್ಬಂಧಿಸಲಾಗಿದೆ.
ಇತ್ತೀಚೆಗೆ ಈ ಘಟನೆ ಕುರಿತು ಇನ್ಸಾಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಭಟ್ಟಚಾರ್ಯ, ವಿಶ್ವವಿದ್ಯಾಲಯದ ವಿರುದ್ಧ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿರುವುದಾಗಿ ಹೇಳಿದ್ದಾರೆ. “ಈ ವರ್ಷ ನನಗೆ ಬೇಕಾದುದನ್ನು ತಿನ್ನುವ ಮತ್ತು ಇಚ್ಛೆಯಂತೆ ಪ್ರತಿಭಟಿಸುವ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದೇನೆ . ನನ್ನ ಚರ್ಮದ ಬಣ್ಣ, ಜನಾಂಗೀಯ ವಿಚಾರಕ್ಕೆ ಅಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಆಹಾರ ವಿಚಾರದಲ್ಲಿ ಈ ರೀತಿ ತಾರತಮ್ಯ ಮಾಡುವವರಿಗೆ ಇದೇ ರೀತಿಯ ಕ್ರಮ ಕೈಗೊಳ್ಳಬೇಕು. ಅನ್ಯಾಯಗಳಿಗೆ ಸುಮ್ಮನೆ ಕೂರಬಾರದು. ಉದ್ದೇಶಪೂರ್ವಕವಾಗಿ ಕೆಣಕುವವರ ವಿರುದ್ಧ ಮೌನವಾಗಿರುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.